ಕನ್ನಡಪ್ರಭ ವಾರ್ತೆ ಮಸ್ಕಿ
ಕಳೆದ ಹಲವಾರು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಅನುಕೂಲಕ್ಕಾಗಿ ಬಗರ್ ಹುಕುಂ ಅರ್ಜಿಗಳನ್ನು ತ್ವರಿತವಾಗಿ ಪರಿಶೀಲನೆ ನಡೆಸಿ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಣೆಗೆ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕ ಆರ್. ಬಸನಗೌಡ ಸೂಚಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಬಗರ್ ಹುಕುಂ ಸಮಿತಿಯ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರ್ವಿಹಾಳ ನೇತೃತ್ವದಲ್ಲಿ ಸಮಿತಿಯ ಮೊದಲ ಸಭೆ ಜರುಗಿತು.
ಸಭೆಯಲ್ಲಿ ತಹಸೀಲ್ದಾರ್ ಅರಮನೆ ಸುಧಾ ಮಾತನಾಡಿ, ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 1013 ಅರ್ಜಿ ಬಂದಿದ್ದವು. ಆದರೆ ಸರಿಯಾದ ದಾಖಲೆಗಳು ಇಲ್ಲದ ಕಾರಣದಿಂದ 300ಕ್ಕೂ ಅಧಿಕ ಅರ್ಜಿಗಳನ್ನು ತಿರಸ್ಕಾರ ಮಾಡಲಾಗಿದೆ. ಇನ್ನುಳಿದ 620 ಅರ್ಜಿಗಳು ಇವೆ. ಆದ್ದರಿಂದ ಗ್ರಾಮ ಲೆಕ್ಕ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಮಿತಿಯ ಅಧ್ಯಕ್ಷ ಶಾಸಕ ಆರ್.ಬಸನಗೌಡರಿಗೆ ಮಾಹಿತಿ ನೀಡಿದರು.ನಂತರ ಖಾದಿ ಹಾಗೂ ಗ್ರಾಮದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್. ಬಸನಗೌಡ ತುರ್ವಿಹಾಳ್ ಮಾತನಾಡಿ, ಸರ್ಕಾರ ಬಗರ್ ಹುಕುಂ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಮೊಬೈಲ್ ಆ್ಯಪ್ ತಂದಿದ್ದು ಇದರಿಂದ ಸಾಗುವಳಿ ಮಾಡುವ ರೈತರಿಗೆ ಅನೂಕೂಲವಾಗಲಿದೆ. ಆದ್ದರಿಂದ ಅರ್ಜಿಗಳನ್ನು ಆದಷ್ಟು ಬೇಗ ಇತ್ಯರ್ಥ ಮಾಡಿ ಹಕ್ಕು ಪತ್ರ ವಿತರಣೆ ಮಾಡಲು ಸಿದ್ಧತೆ ನಡೆಸಿ ಎಂದರು.
ನಂತರ ಗ್ರೇಡ್-2 ತಹಸೀಲ್ದಾರ್ ಕೆ.ರಾಘವೇಂದ್ರ ಮಾತನಾಡಿ, ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಅನೂಕೂಲವಾಗಲೆಂದು ಕಂದಾಯ ಇಲಾಖೆಯಿಂದ ಆ್ಯಪ್ ಬಂದಿದೆ. ಸಾಗುವಳಿ ಮಾಡುವ ಸ್ಥಳದಿಂದ ಲಾಗಿನ್ ಅದ ನಂತರ ಅರ್ಜಿಗಳನ್ನು ವಿಲೇವಾರಿ ಮಾಡಲು ಅವಕಾಶ ಸಿಗುತ್ತದೆ. ಆದ್ದರಿಂದ ಸಾಗುವಳಿ ಮಾಡುತ್ತಿದಾರೆ ಇಲ್ಲವೋ ಎಂದು ಖಾತ್ರಿಪಡಿಸುವ ಸಲುವಾಗಿ ಆ್ಯಪ್ ಮೂಲಕ ತಿಳಿಯಲಿದೆ. ಮೊಬೈಲ್ ಆ್ಯಪ್ ಮೂಲಕವೇ ಹಕ್ಕು ಪತ್ರ ನೀಡಲು ಅನೂಕೂಲವಾಗಲಿದೆ ಎಂದು ತಿಳಿಸಿದರು.ಸಮಿತಿಯ ಸದಸ್ಯರಾದ ಬಸ್ಸಪ್ಪ, ನಾಗರಾಜ್, ನಾಗರತ್ನ ಸೇರಿದಂತೆ ಶಿರಸ್ತೇದಾರ ಸಯ್ಯದ್ ಅಕ್ತರ ಅಲಿ, ವಿಜಯಕುಮಾರ್ ಸಜ್ಜನ, ಅರುಣಕುಮಾರ್ ಸೇರಿದಂತೆ ಇತರರು ಇದ್ದರು.
ತಿರಸ್ಕಾರವಾದ ಅರ್ಜಿ ಮತ್ತೊಮ್ಮೆ ಪರಿಶೀಲನೆ ನಡೆಸಿಮಸ್ಕಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಭೂಮಿ ಇಲ್ಲದ ಬಡ ರೈತರು ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಯಾವುದೋ ಕಾರಣಗಳಿಂದ ಅವರ ಅರ್ಜಿಗಳು ತಿರಸ್ಕಾರವಾದರೆ ರೈತರು ತೊಂದರೆ ಅನುಭವಿಸುವಂತಾಗುತ್ತದೆ. ಆದ್ದರಿಂದ 393 ಅರ್ಜಿಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ ಅರ್ಜಿಗಳನ್ನು ವಿಲೇವಾರಿ ಮಾಡಿ ಎಂದು ಸೂಚನೆ ನೀಡಿದರು.
ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿ:ಮಸ್ಕಿ ಕ್ಷೇತ್ರ ವ್ಯಾಪ್ತಿಯಲ್ಲಿ ಸರ್ಕಾರ ನಿಗದಿ ಪಡಿಸಿರುವ ಕಂದಾಯ ಗ್ರಾಮಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸರಿಯಾದ ರೀತಿಯಲ್ಲಿ ಸ್ಥಳ ಪರಿಶೀಲಿಸಿ ಹಕ್ಕು ಪತ್ರಗಳನ್ನು ವಿತರಣೆಗೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.
ಮಸ್ಕಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪಟ್ಟಣದಲ್ಲಿ ಟ್ಯಾಂಕರ್ ಹಾಗೂ ಬೋರ್ವೆಲ್ಗಳನ್ನು ಕೊರೆಸಿ ನೀರು ಸರಬರಾಜು ಮಾಡುವಂತೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮಾ.5ರಂದು ಎಡನಾಲೆಗೆ ನೀರು ಬರುವುದರಿಂದ ಕೆರೆ ತುಂಬಿಸಿಕೊಳ್ಳಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.