ಹುಬ್ಬಳ್ಳಿ: ಉತ್ತರ ಕರ್ನಾಟಕ ಅಭಿವೃದ್ಧಿಗೆ ಅದರಲ್ಲಿಯೂ ವಿಶೇಷವಾಗಿ ಹು-ಧಾ ಕೈಗಾರಿಕಾ ಅಭಿವೃದ್ಧಿಗೆ ಪೂರಕವಾದಂತಹ ಯಾವುದೇ ಪ್ರಸ್ತಾವನೆಗಳನ್ನು ಮುಖ್ಯಮಂತ್ರಿಗಳು ಮುಂಗಡಪತ್ರದಲ್ಲಿ ಕಾಣಿಸದೇ ಇರುವ ಅಂಶವು ಈ ಭಾಗದ ಉದ್ದಿಮೆದಾರರು ಹಾಗೂ ವರ್ತಕರಲ್ಲಿ ನಿರಾಶೆಯನ್ನುಂಟು ಮಾಡಿದೆ ಎಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಸಮಧಾನ ವ್ಯಕ್ತಪಡಿಸಿದೆ.
ಈ ಕುರಿತು ಪ್ರಕಟಣೆ ನೀಡಿ, ಬೆಂಗಳೂರು ಹೊರತುಪಡಿಸಿ (ಬಿಯಾಂಡ್ ಬೆಂಗಳೂರು) ಅಭಿವೃದ್ಧಿ ಎಂಬ ಘೋಷವಾಕ್ಯವು ಈಡೇರದೇ ಕೇವಲ ಕಾಗದದಲ್ಲಿ ಮಾತ್ರ ಉಳಿದಿದೆ. ಕಳಸಾ ಬಂಡೂರಿ ಯೋಜನೆ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿರುವ ಯೋಜನೆಯಾಗಿದ್ದು ಇದಕ್ಕೆ ಇನ್ನಷ್ಟು ವೇಗ ಕೊಡುವ ಪ್ರಸ್ತಾವನೆಗಳನ್ನು ಈ ಬಜೆಟ್ನಲ್ಲಿ ಘೋಷಿಸಿದ್ದರೆ ಹು-ಧಾ ಭಾಗದ ಕುಡಿಯುವ ನೀರಿನ ಯೋಜನೆಗೆ ಪ್ರಾಮುಖ್ಯತೆ ದೊರೆಯುತ್ತಿತ್ತು.ಎಫ್ಎಂಸಿಜಿ ಕ್ಲಸ್ಟರ್ ಸ್ಥಾಪನೆಗೆ ಇರುವ ತೊಂದರೆಗಳನ್ನು ನಿವಾರಿಸಲು ಹಿಂದೆ ಮನವಿ ಸಲ್ಲಿಸಿತ್ತು. ಈ ಬಜೆಟ್ ನಲ್ಲಿ ಯಾವುದೇ ಪ್ರಸ್ತಾವನೆಗಳನ್ನು ಸೂಚಿಸದೇ ಇರುವುದು ಈ ಭಾಗದ ಉದ್ದಿಮೆಗಳ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಒಟ್ಟಾರೆ ಈ ಬಜೆಟ್ ಉತ್ತರ ಕರ್ನಾಟಕ ಭಾಗವನ್ನು ವಾಣಿಜ್ಯೋದ್ಯಮ, ಆರ್ಥಿಕ, ನೀರಾವರಿ ಕ್ಷೇತ್ರದಲ್ಲಿ ಮತ್ತು ರಸ್ತೆ ಸಾರಿಗೆ ಸಂಪರ್ಕ ಸುಧಾರಣೆಯಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಈ ಭಾಗದ ಜನತೆಯಲ್ಲಿ ಬಹಳಷ್ಟು ಕ್ರೋಧವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.ಈ ವೇಳೆ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ, ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ವಸಂತ ಲದವಾ, ರಮೇಶ ಪಾಟೀಲ, ತೆರಿಗೆ ಸಮಿತಿ ಕೋ ಚೇರಮನ್ ಚನ್ನವೀರ ಮುಂಗರವಾಡಿ ಸೇರಿ ಹಲವರಿದ್ದರು.
ಯುವಜನ ವಿರೋಧಿ ಬಜೆಟ್ಧಾರವಾಡ:
ಈಗಾಗಲೇ ಮದ್ಯದ ಕುಡಿತದಿಂದಾಗಿ ಸಮಾಜದ ಸ್ವಾಸ್ಥ್ಯ ಹದಗೆಟ್ಟಿದೆ. ಬಹುದೊಡ್ಡ ಸಂಖ್ಯೆಯ ನಿರುದ್ಯೋಗಿ ಯುವಜನರೂ ಕುಡಿತಕ್ಕೆ ದಾಸರಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮದ್ಯ ಮಾರಾಟವನ್ನು ನಿಯಂತ್ರಿಸಿ ಸಮಾಜದ ಸ್ವಾಸ್ಥ್ಯ ಕಾಪಾಡುವ ಬದಲು ಬಜೆಟ್ನಲ್ಲಿ ಇದರಿಂದಲೇ ಅಬಕಾರಿ ಇಲಾಖೆಗೆ ಹೆಚ್ಚಿನ ಆದಾಯ ನಿರೀಕ್ಷಿಸುತ್ತಿರುವುದನ್ನು ಎಐಡಿವೈಒ ಸಂಘಟನೆ ಖಂಡಿಸಿದೆ.ಒಟ್ಟಾರೆ ರಾಜ್ಯ ಬಜೆಟ್ ಯುವಜನ ವಿರೋಧಿಯಾಗಿದ್ದು, ತಮ್ಮ ಹಕ್ಕಿಗಾಗಿ ಪ್ರಬಲ ಆಂದೋಲನವನ್ನು ರೂಪಿಸಲು ಮುಂದಾಗಬೇಕಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಸಂಘಟನೆಯು, ಖಾಲಿ ಇರುವ 2.27 ಲಕ್ಷಕ್ಕೂ ಹೆಚ್ಚು ಹುದ್ದೆಗಳ ಭರ್ತಿಮಾಡಿಕೊಳ್ಳುವ ಕುರಿತು ರಾಜ್ಯ ಬಜೆಟ್ ನಲ್ಲಿ ಯಾವುದೇ ಕ್ರಮಗಳಿಲ್ಲ. ನರ್ಸಿಂಗ್ ಕಲಿತ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯಲ್ಲಿ ಉದ್ಯೋಗ ನೀಡುವ ಬದಲು ಬಜೆಟ್ನಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ವಿದೇಶಿ ಭಾಷೆಗಳನ್ನು ಕಲಿಸಿ ವಿದೇಶದಲ್ಲಿ ಉದ್ಯೋಗ ಮಾಡಲು ಕಳಿಸಿ ಸರ್ಕಾರವೇ ಪ್ರತಿಭಾ ಪಲಾಯನಕ್ಕೆ ಎಡೆ ಮಾಡಿಕೊಡುತ್ತಿರುವುದು ಖಂಡನೀಯ.ಸರ್ಕಾರಿ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ, ಗೌರವಧನದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ 3 ಲಕ್ಷಕ್ಕೂ ಅಧಿಕ ಸಿಬ್ಬಂದಿಗೆ ಸೇವಾ ಭದ್ರತೆ ಹಾಗೂ ಉದ್ಯೋಗ ಭದ್ರತೆ ಒದಗಿಸುವ ಬದಲು, ನಗದುರಹಿತ ಚಿಕಿತ್ಸಾ ಸೌಲಭ್ಯದ ಹೆಸರಿನಲ್ಲಿ ಅವರಿಂದಲೇ ವಂತಿಕೆ ಸಂಗ್ರಹ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ. 2023ರ ಚುನಾವಣೆಯಲ್ಲಿ ಕಾಂಗ್ರೆಸ್ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಕುರಿತು ಸೂಕ್ತಕ್ರಮಗಳು ಈ ಬಜೆಟ್ನಲ್ಲಿಯೂ ಇಲ್ಲ. ವ್ಯಾಪಕವಾಗಿ ಬೆಳೆಯುತ್ತಿರುವ ಗಿಗ್ ಆರ್ಥಿಕತೆಗೆ, ಗಿಗ್ ಕಾರ್ಮಿಕರ ಹಿತ ಕಾಪಾಡಲು ಕಾನೂನು ರೂಪಿಸುವುದಾಗಿ ಹೇಳಿದ್ದ ಸರ್ಕಾರ ಅದರ ಕುರಿತು ಈ ಬಜೆಟ್ನಲ್ಲಿ ಯಾವುದೇ ಪ್ರಸ್ತಾಪವನ್ನು ಮಾಡದಿರುವುದು ಖಂಡನೀಯ ಎಂದಿದೆ.