ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಸಿಐಐಎಲ್ ಆಯೋಜಿಸಿರುವ ಮೂರು ದಿನಗಳ ಭಾರತದ ಶಾಸ್ತ್ರೀಯ ಭಾಷೆಗಳ ರಾಷ್ಟ್ರೀಯ ಸಮ್ಮೇಳನವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಕೊಡಬೇಕಾದರೇ ಕೇಂದ್ರ ಸರ್ಕಾರವು ಅನೇಕ ವಿಷಯಗಳಿಗೆ ಬದ್ಧತೆ ತೋರಿಸಬೇಕಾಗುತ್ತದೆ. ಆ ಭಾಷೆಯ ಬೆಳವಣಿಗೆಗೆ, ಸಂಶೋಧನೆಗೆ ಅನುದಾನ ಮೀಸಲಿಡಬೇಕಾಗುತ್ತದೆ. ಕಟ್ಟಡ- ಕಚೇರಿ, ಸಿಬ್ಬಂದಿ, ಸಂಪನ್ಮೂಲ ವ್ಯಕ್ತಿ ಎಲ್ಲವನ್ನೂ ವ್ಯವಸ್ಥೆ ಮಾಡಬೇಕಾಗುತ್ತದೆ. ಆದ್ದರಿಂದ ಸ್ಥಾನಮಾನ ನೀಡುವ ವಿಚಾರ ಸರ್ಕಾರದ್ದೇ ಆಗಿದೆ ಎಂದರು.ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳು ಭಾರತ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಿವೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆಯುವ ನಿಟ್ಟಿನಲ್ಲಿ ಯಾವ ಮಾನದಂಡ ಪಾಲಿಸಬೇಕೋ, ಅವುಗಳನ್ನು ದಾಖಲೆ ಮೂಲಕ ಒದಗಿಸಿವೆ. ತಮ್ಮ ಭಾಷೆಯ ಇತಿಹಾಸ, ಸಾಹಿತ್ಯದ ಬೆಳವಣಿಗೆ ಇನ್ನೂ ಮುಂತಾದ ಅಂಶಗಳ ಕುರಿತು ವಿಸ್ತೃತ ವರದಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ನೀಡಿದ್ದಾರೆ ಎಂದರು.
ಭಾಷೆಯ ಬಗ್ಗೆ ತಿಳಿದುಕೊಳ್ಳಲು ನಮ್ಮ ದೇಶದಲ್ಲಿ ಪುರಾತನ ಕಾಲದ ಹಸ್ತಪ್ರತಿ, ಶಾಸನಗಳು, ಗೋಡೆ ಬರಹ ಯೆಥೇಚ್ಚವಾಗಿ ಲಭ್ಯವಿವೆ. ಆದರೆ ಅವುಗಳನ್ನು ಸಮರ್ಪಕವಾಗಿ ಹುಡುಕಿ, ಕೂಲಂಕಷವಾಗಿ ಸಂಶೋಧಿಸಿ, ಅವುಗಳಲ್ಲಿ ಇರುವ ಮಾಹಿತಿಯನ್ನು ಸಂಗ್ರಹಿಸುವ ಕೆಲಸ ಆಗುತ್ತಿಲ್ಲ ಎಂದು ಅವರು ತಿಳಿಸಿದರು.
ಕೇಂದ್ರೀಯ ಸಂಸ್ಕೃತ ವಿವಿ ಕುಲಪತಿ ಪ್ರೊ. ಶ್ರೀನಿವಾಸ ವರಖೇಡಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಶಾಸ್ತ್ರೀಯ ಭಾಷಾ ಸ್ಥಾನ ಪಡೆಯುವ ವೇಳೆ ಇದ್ದ ಉತ್ಸಾಹ ಹಾಗೂ ಕಾಳಜಿ ಈಗ ಇಲ್ಲ. ಸ್ಥಾನಮಾನ ಪಡೆದ ಬಳಿಕ ಎಷ್ಟು ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ಚಟುವಟಿಕೆ ನಡೆಯುತ್ತಿದೆ. ಎಷ್ಟು ವಿದ್ಯಾರ್ಥಿಗಳು ಇದ್ದಾರೆ. ಎಷ್ಟು ಸಂಶೋಧಕರು ಇದ್ದಾರೆ. ಭಾಷಾ ವಿಷಯವಾಗಿ ಸಂಶೋಧನೆಗಳು ಹಾಗೂ ಬರಹಗಳು ಎಷ್ಟು ಹೊರಬಂದಿವೆ ಎನ್ನುವುದನ್ನು ಗಮನಿಸಿದರೇ ಫಲಿತಾಂಶ ಸಮಾಧಾನಕರವಾಗಿಲ್ಲ ಎಂದರು.
ಸಿಐಐಎಲ್ ನಿರ್ದೇಶಕ ಪ್ರೊ. ಶೈಲೇಂದ್ರ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ನಿರ್ದೇಶಕ ಡಾ. ಪಂಕಜ್ ದ್ವಿವೇದಿ, ಸಮ್ಮೇಳನದ ಸಂಯೋಜಕ ಡಾ.ಎಲ್.ಆರ್. ಪ್ರೇಮಕುಮಾರ್, ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಮೊದಲಾದವರು ಇದ್ದರು.