ಹಾನಗಲ್ಲ: ಕಡಿಮೆ ಖರ್ಚಿನಲ್ಲಿ ಯಾಂತ್ರಿಕೃತ ಭತ್ತ ಬೇಸಾಯ ಪದ್ಧತಿ ಅಳವಡಿಸಿಕೊಂಡಲ್ಲಿ ಉತ್ತಮ ಫಸಲು ಬರಲು ಸಾಧ್ಯವಾಗುತ್ತದೆ. ಅಲ್ಲದೆ, ಕೃಷಿಕರು ಹೊಸ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಕೃಷಿ ಅಧಿಕಾರಿ ಸಂಗಮೇಶ ಹಕ್ಲಪ್ಪನವರ ಮನವಿ ಮಾಡಿದರು.
ಬುಧವಾರ ತಾಲೂಕಿನ ಮೂಡೂರಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಆಯೋಜಿಸಿದ್ದ ಯಾಂತ್ರಿಕೃತ ಭತ್ತದ ಬೇಸಾಯ ಪದ್ಧತಿ ಕುರಿತ ವಿಚಾರಸಂಕಿರಣದಲ್ಲಿ ಮಾತನಾಡಿ, ಕೂಲಿ ಕಾರ್ಮಿಕರ ಕೊರತೆಯನ್ನು ಒಳಗೊಂಡು ಕೃಷಿ ಅಧಿಕ ಖರ್ಚಿನತ್ತ ಮುಖ ಮಾಡುತ್ತಿರುವ ಸಂದರ್ಭದಲ್ಲಿ ಹೊಸ ಕೃಷಿ ಪದ್ಧತಿಗಳನ್ನು ಕಡಿಮೆ ಖರ್ಚಿನಲ್ಲಿ ನಿರ್ವಹಿಸಲು ಮುಂದಾಗಬೇಕು. ಇದರಿಂದ ಖರ್ಚು ಕಡಿಮೆ ಉತ್ತಮ ಆದಾಯ ಪಡೆಯಲು ಸಾಧ್ಯ ಎಂದರು.ಬಿತ್ತನೆ ಸಂದರ್ಭದಲ್ಲಿ ಉತ್ತಮ ಬೀಜೋಪಚಾರ ಬೇಕು. ಕೀಟ ಹಾಗೂ ರೋಗ ನಿರ್ವಹಣೆಯಲ್ಲಿ ನಿರಾಸಕ್ತಿ ತೋರಿದರೆ ಹೆಚ್ಚು ನಷ್ಟ ಅನುಭವಿಸಬೇಕಾಗುತ್ತದೆ. ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಬಳಸುವ ಮೂಲಕ ಹೊಸ ಕೃಷಿ ಪದ್ಧತಿಗೆ ಆದ್ಯತೆ ನೀಡಬೇಕು ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಮೇಲ್ವಿಚಾಕ ಮಹಾಂತೇಶ ಹರಕುಣಿ ಮಾತನಾಡಿ, ಕೃಷಿ ಬಹುಸಂಖ್ಯಾತ ಭಾರತೀಯರ ವೃತ್ತಿ ಬದುಕಾಗಿದೆ. ಇಡೀ ನಾಡಿಗೆ ಅನ್ನ ನೀಡುವ ರೈತನಿಗೆ ಸಂಕಷ್ಟಗಳು ಸಹಜ. ಆದರೆ ಅವನ್ನೆಲ್ಲ ಮೆಟ್ಟಿ ನಿಂತು ಅನ್ನ ನೀಡುವ ರೈತರೂ ಸಹಕಾರದಿಂದ ಕೃಷಿಯನ್ನು ಯಶಸ್ವಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.ಜನಜಾಗೃತಿ ವೇದಿಕೆ ಸದಸ್ಯ ಪ್ರಗತಿಪರ ರೈತ ವಾಸುದೇವಮೂರ್ತಿ ಮೂಡಿ ಮಾತನಾಡಿ, ಮಣ್ಣಿನ ಫಲವತ್ತತೆಯನ್ನು ಉಳಿಸಬೇಕಿದೆ. ಈಗಾಗಲೇ ಕೃಷಿ ಭೂಮಿಯ ಮಣ್ಣನ್ನು ಹಾಳು ಮಾಡಿದ್ದೇವೆ. ರಾಸಾಯನಿಕಗಳು ತಾತ್ಕಾಲಿಕ ಲಾಭದಾಯಕ. ಆದರೆ ಇದರಿಂದ ಭೂಮಿಯ ಮೇಲೆ ಆಗುವ ನಷ್ಟದ ಅರಿವು ರೈತರಿಗೆ ಬೇಕು. ಈಗ ಸಾವಯವ ಕೃಷಿ ಅನಿವಾರ್ಯ. ಇದರಲ್ಲಿಯೂ ಅತ್ಯುತ್ತಮ ಬೆಳೆ ಪಡೆಯಲು ಸಾಧ್ಯ. ಭೂಮಿಯ ಆರೋಗ್ಯ ನಮ್ಮ ಆರೋಗ್ಯ. ಸರ್ಕಾರಗಳೂ ಸಾವಯವ ಕೃಷಿಯನ್ನು ಬೆಂಬಲಿಸುವ, ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.ಕಾರ್ಯಕ್ರಮದಲ್ಲಿ ರೈತರಾದ ಮನೋಜಗೌಡ ಪಾಟೀಲ, ಜಮೀರಸಾಬ ಹಾವಣಗಿ, ಬಸವಣ್ಣೆಪ್ಪ ಮಣ್ಣಮ್ಮನವರ ಮೊದಲಾದವರು ಇದ್ದರು.