ಮಕ್ಕಳಲ್ಲಿ ಆತ್ಮಸ್ಥೈರ್ಯ ಬೆಳೆಸಿ: ಮಿಥುನ ಜಿ. ಪಾಟೀಲ

KannadaprabhaNewsNetwork | Published : Jan 29, 2024 1:35 AM

ಸಾರಾಂಶ

ಪ್ರತಿಭೆ, ಸಾಮರ್ಥ್ಯಕ್ಕೆ ತಕ್ಕಂತೆ ಸೂಕ್ತ ವಾತಾವರಣ ಕಲ್ಪಿಸುವುದರ ಜೊತೆಗೆ, ಗುರಿ, ಸಾಧನೆಗಾಗಿ ಮಕ್ಕಳಲ್ಲಿ ಆತ್ಮ ಸ್ಥೈರ್ಯ ಬೆಳೆಸಬೇಕು. ಈ ದಿಸೆಯಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ ಎಂದು ಪುರಸಭೆ ಉಪಾಧ್ಯಕ್ಷ ಮಿಥುನ ಜಿ. ಪಾಟೀಲ ಹೇಳಿದರು.

ರೋಣ: ಪ್ರತಿಭೆ, ಸಾಮರ್ಥ್ಯಕ್ಕೆ ತಕ್ಕಂತೆ ಸೂಕ್ತ ವಾತಾವರಣ ಕಲ್ಪಿಸುವುದರ ಜೊತೆಗೆ, ಗುರಿ, ಸಾಧನೆಗಾಗಿ ಮಕ್ಕಳಲ್ಲಿ ಆತ್ಮ ಸ್ಥೈರ್ಯ ಬೆಳೆಸಬೇಕು. ಈ ದಿಸೆಯಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ ಎಂದು ಪುರಸಭೆ ಉಪಾಧ್ಯಕ್ಷ ಮಿಥುನ ಜಿ. ಪಾಟೀಲ ಹೇಳಿದರು. ಅವರು ಶನಿವಾರ ಪಟ್ಟಣದ ಶ್ರೀ ಸಿದ್ರಾಮೇಶ್ವರ ವಿದ್ಯಾವರ್ಧಕ ಸಂಸ್ಥೆಯ ಗ್ರಿನವುಡ್ ಇಂಟರನ್ಯಾಶನಲ್ ಆಂಗ್ಲ ಮಾಧ್ಯಮ ಶಾಲೆ, ಶ್ರೀ ಸಿದ್ರಾಮೇಶ್ವರ ಪ್ರಾಥಮಿಕ ಶಾಲೆ 12ನೇ ವಾರ್ಷಿಕ ಸಂಭ್ರಮ- 2024 ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ಕ್ಷೇತ್ರದಿಂದ ವಿವಿಧ ಕ್ಷೇತ್ರಗಳು ಪ್ರಗತಿ ಹೊಂದುತ್ತವೆ. ಎಲ್ಲದ್ದಕ್ಕೂ ಮೂಲ ಶಿಕ್ಷಣವಾಗಿದೆ. ಮಕ್ಕಳನ್ನು ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನಾಗಿಸುವಲ್ಲಿ, ನಾಗರಿಕ ಸಮಾಜದ ಸಂಪನ್ಮೂಲ ವ್ಯಕ್ತಿಗಳನ್ನಾಗಿಸುವಲ್ಲಿ ಗುಣಾತ್ಮಕ ಶಿಕ್ಷಣ ಬುನಾದಿಯಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಟಿ.ವಿ., ಮೋಬೈಲ್ ನೋಡುತ್ತಾ ಕಾಲಹರಣ ಮಾಡದೇ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುವಲ್ಲಿ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಪಾಲಕರು ಮತ್ತು ಶಿಕ್ಷಕರು ಮಕ್ಕಳಿಗೆ ಮಾರ್ಗದರ್ಶನ, ಸಲಹೆ, ಸೂಚನೆ ನೀಡಬೇಕು. ಪ್ರಸ್ತುತ ಸ್ಪರ್ಧಾತ್ಮಕ ಕಾಲಗಟ್ಟಕ್ಕೆ ತಕ್ಕಂತೆ ಮಕ್ಕಳನ್ಮು ಸಿದ್ದಪಡಿಸಬೇಕು. ಕಲಿಕೆಗೆ ಬೇಕಾದ ಪಠ್ಯ ಸಾಮಗ್ರಿಗಳನ್ನು, ಪೂರಕ ವಾತಾವರಣವನ್ನು ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಗ್ರಿನ್ ವುಡ್ ಇಂಟರನ್ಯಾಶನಲ್ ಶಾಲೆ ಶ್ರಮಿಸುತ್ರಿರುವದು ಶ್ಲಾಘನಾರ್ಹವಾಗಿದೆ ಎಂದರು.ಬಿ.ಇಒ ರುದ್ರಪ್ಪ‌ ಹುರಳಿ ಮಾತನಾಡಿ, ಮಕ್ಕಳು ಇಂತಹದ್ದೇ ಕಲಿಯಬೇಕು, ಇಂತದ್ದೇ ಕೋರ್ಸಗೆ ಪ್ರವೇಶ ಪಡೆಯಬೇಕು ಎಂದು ಮಕ್ಕಳಿಗೆ ಒತ್ತಡ ಹಾಕಬಾರದು.ಇದರಿಂದ ಮಕ್ಕಳಲ್ಲಿನ ಪ್ರತಿಭೆಗೆ ಅವಕಾಶ ಸಿಗದೇ ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ.ಅಂಕ ಗಳಿಸಲು ಮಕ್ಕಳಿಗೆ ಒತ್ತಡ ಹಾಕಬಾರದು. ಅವರಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಅವಿನಾಶ ಎಸ್. ಸಾಲಿಮನಿ ಮಾತನಾಡಿ, ಮಕ್ಕಳನ್ನು ಸಾಧ್ಯವಾದಷ್ಟು ಟಿ.ವಿ., ಮೊಬೈಲ್ ಬಳಕೆಯಿಂದ ದೂರವಿರುವಂತೆ ಪಾಲಕರು ನೋಡಿಕೊಳ್ಳಬೇಕು. ಗುರಿ ಮತ್ತು ಸಾಧನೆ ಕುರಿತು ಮಕ್ಕಳಿಗೆ ಸಾಧಕರ, ಮಹನೀಯರ ಜೀವನ ಯಶೋಗಾಥೆಗಳನ್ನು ತಿಳಿಸಬೇಕು. ಈ ದಿಶೆಯಲ್ಲಿ ಶಾಲೆ ಮತ್ತು ಮನೆ ಜವಾಬ್ದಾರಿ ಪ್ರಮುಖವಾಗಿದೆ ಎಂದರು. 2024ನೇ ಗ್ರಿನ್ ವುಡ್ ಇಂಟರನ್ಯಾಶನಲ್ ಅವಾರ್ಡ್‌ನ್ನು ರಾಜೀವಗಾಂಧಿ ಬಿ.ಇಡಿ. ಕಾಲೇಜ್ ಪ್ರಾಚಾರ್ಯ ಡಾ.ವೈ.ಎನ್.ಪಾಪಣ್ಣವರಗೆ ವಿತರಿಸಿ ಗೌರವಿಸಿದರು. ಸಾಧಕರನ್ನು, ಸಾಧಕ ವಿದ್ಯಾರ್ಥಿಗಳನ್ನು ಹಾಗೂ ನಿವೃತ್ತ ಶಿಕ್ಷಕರು, ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಸಾನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಸಮಾರಂಭದಲ್ಲಿ ಸಿಪಿಐ ಎಸ್.ಎಸ್. ಬೀಳಗಿ, ಹನಮಂತ ರಜಪೂರ, ಚಲನಚಿತ್ರ ನಿರ್ದೇಶಕ ಗಿರೀಶ ವಿ. ಗೌಡರ, ವಕೀಲ ಶಿವಕುಮಾರ ಚಿತ್ರಗಾರ, ಸಂಸ್ಥೆಯ ಆಡಳಿತಾಧಿಕಾರಿ ಎಸ್.ಎಂ. ಕೊಟಗಿ, ಮಲ್ಲಿಕಾರ್ಜುನ ಬೇವಿನಮರದ, ಬಿ.ಎನ್. ಬಳಗೋಡ, ವೀರೇಶ ಸಂಗಳದ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಅಭಿಷೇಕ ಇನಾಮದಾರ ನಿರೂಪಿಸಿದರು. ಪ್ರಾಂಶುಪಾಲ ಸುನೀತಾ ರಾಬಾ ಸ್ವಾಗತಿಸಿದರು. ಮಹೇಶ ಅಚ್ಚುನಗೌಡ್ರ ವಂದಿಸಿದರು.

Share this article