ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹದಿನಾರನೆ ಬಜೆಟ್ ಮಂಡನೆ ಮಾಡಿದ್ದು ಯಾವ ಹೊಸ ಕ್ಷೇತ್ರಗಳಿಗೆ ಯಾವ ಪ್ರಮಾಣದಲ್ಲಿ ವಿಶೇಷ ಅನುದಾನ ನೀಡಲಾಗಿದೆ ಎನ್ನುವ ಸಂಪೂರ್ಣ ಮಾಹಿತಿ
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹದಿನಾರನೆ ಬಜೆಟ್ ಮಂಡನೆ ಮಾಡಿದ್ದು ಯಾವ ಹೊಸ ಕ್ಷೇತ್ರಗಳಿಗೆ ಯಾವ ಪ್ರಮಾಣದಲ್ಲಿ ವಿಶೇಷ ಅನುದಾನ ನೀಡಲಾಗಿದೆ ಎನ್ನುವ ಸಂಪೂರ್ಣ ಮಾಹಿತಿ
₹8 ಸಾವಿರ ಕೋಟಿಯ ಸಿಎಂ ಮೂಲಸೌಕರ್ಯ ಅಭಿವೃದ್ಧಿ ಯೋಜನೆ
ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ‘ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ’. ಈ ಮೂಲಕ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ರಸ್ತೆ, ಸಣ್ಣ ನೀರಾವರಿ ಹಾಗೂ ಮೂಲಸೌಕರ್ಯ ಒದಗಿಸಲು 8 ಸಾವಿರ ಕೋಟಿ ರು. ನಿಧಿ
ದೇವಾಲಯಗಳ ಸ್ಥಿರಾಸ್ತಿ
ದಾಖಲಿಗೆ ‘ಭೂ ವರಾಹ’
ದೇಗುಲಗಳ ಸ್ಥಿರಾಸ್ತಿ ದಾಖಲೀಕರಣಗೊಳಿಸಲು ‘ಭೂ- ವರಾಹ’ ಯೋಜನೆ. ರಾಜ್ಯದಲ್ಲಿ ಒತ್ತುವರಿಯಾಗಿರುವ 328 ದೇವಾಲಯ ಆಸ್ತಿ ಸಂರಕ್ಷಿಸಲು ಒತ್ತುವರಿ ತೆರವು
ಶ್ರವಣದೋಷಿಗಳಿಗೆ
‘ಶ್ರವಣ ಸಂಜೀವಿನಿ’
ಮಕ್ಕಳಲ್ಲಿನ ಶ್ರವಣದೋಷವನ್ನು ಆರಂಭದಲ್ಲೇ ಗುರುತಿಸಿ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಹಾಗೂ ಇಂಪ್ಲಾಂಟ್ಗಳ ಬಿಡಿಭಾಗಗಳ ನಿರ್ವಹಣೆ, ದುರಸ್ತಿ, ಬದಲಾವಣೆಗೆ ‘ಶ್ರವಣ ಸಂಜೀವಿನಿ’ ಸ್ಕೀಂ. ಇದಕ್ಕೆ 12 ಕೋಟಿ ರು. ನಿಧಿ.
‘ಜ್ಞಾನಸೇತು’ ಅಡಿ
ಗಣಿತ, ವಿಜ್ಞಾನ ಕಲಿಕೆ
ಖಾನ್ ಅಕಾಡೆಮಿ ಸಹಯೋಗದಲ್ಲಿ ‘ಜ್ಞಾನಸೇತು’ ಕಾರ್ಯಕ್ರಮ. ಸರ್ಕಾರಿ ಶಾಲೆಗಳ ಮಕ್ಕಳಿಗೆ ನಾವೀನ್ಯತೆ ಮೂಲಕ ವಿಜ್ಞಾನ, ಗಣಿತ ವಿಷಯಗಳ ಬೋಧನೆ. 5,000 ಶಾಲೆಗಳ 20 ಲಕ್ಷ ಮಕ್ಕಳು, 15 ಸಾವಿರ ಶಿಕ್ಷಕರಿಗೆ ಪ್ರಯೋಜನ.
ಹೊಸ ‘ಸಮಗ್ರ ಮಳೆ
ಆಶ್ರಿತ ಕೃಷಿ ನೀತಿ’
ಮಳೆ ಆಶ್ರಿತ ಶೇ.64ರಷ್ಟು ರೈತರ ಜೀವನೋಪಾಯ ಸುಧಾರಣೆಗೆ ಹೊಸ ‘ಸಮಗ್ರ ಮಳೆ ಆಶ್ರಿತ ಕೃಷಿ ನೀತಿ’. ಇದರಡಿ ಮಣ್ಣು ಪರೀಕ್ಷೆ, ಬೀಜ, ರಸಗೊಬ್ಬರ, ಸಸ್ಯ ಸಂರಕ್ಷಣಾ ಔಷಧ ಪರೀಕ್ಷೆಗೆ 58 ಲ್ಯಾಬ್ ಸ್ಥಾಪನೆ
ಕೌಶಲ್ಯ ತರಬೇತಿಗೆ
‘ಸ್ಕಿಲ್ ಅಟ್ ಸ್ಕೂಲ್’
ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ‘ಸ್ಕಿಲ್ ಅಟ್ ಸ್ಕೂಲ್’ ಕಾರ್ಯಕ್ರಮ ಘೋಷಣೆ. ಇದರಡಿ 7500 ವಿದ್ಯಾರ್ಥಿಗಳಿಗೆ 150 ಐಟಿಐ ಸಂಸ್ಥೆಗಳಲ್ಲಿ ತರಬೇತಿ
ಸರ್ಕಾರಿ ಶಾಲೆ ಮಕ್ಕಳಿಗೆ
‘ನನ್ನ ವೃತ್ತಿ, ನನ್ನ ಆಯ್ಕೆ’
ಸೂಕ್ತ ವೃತ್ತಿ ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ. ಸರ್ಕಾರಿ ಶಾಲಾ- ಕಾಲೇಜುಗಳಲ್ಲಿನ 2.30 ಲಕ್ಷ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಲು ‘ನನ್ನ ವೃತ್ತಿ, ನನ್ನ ಆಯ್ಕೆ’ ಕಾರ್ಯಕ್ರಮ
ಮಹಿಳಾ ಸಂಘಗಳಿಗೆ ‘ಅಕ್ಕ
ಕೋ-ಆಪರೇಟಿವ್ ಸೊಸೈಟಿ’
ಸ್ವಸಹಾಯ ಗುಂಪುಗಳ ಮಹಿಳೆಯರು ಜೀವನೋಪಾಯ ಚಟುವಟಿಕೆ ಕೈಗೊಳ್ಳುವುದಕ್ಕೆ ತ್ವರಿತ ಸಾಲ, ಆರ್ಥಿಕ ಅಗತ್ಯತೆಗಳ ಪೂರೈಕೆ, ಉಳಿತಾಯ ಉದ್ದೇಶಕ್ಕಾಗಿ ರಾಜ್ಯಮಟ್ಟದಲ್ಲಿ ‘ಅಕ್ಕ ಕೋ-ಆಪರೇಟಿವ್ ಸೊಐಟಿ‘ ಸ್ಥಾಪನೆ. ಗೃಹಲಕ್ಷ್ಮಿ ಯೋಜನೆಯ ಯಜಮಾನಿಯರಿಗೆ ಸ್ವಸಹಾಯ ಗುಂಪುಗಳ ಸದಸ್ಯತ್ವ. ಅವರು ಅಕ್ಕ ಸೊಸೈಟಿ ವ್ಯಾಪ್ತಿಗೆ
ಜಿಪಂ, ತಾಪಂ ಕಚೇರಿ
ಆವರಣದಲ್ಲಿ ‘ಅಕ್ಕ ಕೆಫೆ’
ಮಹಿಳಾ ಸ್ವಸಹಾಯ ಸಂಘಗಳ ಸಹಭಾಗಿತ್ವದಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಕಚೇರಿ ಆವರಣಗಳಲ್ಲಿ ಅಕ್ಕ ಕೆಫೆ ಮತ್ತು ಕ್ಯಾಂಟೀನ್ ಸ್ಥಾಪನೆ
ರಾಜ್ಯ, ಜಿಲ್ಲಾ ರಸ್ತೆಗಳಲ್ಲಿ
‘ಹಸಿರು ಪಥ’ ನಿರ್ಮಾಣ
ಗ್ರಾಮೀಣ ಪ್ರದೇಶಗಳಲ್ಲಿ ಹಾದು ಹೋಗುವ ರಾಜ್ಯ, ಜಿಲ್ಲಾ ರಸ್ತೆಗಳ 5000 ಕಿ.ಮೀ. ಬದಿಗಳನ್ನು ಉದ್ಯೋಗ ಖಾತ್ರಿಯಡಿ ಬೆಳೆಸಿ ಹಸಿರು ಪಥ ನಿರ್ಮಾಣ
ರೈತರ ಹೊಲಗಳ
ಸಂಪರ್ಕಕ್ಕೆ ‘ಕೃಷಿಪಥ’
ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಉದ್ಯೋಗ ಖಾತ್ರಿಯಡಿ ಹಂತಹಂತವಾಗಿ ಅಭಿವೃದ್ಧಿಪಡಿಸಲು ‘ಕೃಷಿ ಪಥ’ ಯೋಜನೆ ಜಾರಿ
ಅಲ್ಪಸಂಖ್ಯಾತರಿಗೆ ಸಿಎಂ 16 ರಸದೌತಣ
1. ಮುಸ್ಲಿಂ ಕಾಲೋನಿಗಳಿಗೆ ₹1000 ಕೋಟಿ
ಮುಖ್ಯಮಂತ್ರಿ ಅಲ್ಪಸಂಖ್ಯಾತ ಕಾಲೋನಿ ಯೋಜನೆಯಡಿ 1000 ಕೋಟಿ ರು. ಕ್ರಿಯಾ ಯೋಜನೆ. ಅಲ್ಪಸಂಖ್ಯಾತರ ಪ್ರದೇಶಗಳ ಅಭಿವೃದ್ಧಿಗೆ 2025-26ರಲ್ಲಿ ಚಾಲನೆಗೆ ಕ್ರಮ.
2. ಇಮಾಮರ ವೇತನ 6000 ರು.ಗೆ ಏರಿಕೆ
ಮಸೀದಿಗಳ ಇಮಾಂ, ಜೈನ ಅರ್ಚಕರು, ಸಿಖ್ ಮುಖ್ಯಗ್ರಂಥಿಗಳ ಮಾಸಿಕ ಗೌರವಧನ 6 ಸಾವಿರ ರು.ಗೆ ಏರಿಕೆ. ಸಿಖ್ ಸಹಾಯಕ ಧರ್ಮಗ್ರಂಥಿ, ಮೋಝಿನ್ಗಳ ಮಾಸಿಕ ಗೌರವಧನ 5 ಸಾವಿರ ರು.ಗೆ ಏರಿಕೆ
3. ಬಡ ಮುಸ್ಲಿಮರ ಮದುವೆಗೆ ₹50 ಸಾವಿರ
ಬಡ ಮುಸ್ಲಿಂ ಸಮುದಾಯದವರ ಸರಳ ವಿವಾಹ ಹಾಗೂ ಸ್ವಯಂಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಾಮೂಹಿಕ ವಿವಾಹ ಪ್ರೋತ್ಸಾಹಿಸಲು ಪ್ರತಿ ಜೋಡಿಗೆ 50 ಸಾವಿರ ರು. ನೆರವು
4. ಮುಸ್ಲಿಮರ ವಿದೇಶಿ ಶಿಷ್ಯವೇತನ ₹30 ಲಕ್ಷಕ್ಕೆ
ಮುಸ್ಲಿಂ ವಿದ್ಯಾರ್ಥಿಗಳ ವಿದೇಶಿ ಶಿಷ್ಯವೇತನ 20 ಲಕ್ಷ ರು.ನಿಂದ 30 ಲಕ್ಷ ರು.ಗೆ ಏರಿಕೆ. ಕೆಇಎ ಮುಖಾಂತರದ ವೃತ್ತಿಪರ ಕೋರ್ಸುಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ 5 ಲಕ್ಷ ರು. ಶುಲ್ಕ ಮಿತಿ. ಶೇ.50ರಷ್ಟು ಶುಲ್ಕ ಮರುಪಾವತಿ
5. ಮುಸ್ಲಿಂ ಹೆಣ್ಮಕ್ಕಳಿಗೆ ಆತ್ಮರಕ್ಷಣೆ ತರಬೇತಿ
ರಾಜ್ಯದ 169 ವಸತಿ ಶಾಲೆ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 25 ಸಾವಿರ ವಿದ್ಯಾರ್ಥಿನಿಯರಿಗೆ ಸ್ವಯಂರಕ್ಷಣಾ ತರಬೇತಿ. ಇದರ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಗೂ ವ್ಯಕ್ತಿ ಮಾರ್ಗದರ್ಶನಕ್ಕೆ ತರಬೇತಿ.
6. ವಕ್ಫ್ ಆಸ್ತಿ ರಕ್ಷಣೆಗೆ 150 ಕೋಟಿ ರು.
ವಕ್ಫ್ ಸಂಸ್ಥೆಗಳ ದುರಸ್ತಿ, ಜೀರ್ಣೋದ್ಧಾರ ಹಾಗೂ ಕಬರಸ್ತಾನಗಳ ಮೂಲಸೌಕರ್ಯಕ್ಕಾಗಿ ಹಾಗೂ ಆಸ್ತಿ ರಕ್ಷಣೆಗೆ 150 ಕೋಟಿ ರು. ಅನುದಾನ ಹಂಚಿಕೆ. ಖಾಲಿ ವಕ್ಫ್ ಜಾಗದಲ್ಲಿ 16 ಹೊಸ ಮಹಿಳಾ ಕಾಲೇಜು ನಿರ್ಮಾಣ
7. ಮುಸ್ಲಿಮರು ಹೆಚ್ಚಿರುವ ಪ್ರದೇಶದಲ್ಲಿ ಐಟಿಐ
ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶಗಳಲ್ಲಿನ ಐಟಿಐ ಕಾಲೇಜುಗಳಲ್ಲಿ ಹೊಸ ಕೋರ್ಸ್ ಹಾಗೂ ಹೆಚ್ಚುವರಿ ತರಗತಿ ಪ್ರಾರಂಭ. ಉಳ್ಳಾಲದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ವಸತಿ ಹಾಗೂ ಪಿಯು ಕಾಲೇಜು ಆರಂಭ.
8. ಆಜಾದ್ ಶಾಲೆಗಳು ಪಿಯುವರೆಗೆ ವಿಸ್ತರಣೆ
250 ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಲ್ಲಿ ಮುಂದಿನ ಹಂತದಲ್ಲಿ ಪಿಯುವರೆಗೂ ಶಿಕ್ಷಣ. ಇದಕ್ಕಾಗಿ 500 ಕೋಟಿ ರು. ಯೋಜನೆ. ಈಗ 100 ಕೋಟಿ ರು. ಹಂಚಿಕೆ
9. ಮದರಸಾಗಳಲ್ಲಿ ಕಂಪ್ಯೂಟರ್ ಶಿಕ್ಷಣ
ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಜತೆ ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೂರಲು ಸಜ್ಜಾಗುವಂತೆ ವಿದ್ಯಾರ್ಥಿಗಳಿಗೆ ತರಬೇತಿ
10. ಮುಸ್ಲಿಂ ಯುವಕರಿಗೆ ಸ್ಟಾರ್ಟಪ್ ಪ್ರೇರಣೆ
ಮುಸ್ಲಿಂ ಯುವಕ-ಯುವತಿಯರು ನವೋದ್ಯಮ ಸ್ಥಾಪಿಸಲು ಉತ್ತೇಜನ. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವತಿಯಿಂದ ಸ್ಟಾರ್ಟಪ್ ಸ್ಥಾಪನೆಗೆ ಪ್ರೇರಣೆ.
11. 100 ಉರ್ದು ಶಾಲೆ ಇನ್ನು ಆಜಾದ್ ಶಾಲೆ
ರಾಜ್ಯದ ಆಯ್ದ 100 ಉರ್ದು ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ ಮೌಲಾನಾ ಆಜಾದ್ ಶಾಲೆಗಳಾಗಿ ಉನ್ನತೀಕರಣ. ಇದಕ್ಕಾಗಿ 400 ಕೋಟಿ ರು. ಅಂದಾಜು. ಈಗ 100 ಕೋಟಿ ರು. ಹಂಚಿಕೆ.
12. ಮುಸ್ಲಿಂ ಮಕ್ಕಳಿಗೆ ವೃತ್ತಿಪರ ತರಬೇತಿ
ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲುಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ವೃತ್ತಿ ಮಾರ್ಗದರ್ಶನಕ್ಕೆ ತರಬೇತಿ. ಬೆಂಗಳೂರಿನ ಹಜ್ ಭವನದಲ್ಲಿ ಮುಕ್ತ ವಿವಿ ಕೇಂದ್ರ ತೆರೆದು ಡಿಗ್ರಿ/ಪಿಜಿ ಶಿಕ್ಷಣ
13. ಹಜ್ ಭವನದಲ್ಲಿ ಹೆಚ್ಚುವರಿ ಕಟ್ಟಡ
ಹಜ್ ಯಾತ್ರಿಕರು ಹಾಗೂ ಅವರ ಸಂಬಂಧಿಕರಿಗೆ ಅಗತ್ಯ ಸೌಲಭ್ಯ ಹಾಗೂ ಸೌಕರ್ಯ ಒದಗಿಸಲು ಬೆಂಗಳೂರಿನ ಹಜ್ ಭವನದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ.
14. ಮೊರಾರ್ಜಿ ಶಾಲೆಯಲ್ಲಿ ವಾಣಿಜ್ಯ ವಿಭಾಗ
ಪದವಿಪೂರ್ವ ಶಿಕ್ಷಣಕ್ಕಾಗಿ ಕಳೆದ ವರ್ಷ ಆರಂಭಿಸಲಾಗಿದ್ದ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಪದವಿಪೂರ್ವ ವಸತಿ ಶಾಲೆಗಳಲ್ಲಿ ಇನ್ನು ವಾಣಿಜ್ಯ ವಿಭಾಗ ಆರಂಭಕ್ಕೆ ಕ್ರಮ
15. ಬೌದ್ಧ, ಸಿಖ್, ಜೈನರಿಗೆ 100 ಕೋಟಿ ರು.
ಬೌದ್ಧ, ಸಿಖ್, ಜೈನರ ಅಭಿವೃದ್ಧಿಗೆ 100 ಕೋಟಿ ರು. ನಿಧಿ ಮೀಸಲು. ಬೆಂಗಳೂರಲ್ಲಿ ಬೌದ್ಧ ಅಧ್ಯಯನ ಅಕಾಡೆಮಿ ಸ್ಥಾಪನೆ. ಮಹಾಬೋಧಿ ಗ್ರಂಥಾಲಯ ಡಿಜಿಟಲೀಕರಣಕ್ಕೆ 1 ಕೋಟಿ ರು. ನಿಧಿ.
16. ಕ್ರೈಸ್ತರ ಅಭಿವೃದ್ಧಿಗೆ 250 ಕೋಟಿ ರು.
ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 250 ಕೋಟಿ ರು. ಹಂಚಿಕೆ. ಇದರ ಜತೆಗೆ ರಾಜ್ಯದಲ್ಲಿರುವ ಸಿಖ್ಖರ ಗುರುದ್ವಾರಗಳ ಅಭಿವೃದ್ಧಿಗೆ 2 ಕೋಟಿ ರು. ಅನುದಾನ.
ಬೆಂಗಳೂರಿಗೆ ಸಿಕ್ಕಿದ್ದೇನು?
- ಪ್ರತಿ ವರ್ಷ ನೀಡಲಾಗುತ್ತಿದ್ದ 3000 ಕೋಟಿ ರು. ಅನುದಾನ 7000 ಕೋಟಿ ರು.ಗೆ ಹೆಚ್ಚಳ
- ಈ ಅನುದಾನ ಬಳಸಿ ಬೃಹತ್ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನಗೊಳಿಸಲು ಹೊಸದಾಗಿ ವಿಶೇಷ ಉದ್ದೇಶಿತ ಸಂಸ್ಥೆ ಸ್ಥಾಪನೆ
- ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಸುರಂಗ ಮಾರ್ಗದ ಕಾರಿಡಾರ್ಗಳನ್ನು ಕೈಗೊಳ್ಳಲು ಸರ್ಕಾರದಿಂದ 19000 ಕೋಟಿ ರು. ಗ್ಯಾರಂಟಿ
- ರಾಜಧಾನಿಯ ರಸ್ತೆಗಳನ್ನು ಸಿಗ್ನಲ್ಮುಕ್ತಗೊಳಿಸಲು 8916 ಕೋಟಿ ರು. ವೆಚ್ಚದಲ್ಲಿ 40.5 ಕಿ.ಮೀ. ಉದ್ದದ ಡಬಲ್ ಡೆಕರ್ ಫ್ಲೈಓವರ್ ನಿರ್ಮಾಣ
- ರಾಜಕಾಲುವೆಯ ಬಫರ್ ಪ್ರದೇಶ ಬಳಸಿ 3000 ಕೋಟಿ ರು. ವೆಚ್ಚದಲ್ಲಿ 300 ಕಿ.ಮೀ. ಹೆಚ್ಚುವರಿ ರಸ್ತೆ ಜಾಲ ಅಭಿವೃದ್ಧಿ
- ಬಿಬಿಎಂಪಿ ವ್ಯಾಪ್ತಿಯಲ್ಲಿರುವ 460 ಕಿ.ಮೀ. ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆ ಜಾಲ 660 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ
- 120 ಕಿ.ಮೀ. ಉದ್ದದ ಫ್ಲೈಓವರ್ ಹಾಗೂ ಗ್ರೇಡ್ ಸಪರೇಟರ್ಗಳ ನಿರ್ಮಾಣ
- ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ 2024-25ನೇ ಸಾಲಿನಲ್ಲಿ ಅನುಮೋದನೆಗೊಂಡ 21 ಯೋಜನೆ 1800 ಕೋಟಿ ರು. ಮೊತ್ತದಲ್ಲಿ ಜಾರಿ
- ಬೆಂಗಳೂರನ್ನು ಅಂತಾರಾಷ್ಟ್ರೀಯ ಆರೋಗ್ಯ ಮಾನದಂಡ ನಗರ ಮಾಡಲು ಮೂರು ವರ್ಷದಲ್ಲಿ 413 ಕೋಟಿ ರು. ವೆಚ್ಚದಲ್ಲಿ ಸಮಗ್ರ ಆರೋಗ್ಯ ಯೋಜನೆ
- ಹವಾಮಾನ ವೈಪರೀತ್ಯದಿಂದ ಬೆಂಗಳೂರು ಎದುರಿಸುತ್ತಿರುವ ಪ್ರವಾಹ ನಿಯಂತ್ರಣಕ್ಕೆ ವ್ಯವಸ್ಥಿತ ಒಳಚರಂಡಿ ಜಾಲ, ಎಸ್ಟಿಪಿ ನಿರ್ಮಿಸಲು ಬಿಬಿಎಂಪಿ, ಬಿಡಬ್ಲ್ಯುಎಸ್ಎಸ್ಬಿಗೆ 3000 ಕೋಟಿ ರು. ಆರ್ಥಿಕ ನೆರವು
- 79.65 ಕಿ.ಮೀ. ಇರುವ ಮೆಟ್ರೋ ಮಾರ್ಗ 2 ವರ್ಷಗಳಲ್ಲಿ 98.60 ಕಿ.ಮೀ. ಹೆಚ್ಚುವರಿ ಮಾರ್ಗಗಳ ಕಾರ್ಯಾಚರಣೆ ಜಾಲ ಅಭಿವೃದ್ಧಿ ಗುರಿ. ದೇವನಹಳ್ಳಿವರೆಗೆ ಮೆಟ್ರೋ ವಿಸ್ತರಣೆಗೆ ಯೋಜನೆ
- ಮೆಜೆಸ್ಟಿಕ್ ಬಸ್ ನಿಲ್ದಾಣ ‘ಪ್ರಾಜೆಕ್ಟ್ ಮೆಜೆಸ್ಟಿಕ್’ ಯೋಜನೆಯಡಿ ಪುನರ್ ಅಭಿವೃದ್ಧಿ. ವಾಣಿಜ್ಯ ಸಂಕೀರ್ಣದೊಂದಿಗೆ ಸಾರಿಗೆ ಹಬ್ ನಿರ್ಮಾಣ
- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 9000 ಎಲೆಕ್ಟ್ರಿಕ್ ಬಸ್ ಸೇರ್ಪಡೆ ಉದ್ದೇಶ
-ಕೆ.ಆರ್. ಪುರದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಆಧಾರದಲ್ಲಿ ಹೊಸ ಸ್ಯಾಟಲೈಟ್ ಬಸ್ ನಿಲ್ದಾಣ
ಅತಿಥಿ ಉಪನ್ಯಾಸಕರು,
ಬಿಸಿಯೂಟ ಸಿಬ್ಬಂದಿಗೆ
ವೇತನ ಏರಿಕೆ ಗಿಫ್ಟ್
ಸರ್ಕಾರಿ ಪ್ರಾಥಮಿಕ/ಪ್ರೌಢಶಾಲೆಯ ಅತಿಥಿ ಶಿಕ್ಷಕರು ಮತ್ತು ಪದವಿ ಪೂರ್ವ ಕಾಲೇಜು ಅತಿಥಿ ಉಪನ್ಯಾಸಕರ ಮಾಸಿಕ ಗೌರವಧನ 2000 ರು.ನಷ್ಟು ಹೆಚ್ಚಳ, ಬಿಸಿಯೂಟ ಸಿಬ್ಬಂದಿ ಗೌರವ ಧನ 1000 ರು. ಏರಿಕೆ
ಅಂಗನವಾಡಿ, ಆಶಾ
ವೇತನ ₹1000 ಏರಿಕೆ
ವೇತನ ಹೆಚ್ಚಳ ಕುರಿತ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗೆ ಮನ್ನಣೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ 1000 ರು. ಏರಿಕೆ, ಸಹಾಯಕಿಯರ ಗೌರವಧನ 750 ರು. ಏರಿಕೆ
ದೇಗುಲ ಅರ್ಚಕರ
ತಸ್ತೀಕ್ ₹12000 ಹೆಚ್ಚಳ
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ 25551 ಧಾರ್ಮಿಕ ಸಂಸ್ಥೆ/ದೇಗುಲಗಳ ಅರ್ಚಕರಿಗೆ ಪ್ರಸ್ತುತ ಪಾವತಿಸುತ್ತಿರುವ ವಾರ್ಷಿಕ ತಸ್ತೀಕ್ ಮೊತ್ತ 60 ಸಾವಿರ ರು.ನಿಂದ 72 ಸಾವಿರ ರು.ಗೆ ಹೆಚ್ಚಳ
ಸಿನಿಮಾ ಪ್ರದರ್ಶನಕ್ಕೆ
ಸರ್ಕಾರದಿಂದಲೇ ಒಟಿಟಿ
ಕನ್ನಡ ಚಲನಚಿತ್ರಗಳಿಗೆ ಪ್ರೋತ್ಸಾಹ ನೀಡಲು ಒಟಿಟಿ ವೇದಿಕೆ ಸೃಷ್ಟಿಗೆ ಕ್ರಮ. ಸಾಮಾಜಿಕ, ಚಾರಿತ್ರಿಕ, ಸಾಂಸ್ಕೃತಿಕ ಮೌಲ್ಯ ಬಿಂಬಿಸುವ ಕನ್ನಡ ಚಿತ್ರಗಳನ್ನು ಸಂರಕ್ಷಿಸಲು ಚಲನಚಿತ್ರ ಭಂಡಾರ. ಇದಕ್ಕೆ 3 ಕೋಟಿ ರು. ವೆಚ್ಚ
ಚಿತ್ರಮಂದಿರಗಳ ನಟ್ಟು,
ಬೋಲ್ಟು ಟೈಟ್: ಟಿಕೆಟ್
ದರಕ್ಕೆ 200 ರು. ಮಿತಿ
ಮಲ್ಟಿಪ್ಲೆಕ್ಸ್ಗಳು ಸೇರಿದಂತೆ ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುವ ಪ್ರತಿ ಪ್ರದರ್ಶನದ ಪ್ರವೇಶ ದರ 200 ರು.ಗೆ ಸೀಮಿತ. ಮೈಸೂರು ಚಿತ್ರನಗರಿ ಸ್ಥಾಪನೆಗೆ ಬದ್ಧವಿರುವುದಾಗಿ ಘೋಷಣೆ
ಕೇರಳ ರೀತಿ ರಾಜ್ಯದಲ್ಲೂ
ವಾಟರ್ ಮೆಟ್ರೋ ಶುರು
ಕೇರಳದ ಕೊಚ್ಚಿಯಲ್ಲಿ ಕಾರ್ಯಾಚರಿಸುತ್ತಿರುವ ದೇಶದ ಮೊದಲ ವಾಟರ್ ಮೆಟ್ರೋ ರೀತಿ ಮಂಗಳೂರಿನಲ್ಲೂ ವಾಟರ್ ಮೆಟ್ರೋ ಆರಂಭ. ಇದರ ಜತೆಗೆ ಅಂತಾರಾಷ್ಟ್ರೀಯ ಕ್ರೂಸ್, ಕೋಸ್ಟಲ್ ಬರ್ತ್ಗೆ ಯೋಜನೆ. ಉತ್ತರಕನ್ನಡ ಜಿಲ್ಲೆಯ ಮಂಕಿ ಬಂದರು, ಹೊನ್ನಾವರದಲ್ಲಿ ಹಡಗು ನಿರ್ಮಾಣ ಕ್ಷೇತ್ರ. ನದಿ ಕ್ರೂಸ್ ಪ್ರವಾಸೋದ್ಯಮಕ್ಕೂ ಯೋಜನೆ
ಗೋಲ್ಗುಂಬಜ್ಗೆ ಇನ್ನು
ವಿಮಾನದಲ್ಲಿ ಹೋಗಿ
348 ಕೋಟಿ ರು.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿಜಯಪುರ ಏರ್ಪೋರ್ಟ್ನಲ್ಲಿ ಈ ವರ್ಷದಿಂದ ಕಾರ್ಯಾಚರಣೆ ಆರಂಭ. ಹೀಗಾಗಿ ಗೋಲಗುಂಬಜ್ ನೋಡಲು ವಿಮಾನದಲ್ಲಿ ಹೋಗಬಹುದು
ರಾಜ್ಯ ನಕ್ಸಲ್ ಮುಕ್ತ,
ನಕ್ಸಲ್ ಪಡೆ ವಿಸರ್ಜನೆ
ಆರು ಜನ ಭೂಗತ ನಕ್ಸಲರ ಶರಣಾಗತಿಯೊಂದಿಗೆ ರಾಜ್ಯವು ನಕ್ಸಲ್ ಮುಕ್ತ. ನಕ್ಸಲ್ ನಿಗ್ರಹ ಪಡೆ ವಿಸರ್ಜನೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೂಲಸೌರ್ಕಯ ಅಭಿವೃದ್ಧಿಗೆ 10 ಕೋಟಿ ರು. ವಿಶೇಷ ಪ್ಯಾಕೇಜ್
ಮದ್ಯದ ಬೆಲೆ ಮತ್ತೆ
ಏರಿಸುವ ಸುಳಿವು
ಪ್ರೀಮಿಯಂ ಮದ್ಯದ ಬೆಲೆಗಳನ್ನು ನೆರೆ ರಾಜ್ಯಗಳಲ್ಲಿನ ಬೆಲೆಗಳಿಗೆ ಅನುಸಾರವಾಗಿ ಪರಿಷ್ಕರಿಸಲಾಗಿದೆ. ತನ್ಮೂಲಕ ಅಬಕಾರಿ ಸ್ಲ್ಯಾಬ್ಗಳನ್ನು ತರ್ಕಬದ್ಧಗೊಳಿಸಲಾಗಿದೆ. ಈ ವರ್ಷವೂ ಅಬಕಾರಿ ಸ್ಲ್ಯಾಬ್ ತರ್ಕಬದ್ಧಗೊಳಿಸುವ ಪ್ರಕ್ರಿಯೆ ಮುಂದುವರಿಸುವ ಘೋಷಣೆ. ತನ್ಮೂಲಕ ಮದ್ಯದ ದರ ಏರಿಕೆ ಸುಳಿವು
ಇನ್ನೂ 500 ಕರ್ನಾಟಕ
ಪಬ್ಲಿಕ್ ಶಾಲೆ ಸ್ಥಾಪನೆ
ಪ್ರಾಥಮಿಕದಿಂದ ಪದವಿಪೂರ್ವ ಶಿಕ್ಷಣದವರೆಗೆ ಶಿಕ್ಷಣ ನೀಡುವ ಇನ್ನೂ 500 ಹೊಸ ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆ. ಜತೆಗೆ ಮಕ್ಕಳ ಕಲಿಕೆ ಉತ್ತೇಜಿಸುವ ಕಲಿಕಾ ಚಿಲುಮೆ, ಗಣಿತ ಗಣಕ, ಓದು ಕರ್ನಾಟಕ, ಮರುಸಿಂಚನ ಸ್ಕೀಂ ಮುಂದುವರಿಕೆ
ಮಕ್ಕಳ ಹಾಜರಾತಿಗೆ
ಫೇಸ್ ರಿಕಗ್ನಿಷನ್
‘ನಿರಂತರ’ ಕಾರ್ಯಕ್ರಮದಡಿ ಫೇಸ್ ರಿಕಗ್ನಿಷನ್ ಮೂಲಕ ಶಾಲೆಯಲ್ಲಿ ಮಕ್ಕಳ ಹಾಜರಾತಿ ಖಚಿತಪಡಿಸಲು ಕ್ರಮ. 4000 ಶಾಲೆಗಳಲ್ಲಿ ಕನ್ನಡ ಜತೆ ಆಂಗ್ಲಭಾಷೆ ಕಲಿಸಲು ದ್ವಿಭಾಷಾ ವಿಭಾಗ ಸ್ಥಾಪನೆ
ಬೆಂಗಳೂರು ನಗರ
ವಿವಿಗೆ ಮನಮೋಹನ
ಸಿಂಗ್ ಹೆಸರು
ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಮಾಜಿ ಪ್ರಧಾನಿ ಡಾ। ಮನಮೋಹನ ಸಿಂಗ್ ಹೆಸರು. ಇದರ ಜತೆಗೆ ಮೈಸೂರು ವಿವಿಯಲ್ಲಿ ಪ್ರೊ। ಎಂ.ಡಿ. ನಂಜುಂಡಸ್ವಾಮಿ ಸಂಶೋಧನಾ ಪೀಠ ಸ್ಥಾಪನೆ
75 ವರ್ಷದ ವೃದ್ಧರ
ಮನೆಗೇ ರೇಷನ್
ಈವರೆಗೆ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಮನೆಗೆ ‘ಅನ್ನ ಸುವಿಧಾ’ ಸ್ಕೀಂ ಅಡಿ ಪಡಿತರ ಬರುತ್ತಿತ್ತು. ಇದನ್ನು ಬದಲಿಸಿ ಈಗ 75 ವರ್ಷ ಮೇಲ್ಪಟ್ಟ ಹಿರಿಯರ ಮನೆಗೂ ವಿಸ್ತರಣೆ. ಇದರಿಂದ 3.3 ಲಕ್ಷ ಫಲಾನುಭವಿಗಳಿಗೆ ಅನುಕೂಲ.
₹409549 ಕೋಟಿ ಬಜೆಟ್
₹1.15 ಲಕ್ಷ ಕೋಟಿ ಸಾಲ
7.64 ಲಕ್ಷ ಕೋಟಿ ರು.ಗೇರಿದ ಸಾಲ. ಜಿಎಸ್ಡಿಪಿಯ ಶೇ.24.91ರಷ್ಟು (ಶೇ.25ಕ್ಕಿಂತ ಹೆಚ್ಚು ಸಾಲ ಮಾಡುವಂತಿಲ್ಲ!)
ಯುವನಿಧಿ ಫಲಾನುಭವಿಗಳಿಗೆ
ಭವಿಷ್ಯ ಕೌಶಲ್ಯ ತರಬೇತಿ
ಗ್ಯಾರಂಟಿಗಳ ಪೈಕಿ ಒಂದಾಗಿರುವ ಯುವನಿಧಿ ಯೋಜನೆಯಡಿ 2.58 ಲಕ್ಷ ಯುವಕರು ನೋಂದಣಿ. ಅವರಿಗೆ ನಿರುದ್ಯೋಗ ಭತ್ಯೆ ಜತೆಗೆ ಕೈಗಾರಿಕಾ ನಂಟಿನ ಕೋಶದಡಿ ಭವಿಷ್ಯ ಕೌಶಲ್ಯ ತರಬೇತಿ.
ನರ್ಸಿಂಗ್ ವಿದ್ಯಾರ್ಥಿಗಳಿಗೆ
ವಿದೇಶಿ ಭಾಷಾ ತರಬೇತಿ
ನರ್ಸಿಂಗ್ ವಿದ್ಯಾರ್ಥಿಗಳಿಗೆ ಜರ್ಮನ್, ಇಟಾಲಿಯನ್, ಸ್ಪ್ಯಾನಿಷ್ ಹಾಗೂ ಇತರೆ ವಿದೇಶಿ ಭಾಷಾ ಕೌಶಲ್ಯ ತರಬೇತಿ. ವಿದೇಶದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಅಂತಾರಾಷ್ಟ್ರೀಯ ಉದ್ಯೋಗ ಮೇಳ ಆಯೋಜನೆ
2ನೇ ಹಂತದ ನಗರಗಳಲ್ಲೂ
ಸ್ಟಾರ್ಟಪ್ ವ್ಯವಸ್ಥೆಗೆ ಶ್ರೀಕಾರ
ಮೈಸೂರು, ಮಂಗಳೂರು-ಉಡುಪಿ-ಮಣಿಪಾಲ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮತ್ತು ಕಲಬುರಗಿಗಳಲ್ಲಿ ನವೋದ್ಯಮ ಪರಿಸರ ವ್ಯವಸ್ಥೆ ಅಭಿವೃದ್ಧಿ
ರಾಜ್ಯದ 4 ಕಡೆ ಜಾಗತಿಕ
ನಾವೀನ್ಯ ಜಿಲ್ಲೆ ಸ್ಥಾಪನೆ
ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ವಲಯದಲ್ಲಿ ಕರ್ನಾಟಕದ ನಾಯಕತ್ವದ ಮತ್ತಷ್ಟು ಬಲಪಡಿಸಲು ಕ್ರಮ. ಇದಕ್ಕಾಗಿ ಕಿಯೋನಿಕ್ಸ್ ಮೂಲಕ ಮೈಸೂರು, ಬೆಳಗಾವಿ, ಧಾರವಾಡ ಮತ್ತು ಬೆಂಗಳೂರಿನಲ್ಲಿ ಗ್ಲೋಬಲ್ ಇನ್ನೋವೇಶನ್ ಡಿಸ್ಟ್ರಿಕ್ಸ್ ಅಭಿವೃದ್ಧಿ
ದಾಖಲೆಯ 4 ಲಕ್ಷ
ಕೋಟಿ ರು. ಬಜೆಟ್
ಈ ಸಲ ಸಿದ್ದರಾಮಯ್ಯ ಅವರಿಂದ ದಾಖಲೆಯ 4 ಲಕ್ಷ ಕೋಟಿ ರು. ಬಜೆಟ್ ಮಂಡನೆ. ಕಳೆದ ಬಾರಿ 3.71 ಲಕ್ಷ ಕೋಟಿ ರು. ಬಜೆಟ್ ಮಂಡಿಸಿದ್ದ ಸಿದ್ದು. ಈ ಬಾರಿ ₹ 4,08,647 ಕೋಟಿ ರು. ಬಜೆಟ್ ಮಂಡನೆ.
19,262 ಕೋಟಿ ರು.
ಕೊರತೆ ಬಜೆಟ್
ಬಜೆಟ್ನಲ್ಲಿ ₹ 4,08,647 ಕೋಟಿ ಆದಾಯ ನಿರೀಕ್ಷೆ. ₹4,09,549 ಕೋಟಿ ರು. ವೆಚ್ಚ ಆಗಲಿದೆ ಎಂದು ಅಂದಾಜು. ಒಟ್ಟಾರೆ 19,262 ಕೋಟಿ ರು. ರಾಜಸ್ವ ಕೊರತೆ ಸಂಭವ.
ರಾಜ್ಯದ ಸಾಲ 7.64 ಲಕ್ಷ ಕೋಟಿ ರು.
2025-26ನೇ ಸಾಲಿನಲ್ಲಿ ಕರ್ನಾಟಕ 1.16 ಲಕ್ಷ ಕೋಟಿ ರು. ಸಾಲ. ಇದು ಕಳೆದ ಸಾಲಿಗಿಂತ 11 ಸಾವಿರ ಕೋಟಿ ರು. ಅಧಿಕ. ಈ ಮೂಲಕ ರಾಜ್ಯದ ಸಾಲ 7.64,655 ಕೋಟಿ ರು.ಗೆ ಏರಿಕೆ. ಇದು ಜಿಎಸ್ಡಿಪಿಯ ಶೇ.24.91.
ಹೊಸ ಸ್ಕೀಂ
ಜೋಯಿಡಾ ಪ್ರಥಮ
ಸಾವಯವ ತಾಲೂಕು
ಸಾವು ಕೃಷಿ ಉತ್ತೇಜಿಸಲು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾಗೆ ಪ್ರಥಮ ಸಾವಯವ ತಾಲೂಕು ಪಟ್ಟ. ಇದರಡಿ ರೈತರಿಗೆ ಸಾವಯವ ಉತ್ಪನ್ನ ಮಾರುಕಟ್ಟೆ ಒದಗಿಸಲು ಪ್ರಮಾಣೀಕರಣ ವ್ಯವಸ್ಥೆ
ಈ ಸಲ 11 ಸಾವಿರ
ಶಿಕ್ಷಕರ ನೇಮಕ
ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ 5267 ಶಿಕ್ಷಕರು ಹಾಗೂ ರಾಜ್ಯದ ಇತರ ಕಡೆ 5 ಸಾವಿರ ಶಿಕ್ಷಕರು ಸೇರಿ 11 ಸಾವಿರ ಖಾಲಿ ಇರುವ ಶಿಕ್ಷಕ ಹುದ್ದೆ ಭರ್ತಿಗೆ ಕ್ರಮ. ಸರ್ಕಾರಿ ಕಾಲೇಜಲ್ಲಿ 2 ಸಾವಿರ ಬೋಧಕರ ನೇಮಕ.
ಹೊರಗುತ್ತಿಗೆ ಸಿಬ್ಬಂದಿಗೆ
ನಗದುರಹಿತ ಚಿಕಿತ್ಸೆ
ಸರ್ಕಾರದ ವಿವಿಧ ಇಲಾಖೆಗಳ ಗುತ್ತಿಗೆ, ಹೊರಗುತ್ತಿಗೆ, ಗೌರವಧನ ಆಧರಿತ 3 ಲಕ್ಷ ಸಿಬ್ಬಂದಿ/ಅವಲಂಬಿತರಿಗೆ 5 ಲಕ್ಷ ರು,ವರೆಗೆ ನಗದುರಹಿತ ಚಿಕಿತ್ಸೆಗೆ ಯೋಜನೆ.
ಎಸ್ಸಿಎಸ್ಟಿ ಸ್ವಸಹಾಯ
ಸಾಲಮಿತಿ ಹೆಚ್ಚಳ
ಎಸ್ಸಿ-ಎಸ್ಟಿ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡುವ 1 ಲಕ್ಷ ರು. ಸಾಲ 2.5 ಲಕ್ಷ ರು.ಗೆ ಹೆಚ್ಚಳ. ಜತೆಗೆ 2.5 ಲಕ್ಷ ರು. ಸಹಾಯಧನ. ಎಸ್ಸಿಎಸ್ಟಿ ವಿದ್ಯಾರ್ಥಿಗಳು ಅದೇ ಶಿಕ್ಷಣ ಸಂಸ್ಥೆ ಹಾಸ್ಟೆಲ್ನಲ್ಲಿದ್ದರೆ ಮಾಸಿಕ 3,500 ರು. ಶಿಷ್ಯವೇತನ.
ಒಬಿಸಿ ನಿರುದ್ಯೋಗಿಗೆ
₹3 ಲಕ್ಷ ಸಹಾಯಧನ
ಒಬಿಸಿ ನಿರುದ್ಯೋಗಿಗಳು ವಿದ್ಯುತ್ ಚಾಲಿತ ಬೈಕ್ ಖರೀದಿಸಿ ಆಹಾರ ಕಿಯೋಸ್ಕ್ ತೆರೆಯಲು 3 ಲಕ್ಷ ರು. ಸಹಾಯಧನ. ಕೆಐಎಡಿಬಿ ಜಮೀನು ಹಂಚಿಕೆಯಲ್ಲಿ ಒಬಿಸಿಗೆ ಶೇ.20ರಷ್ಟು ಮೀಸಲು.
ಆಯುಷ್ಮಾನ್ ಭಾರತ
ವಿಮಾ ಮಿತಿ ಹೆಚ್ಚಳ
ಆಯುಷ್ಮಾನ್ ಭಾರತ ಫಲಾನುಭವಿಗಳು 5 ಲಕ್ಷ ರು. ಚಿಕಿತ್ಸಾ ಮಿತಿ ಪೂರ್ಣಗೊಳಿಸಿದ್ದರೆ ಹೃದ್ರೋಗ ಹಾಗೂ ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚುವರಿ 5 ಲಕ್ಷ ರು. ವಿಮೆ ಪಡೆಯಲು ಅರ್ಹ. ಇತರ ಕಾಯಿಲೆಗಳಿಗೆ 2 ಲಕ್ಷ ರು. ಹೆಚ್ಚುವರಿ ವಿಮೆಗೆ ಅರ್ಹ,
ವೃತ್ತಿತೆರಿಗೆ 300 ರು.ಗೆ
ಹೆಚ್ಚಳ ಘೋಷಣೆ
ಈವರೆಗೆ ಸಂಬಳ ಪಡೆಯುವ ವೃತ್ತಿಪರರು ಫೆಬ್ರವರಿ ತಿಂಗಳಲ್ಲಿ ಪಾವತಿಸುತ್ತಿದ್ದ ವೃತ್ತಿಪರ ತೆರಿಗೆ ದರ ಹೆಚ್ಚಳ. 200 ರು. ಬದಲಾಗಿ ಇನ್ನು 300 ರು. ವೃತ್ತಿಪರ ತೆರಿಗೆ. ವಾಣಿಜ್ಯ ತೆರಿಗೆಯಿಂದ 1.2 ಲಕ್ಷ ಕೋಟಿ ರು. ರಾಜಸ್ವ ಸಂಗ್ರಹ ಗುರಿ