ವಕೀಲರ ವಿರುದ್ಧ ಕೇಸು: ಕಲಾಪದಿಂದ ಹೊರಗುಳಿದು ವಕೀಲರ ಆಕ್ರೋಶ

KannadaprabhaNewsNetwork |  
Published : Feb 14, 2024, 02:16 AM IST
13ಕೆಎಂಎನ್ ಡಿ22ಶ್ರೀರಂಗಪಟ್ಟಣ ವಕೀಲರು ನ್ಯಾಯಾಲಯ ಕಲಾಪದಿಂದ ಹೊರಗುಳಿದು ಆಕ್ರೋಶ ವ್ಯಕ್ತಪಡಿಸಿದರು. | Kannada Prabha

ಸಾರಾಂಶ

ರಾಮನಗರ ವಕೀಲರ ಸಂಘದ ಸಭೆ ನಡೆಯುತ್ತಿದ್ದ ವೇಳೆ ಎಸ್‌ಡಿಪಿಐ ಕಾರ್ಯಕರ್ತರು ವಕೀಲರ ಸಂಘದ ಕಚೇರಿಗೆ ನುಗ್ಗಿರುವ ಬಗ್ಗೆ ವಕೀಲರ ಸಂಘದ ಸದಸ್ಯರು ದೂರು ನೀಡಲು ಹೋದ 40ಕ್ಕೂ ಹೆಚ್ಚು ವಕೀಲರ ವಿರುದ್ಧ ಪ್ರಕರಣ ದಾಖಲಿಸಿ ಒಂದು ಸಮಾಜದ ಪರ ನಿಲ್ಲುವು ತಾಳಿದ ಪೊಲೀಸ್ ವಿರುದ್ಧ ಕ್ರಮ ಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರಾಮನಗರದಲ್ಲಿ 40ಕ್ಕೂ ಹೆಚ್ಚು ವಕೀಲರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಕ್ರಮ ಖಂಡಿಸಿ ಪಟ್ಟಣದಲ್ಲಿ ವಕೀಲರು ನ್ಯಾಯಾಲಯ ಕಲಾಪದಿಂದ ಹೊರಗುಳಿದು ಆಕ್ರೋಶ ವ್ಯಕ್ತಪಡಿಸಿದರು.

ವಕೀಲರ ಸಂಘದ ಅಧ್ಯಕ್ಷ ಸತ್ಯನಾರಾಯಣ ನೇತೃತ್ವದಲ್ಲಿ ಕಚೇರಿಯಲ್ಲಿ ಸಂಘದ ಸದಸ್ಯರು ಸಭೆ ನಡೆಸಿ ಚರ್ಚೆ ಮಾಡಿದ ಬಳಿಕ ಕಲಾಪದಿಂದ ಹೊರ ಉಳಿಯುವ ನಿರ್ಣಯ ಕೈಗೊಂಡರು.

ರಾಮನಗರ ವಕೀಲರ ಸಂಘದ ಸಭೆ ನಡೆಯುತ್ತಿದ್ದ ವೇಳೆ ಎಸ್‌ಡಿಪಿಐ ಕಾರ್ಯಕರ್ತರು ವಕೀಲರ ಸಂಘದ ಕಚೇರಿಗೆ ನುಗ್ಗಿರುವ ಬಗ್ಗೆ ವಕೀಲರ ಸಂಘದ ಸದಸ್ಯರು ದೂರು ನೀಡಲು ಹೋದ 40ಕ್ಕೂ ಹೆಚ್ಚು ವಕೀಲರ ವಿರುದ್ಧ ಪ್ರಕರಣ ದಾಖಲಿಸಿ ಒಂದು ಸಮಾಜದ ಪರ ನಿಲ್ಲುವು ತಾಳಿದ ಪೊಲೀಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಪವನ್‌ಗೌಡ, ಉಪಾಧ್ಯಕ್ಷ ಮಂಜುನಾಥ್, ಸಹ ಕಾರ್ಯದರ್ಶಿ ಕೃಷ್ಣೇಗೌಡ, ಸಹಕಾರ ಸಂಘದ ಅಧ್ಯಕ್ಷ ಸಿ.ಕೆ. ಸೋಮು, ಹಿರಿಯ ವಕೀಲರಾದ ನಿಂಗೇಗೌಡ, ಸಿ. ಪುಟ್ಟಸ್ವಾಮಿ, ಸಿಶ್, ನಾರಾಯಣಸ್ವಾಮಿ, ಸಿದ್ದರಾಜು, ಶಿವರಾಜು, ಜಯಸ್ವಾಮಿ ಸೇರಿದಂತೆ ಇತರ ಸದಸ್ಯರು ಉಪಸ್ಥಿತರಿದ್ದರು.

ಐಜೂರು ಠಾಣೆ ಸಬ್ ಇನ್ಸ್ ಪೆಕ್ಟರ್ ಅಮಾನತಿಗೆ ಆಗ್ರಹಿಸಿ ವಕೀಲರಿಂದ ಕಲಾಪ ಬಹಿಷ್ಕಾರಮದ್ದೂರು:

ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ರಾಮನಗರದ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ತನ್ವೀರ್ ಹುಸೇನ್ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ವಕೀಲರು ಮಂಗಳವಾರ ನ್ಯಾಯಾಲಯದ ಕಾರ್ಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಸಂಕೀರ್ಣದಲ್ಲಿರುವ ವಕೀಲರ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ ನೇತೃತ್ವದಲ್ಲಿ ಸಭೆ ನಡೆಸಿದ ವಕೀಲರು ರಾಮನಗರ ವಕೀಲರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಲು ತೀರ್ಮಾನ ಕೈಗೊಂಡರು.

ರಾಮನಗರದ 40 ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಪಿಎಸ್ಐ ತನ್ವೀರ್ ಹುಸೇನ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕೂಡಲೇ ಅಮಾನತು ಗೊಳಿಸುವಂತೆ ಆಗ್ರಪಡಿಸಿದರು.ಈ ವೇಳೆ ಎಂ.ಎನ್.ಶಿವಣ್ಣ ಮಾತನಾಡಿ, ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ ನೀಡಿರುವ ನ್ಯಾಯಾಧೀಶರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ವಿಷಯಗಳನ್ನು ಪೋಸ್ಟ್ ಮಾಡಿದ ವಕೀಲ ಚಾನ್ ಪಾಷಾ ವಿರುದ್ಧ ನ್ಯಾಯಾಲಯವೇ ಸುಮೊಟೋ ಪ್ರಕರಣ ದಾಖಲಿಸಬೇಕಿತ್ತು. ಆದರೆ, ಆ ಕೆಲಸವನ್ನು ವಕೀಲರೇ ಮಾಡಿದ್ದಾರೆ ಎಂದರು.ನಂತರ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ವಿಶಾಲ್ ರಘು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಲು ವಕೀಲರು ಸರ್ವಾನುಮತದ ತೀರ್ಮಾನ ಕೈಗೊಂಡರು. ಐಜೂರು ಪೊಲೀಸ್ ಠಾಣೆ ಪಿಎಸ್ಐ ತನ್ವೀರ್ ಅವರನ್ನು ಅಮಾನತು ಮಾಡುವವರೆಗೂ ಹೋರಾಟ ನಡೆಸಲಾಗುವುದು ಎಂದು ಶಿವಣ್ಣ ತಿಳಿಸಿದರು.

ಈ ವೇಳೆ ವಕೀಲ ಸಂಘದ ಉಪಾಧ್ಯಕ್ಷ ಎ.ಎಂ.ಪುಟ್ಟರಾಜು, ಪ್ರಧಾನ ಕಾರ್ಯದರ್ಶಿ ಎಂ.ಜೆ.ಸುಮಂತ್, ಖಜಾಂಚಿ ಪ್ರಸನ್ನ, ಜಂಟಿ ಕಾರ್ಯದರ್ಶಿ ಬಿ. ಸುವರ್ಣ, ಸಂಘದ ನಿರ್ದೇಶಕರು ಹಾಗೂ ವಕೀಲರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಮೀಸಲಾ? ಈಗಲೇ ತನ್ನಿ ಕಾಂಗ್ರೆಸ್‌ ಬೆಂಬಲಿಸುತ್ತೆ
ಸಿದ್ದು ಭೇಟಿಯಾದ ಜಾರಕಿಹೊಳಿ : ಕುತೂಹಲ