ನಿಯಮ ಪಾಲಿಸದ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದುಪಡಿಸಿ

KannadaprabhaNewsNetwork | Published : Aug 6, 2024 12:30 AM

ಸಾರಾಂಶ

ಉಚಿತವಾಗಿ ಬಸ್‌ಗಳಲ್ಲಿ ಅಡ್ಡಾಡುತ್ತಿದ್ದೇವೆ ಎಂದು ಸಾರಿಗೆ ಸಂಸ್ಥೆಯ ಸಿಬ್ಬಂದಿ ಮಹಿಳೆಯರನ್ನು ಕೀಳಾಗಿ ನೋಡುತ್ತಿದ್ದಾರೆ. ಬಸ್‌ ನಿಲ್ದಾಣದಲ್ಲಿ ಮಹಿಳೆಯರು ಕಂಡು ಕೂಡಲೇ ಬಸ್‌ ನಿಲ್ಲಿಸದೇ ಹೋಗಿರುವ ಉದಾಹರಣೆಗಳೂ ಇವೆ. ಸರ್ಕಾರದ ಯೋಜನೆ ಲಾಭ ಪಡೆಯಲು ಮಹಿಳೆಯರು ಬಸ್‌ನಲ್ಲಿ ಸಂಚಾರ ಮಾಡಬಾರದೇ?

ಧಾರವಾಡ:

ಅನ್ನಭಾಗ್ಯ ಯೋಜನೆಯಡಿ ನಿಯಮ ಪಾಲಿಸದ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಪಡಿಸಲು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಸ್.ಆರ್. ಪಾಟೀಲ ತಿಳಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿ ಜಾರಿಗೊಳಿಸುವ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅನ್ನಭಾಗ್ಯ ಯೋಜನೆ ಅಡಿ ಎಲ್ಲ ಪಡಿತರ ಚೀಟಿದಾರರಿಗೆ ಧಾನ್ಯ ನೀಡಲು ಮೀನಮೇಷ ಎಣಿಸುವ ಪ್ರಕರಣಗಳು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಿಂದ ಬೆಳಕಿಗೆ ಬಂದಿವೆ. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಜನರೊಂದಿಗೆ ವಿಚಿತ್ರವಾಗಿ ನಡೆದುಕೊಳ್ಳುತ್ತಾರೆ. ಜತೆಗೆ ನ್ಯಾಯಬೆಲೆ ಅಂಗಡಿ ಎಂಬ ಹೆಸರು ಇಲ್ಲದೇ ಜನರು ತೊಂದರೆಗೆ ಒಳಗಾದ ಪ್ರಸಂಗಗಳು ನಡೆದಿದ್ದು, ಆಹಾರ ಇಲಾಖೆ ಈ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಿದರು.

ಕೀಳಾಗಿ ನೋಡಬೇಡಿ:

ಉಚಿತವಾಗಿ ಬಸ್‌ಗಳಲ್ಲಿ ಅಡ್ಡಾಡುತ್ತಿದ್ದೇವೆ ಎಂದು ಸಾರಿಗೆ ಸಂಸ್ಥೆಯ ಸಿಬ್ಬಂದಿ ಮಹಿಳೆಯರನ್ನು ಕೀಳಾಗಿ ನೋಡುತ್ತಿದ್ದಾರೆ. ಬಸ್‌ ನಿಲ್ದಾಣದಲ್ಲಿ ಮಹಿಳೆಯರು ಕಂಡು ಕೂಡಲೇ ಬಸ್‌ ನಿಲ್ಲಿಸದೇ ಹೋಗಿರುವ ಉದಾಹರಣೆಗಳೂ ಇವೆ. ಸರ್ಕಾರದ ಯೋಜನೆ ಲಾಭ ಪಡೆಯಲು ಮಹಿಳೆಯರು ಬಸ್‌ನಲ್ಲಿ ಸಂಚಾರ ಮಾಡಬಾರದೇ? ಎಂದು ಪ್ರಶ್ನಿಸಿದ ಸಮಿತಿ ಸದಸ್ಯೆಯೊಬ್ಬರು, ಗ್ರಾಮೀಣ ಪ್ರದೇಶಕ್ಕೆ ಬಸ್‌ಗಳನ್ನು ಕಡಿತ ಮಾಡಿದ್ದು ಶಾಲಾ-ಕಾಲೇಜು ಮಕ್ಕಳಿಗೆ ತೀವ್ರ ತೊಂದರೆಯಾಗಿದೆ ಎಂದು ದೂರಿದರು.

ಗ್ಯಾರಂಟಿ ಮಾಹಿತಿ:

ಶಕ್ತಿ ಯೋಜನೆ ಜಾರಿಯಾದ ಜೂನ್ 11, 2023ರಿಂದ ಜುಲೈ 29, 2024ರ ವರೆಗೆ 13 ಕೋಟಿಗೂ ಅಧಿಕ ಮಹಿಳೆಯರು ಶಕ್ತಿ ಯೋಜನೆಯಲ್ಲಿ ಪ್ರಯಾಣಿಸಿದ್ದಾರೆ. ಇದರಿಂದ ₹ 275 ಕೋಟಿಗೂ ಅಧಿಕ ಆದಾಯ ಬಂದಿದೆ. ಪ್ರತಿದಿನ ಸಂಸ್ಥೆಯ 993 ವಾಹನಗಳಲ್ಲಿ ಅಂದಾಜು 3.14 ಲಕ್ಷಕ್ಕೂ ಅಧಿಕ ಮಹಿಳಾ ಪ್ರಯಾಣಿಕರು ಮತ್ತು 2.64 ಲಕ್ಷಕ್ಕೂ ಅಧಿಕ ಪುರುಷ ಪ್ರಯಾಣಿಕರು ಸೇರಿ ಒಟ್ಟು ಸುಮಾರು 5.77 ಲಕ್ಷ ಪ್ರಯಾಣಿಕರು ಬಸ್‍ಗಳಲ್ಲಿ ಸಂಚರಿಸಿದ್ದಾರೆ. ಒಟ್ಟು ₹ 1.37 ಕೋಟಿ ಆದಾಯ ಪ್ರತಿದಿನ ಬರುತ್ತಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸಮಿತಿಗೆ ಮಾಹಿತಿ ನೀಡಿದರು.

ಗೃಹ ಜ್ಯೋತಿ ಯೋಜನೆಗೆ ಒಟ್ಟು 4,83,900 ನೋಂದಣಿ ಆಗಿದ್ದು, ಶೇ. 87.29ರಷ್ಟು ಸಾಧನೆ ಆಗಿದೆ ಎಂದು ಹೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು. ಅನ್ನಭಾಗ್ಯ ಯೋಜನೆಯಲ್ಲಿ 3,49,828 ಬಿಪಿಎಲ್ ಪಡಿತರ ಚೀಟಿದಾರರಿದ್ದು ಅನ್ನಭಾಗ್ಯ ಯೋಜನೆಯಡಿ, ಜೂನ್‌ 2024ರ ವರೆಗೆ ₹ 235 ಕೋಟಿ ನಗದು ವರ್ಗಾವಣೆ ಆಗಿದೆ. ತಾಂತ್ರಿಕ ಕಾರಣಗಳಿಂದ ಬಾಕಿ ಉಳಿದಿದ್ದ 8,344 ಜನರಿಗೆ ನಗದು ವರ್ಗಾವಣೆಗೆ ಕ್ರಮ ವಹಿಸಬೇಕೆಂದು ಆಹಾರ ಇಲಾಖೆ ಉಪ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ತಿಳಿಸಿದರು.

ಗೃಹಲಕ್ಷ್ಮೀ ಯೋಜನೆಯಡಿ 3,66,734 ಜನರು ನೋಂದಣಿ ಆಗಿದ್ದು, ಆಗಸ್ಟ್ 2023ರಿಂದ ಮೇ 2024ರ ವರೆಗೆ 31,54,147 ಜನರಿಗೆ ₹ 630.82 ಕೋಟಿ ಜಮೆ ಮಾಡಲಾಗಿದೆ. ಅರ್ಹರು ಅರ್ಜಿ ಸಲ್ಲಿಸಲು ಸೇವಾ ಸಿಂಧು ಆನ್ ಲೈನ್‌ದಲ್ಲಿ ತೊಂದರೆ ಆಗುತ್ತಿದ್ದು, ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಬೇಗನೆ ಸರಿ ಪಡಿಸುತ್ತೇವೆಂದು ಆಹಾರ ಇಲಾಖೆ ಉಪ ನಿರ್ದೇಶಕರು ಸಮಿತಿಗೆ ಮಾಹಿತಿ ನೀಡಿದರು. ಇನ್ನು, ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 1,422 ಪುರುಷ ಹಾಗೂ 1808 ಮಹಿಳೆಯರು ಸೇರಿ 3,230 ಜನ ಫಲಾನುಭವಿಗಳಿಗೆ ಸಹಾಯಧನ ವಿತರಿಸಲಾಗಿದೆ. ಬಾಕಿ ಇರುವ 1,351 ಜನ ದಾಖಲೆಗಳ ಪರಿಶೀಲನೆ ಪ್ರಗತಿಯಲ್ಲಿದ್ದು, ಅವರಿಗೂ ಶೀಘ್ರದಲ್ಲಿ ಸಹಾಯಧನ ವಿತರಿಸಲು ಕ್ರಮ ವಹಿಸಬೇಕೆಂದು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದರು.

ನಂತರ ಮಾತನಾಡಿದ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಸ್‌.ಆರ್. ಪಾಟೀಲ, ಐದು ಗ್ಯಾರಂಟಿ ಯೋಜನೆಗಳು ಶೇ. 100ರಷ್ಟು ಯಶಸ್ವಿ ಸೇರಿದಂತೆ ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಅಧಿಕಾರಿಗಳು ಕಾಳಜಿ ಪೂರ್ವಕವಾಗಿ ಅನುಷ್ಠಾನಗೊಳಿಸಬೇಕು. ಜಿಲ್ಲೆಯ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ₹ 5ರಿಂದ ₹ 6 ಸಾವಿರ ಮೊತ್ತದ ಆರ್ಥಿಕ ಸಹಾಯ ಮಾಡುತ್ತಿದೆ. ಅಧಿಕಾರಿಗಳು ಅರ್ಹರಿಗೆ ಯೋಜನೆಯ ಲಾಭ ತಲುಪುವಂತೆ ಮಾಡಬೇಕು. ಗ್ಯಾರಂಟಿ ಅನುಷ್ಠಾನದ ತಾಲೂಕು ಸಮಿತಿಗಳು ನಿರಂತರ ಸಭೆಗಳ ಮೂಲಕ ತಾಲೂಕು ಮಟ್ಟದಲ್ಲಿ ಗ್ಯಾರಂಟಿಗಳ ಪ್ರಗತಿ ಪರಿಶೀಲನೆ ಮಾಡಬೇಕು. ಫಲಾನುಭವಿಗಳ ಸಮಸ್ಯೆಗಳಿದ್ದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆ ಹರಿಸಬೇಕೆಂದು ಸಲಹೆ ನೀಡಿದರು.

ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿಪಂ ಸಿಇಒ ಸ್ವರೂಪ ಟಿ.ಕೆ. ಮಾತನಾಡಿದರು. ಉಪಕಾರ್ಯದರ್ಶಿ ದೀಪಕ ಮಡಿವಾಳರ ಸ್ವಾಗತಿಸಿದರು.

Share this article