- ಕೊಲ್ಲಾಪುರ ಆಸ್ಪತ್ರೇಲಿ ಚಿಕಿತ್ಸೆ ವೇಳೆ ನಿಧನ- ಈ ವ್ಯಾಧಿಗೆ ಕರ್ನಾಟಕದಲ್ಲಿ ಮೊದಲ ಸಾವು
===
ಕೊಲ್ಹಾಪುರ/ ಚಿಕ್ಕೋಡಿ: ಕಳೆದ 2 ತಿಂಗಳ ಅವಧಿಯಲ್ಲಿ ದೇಶದ 5 ರಾಜ್ಯಗಳಲ್ಲಿ 18 ಜನರನ್ನು ಬಲಿ ಪಡೆದಿರುವ ನರಸಂಬಂಧಿ ವ್ಯಾಧಿಯಾದ ಗುಯಿಲಿನ್ ಬರ್ರೆ ಸಿಂಡ್ರೋಮ್ (ಜಿಬಿಎಸ್)ಗೆ ಇದೀಗ ಕರ್ನಾಟಕದ ಮೊದಲ ವ್ಯಕ್ತಿ ಬಲಿಯಾಗಿದ್ದಾರೆ.ಚಿಕ್ಕೋಡಿಯ 64 ವರ್ಷದ ವೃದ್ಧರೊಬ್ಬರು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶನಿವಾರ ಈ ವ್ಯಾಧಿಯಿಂದ ಸಾವಿಗೀಡಾಗಿದ್ದಾರೆ. ಇದು ಈ ಕಾಯಿಲೆಗೆ ರಾಜ್ಯದವರು ಬಲಿಯಾದ ಮೊದಲ ಪ್ರಕರಣವಾಗಿದೆ. ಇದರೊಂದಿಗೆ ಕರ್ನಾಟಕ ಅಕ್ಕಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಈಗಾಗಲೇ ಈ ವ್ಯಾಧಿ ಕಾಣಿಸಿಕೊಂಡಿದೆ.
ಏನಿದು ಜಿಬಿಎಸ್?:
ಇದೊಂದು ನರಸಂಬಂಧಿ ವ್ಯಾಧಿ. ದೇಹದ ನರಮಂಡಲದ ಮೇಲೆ ಹಾಗೂ ರೋಗ ನಿರೋಧಕ ಶಕ್ತಿಯ ಮೇಲೆ ಇದು ಪ್ರಭಾವ ಬೀರುತ್ತದೆ. ಈ ವ್ಯಾಧಿಗೆ ತುತ್ತಾದ ವ್ಯಕ್ತಿಯ ಕೈಕಾಲು ಮರಗಟ್ಟಿ, ಮಾಂಸಖಂಡಗಳು ಬಲಹೀನವಾಗಿ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಅಂಗಾಂಗಗಳ ನಡುವೆ ಸಹಕಾರ ಹಾಗೂ ಸಮತೋಲನ ಸಾಧಿಸಲು ಕಷ್ಟವಾಗುತ್ತದೆ. ಇದು ಹೆಚ್ಚಾಗಿ ನಡುವಯಸ್ಕರು ಮತ್ತು ಮಕ್ಕಳಲ್ಲಿ ಕಂಡುಬರುತ್ತದೆ. ದೇಹದಲ್ಲಿನ ರೋಗನಿರೋಧಕ ಶಕ್ತಿಯು ನರಗಳ ಮೇಲೆ ದಾಳಿ ನಡೆಸಿದಾಗ ಜಿಬಿಎಸ್ ಉಂಟಾಗುತ್ತದೆ.ಕಾರಣ ಏನು?:
ಜಿಬಿಎಸ್ ವ್ಯಾಧಿಗೆ ನಿಖರ ಕಾರಣ ಪತ್ತೆಯಾಗಿಲ್ಲವಾದರೂ, ಇದು ಕಲುಷಿತ ನೀರು, ಆಹಾರ ಸೇವನೆಯಿಂದ ನಮ್ಮ ದೇಹವನ್ನು ಸೇರುವ ವೈರಸ್ ಹಾಗೂ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತದೆ. ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕು ಉಂಟಾಗಿದ್ದರೆ, ಇತ್ತೀಚೆಗಷ್ಟೇ ಲಸಿಕೆ ಪಡೆದಿದ್ದರೆ, ಶಸ್ತ್ರಚಿಕಿತ್ಸೆ ಮತ್ತು ನರರೋಗಗಳಿಗೆ ಒಳಗಾಗಿದ್ದರೆ ಈ ಕಾಯಿಲೆ ಬರುವ ಸಂಭವ ಅಧಿಕವಿರುತ್ತದೆ ಎನ್ನಲಾಗುತ್ತಿದೆ.