ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಗುಂಡ್ಲುಪೇಟೆ-ನಂಜನಗೂಡು ತಾಲೂಕಿನ 33 ಗ್ರಾಮಸ್ಥರ ಆರಾಧ್ಯದೈವ ಓಂಕಾರ ಸಿದ್ದೇಶ್ವರ ಜಾತ್ರೆಯಲ್ಲಿ ಮೂರು ತೇರುಗಳ ಸಮಾಗಮದಲ್ಲಿ ಸೋಮವಾರ ಭಕ್ತರ ಹಾಗೂ ಬಿಸಿಲಿನ ನಡುವೆ ಸಂಭ್ರಮದಲ್ಲಿ ನಡೆಯಿತು.
ತಾಲೂಕಿನ ಹೊರೆಯಾಲ ಗ್ರಾಮಸ್ಥರು ಕಟ್ಟಿದ್ದ ತೇರಿಗೆ ಶಾಸಕ ಎಚ್ ಎಂ ಗಣೇಶ್ ಪ್ರಸಾದ್ ಗ್ರಾಮಸ್ಥರ ಸಮ್ಮುಖದಲ್ಲಿ ಈಡುಗಾಯಿ ಹೊಡೆವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಯಡವನಹಳ್ಳಿ ಬಳಿಯ ಓಂಕಾರ ಸಿದ್ದೇಶ್ವರಸ್ವಾಮಿ ದೇವಸ್ಥಾನಕ್ಕೆ ತೆರಳಿದ ಶಾಸಕ ಎಚ್ಎಂ ಗಣೇಶ್ ಪ್ರಸಾದ್, ಶಾಸಕರ ಪತ್ನಿ ವಿದ್ಯಾ ಗಣೇಶ್, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್ ಎಸ್ ನಂಜುಂಡಪ್ರಸಾದ್ ದೇವರ ದರ್ಶನ ಪಡೆದರು. ಈ ಸಮಯದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ಎಸ್. ಸಿದ್ದರಾಜು, ಜಾತ್ರಾ ಸಮಿತಿ ಸದಸ್ಯರು ಹಾಗೂ ಬೇಗೂರು ಭಾಗದ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಇದ್ದರು. ಬೇಗೂರು ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿಸಿ ವನರಾಜು ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೆಕ್ಟರ್ ಚರಣ್ ಗೌಡ ಬಿಗಿ ಪೊಲೀಸ್ ಬಂದೋ ಬಸ್ಥ್ ಏರ್ಪಡಿಸಿದ್ದರು.ತಾಲೂಕಿನ ಯಡವನಹಳ್ಳಿ ಗ್ರಾಮದ ಬಳಿಯಿರುವ ಓಂಕಾರ ಸಿದ್ಧೇಶ್ವರ ಜಾತ್ರೆಯು ಸೋಮವಾರ ಬೆಳಗ್ಗೆಯಿಂದಲೇ ಭಕ್ತರ ಸಮೂಹ ಹರಿದು ಬಂದು ಬಿಸಿಲನ್ನು ಲೆಕ್ಕಿಸದೆ ಜಮಾಯಿಸಿದ್ದರು. ತಾಲೂಕಿನ ಹೊರೆಯಾಲ, ಯಡವನಹಳ್ಳಿ ತೇರುಗಳ ಜೊತೆ ಅರೇಪುರ ಹಾಗೂ ನಂಜನಗೂಡು ತಾಲೂಕಿನ ಕೃಷ್ಣಾಪುರ ಗ್ರಾಮದ ವಾನ, ಜಾತ್ರಾ ಮಾಳದಲ್ಲಿದ್ದ ಕಟ್ಟಿದ್ದ ಹೊಸಪುರದ ತೇರು ಒಂದರ ಹಿಂದೆ ಒಂದು ದೇವಸ್ಥಾನದ ಸುತ್ತ ತಿರುಗಿದವು.
ದೇವಸ್ಥಾನದ ಬಳಿಯೇ ವಾಹನಗಳ ನಿಲುಗಡೆ, ಎಳೆನೀರು ಮಾರಾಟ, ಮಿಠಾಯಿ ಅಂಗಡಿ ಹಾಗೂ ಮಕ್ಕಳ ಆಟದ ಸಾಮಾಗ್ರಿ, ಆಟೋ, ಕಾರು, ಬೈಕ್ ಇನ್ನಿತರ ವಾಹನಗಳನ್ನು ಸಹ ದೇವಸ್ಥಾನ ಬಳಿಯಿರುವ ಕೆರೆ ಅಂಗಳದಲ್ಲಿ ಇರಿಸಿದ್ದರು. ಓಂಕಾರ ಸಿದ್ದೇಶ್ವರ ಜಾತ್ರೆಯ ವಿಶೇಷ ಏನಂದರೆ ಹಿಂದಿನ ದಶಕಗಳಿಗೆ ಹೋಲಿಸಿದರೆ ತೇರು ನಿಲ್ಲಿಸುವುದಕ್ಕೇ ಗಲಾಟೆಗಳು ನಡೆದಿವೆ. ವರ್ಷಗಳು ಕಳೆದಂತೆ ಗಲಾಟೆಗಳು ಕಡಿಮೆಯಾಗಿವೆ.