ಆರೋಗ್ಯವಂತರಾಗಿರಲು ಶುದ್ಧ ಕುಡಿಯುವ ನೀರು ಅವಶ್ಯಕ: ಸಚಿವ ತಿಮ್ಮಾಪುರ

KannadaprabhaNewsNetwork | Published : Mar 6, 2024 2:19 AM

ಸಾರಾಂಶ

ಲೋಕಾಪುರ ಸಮೀಪದ ಉತ್ತೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಯುನೈಟೆಡ್ ಬ್ರೂವರೀಸ್ ಕಂಪನಿಯವರು ನೀಡಿದ ವಾಟರ್ ಪ್ಯುರಿಪೈಯರ್ ಮತ್ತು ಕೂಲರ್ ವಿತರಣಾ ಸಮಾರಂಭದಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹಸ್ತಾಂತರ ಮಾಡಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಮನುಷ್ಯ ಆರೋಗ್ಯವಂತನಾಗಿರಲು ಶುದ್ಧ ಕುಡಿಯುವ ನೀರು ಅತ್ಯವಶ್ಯಕ. ಚಿಕ್ಕಂದಿನಿಂದಲೇ ಮಕ್ಕಳು ಉತ್ತಮ ಆರೋಗ್ಯ ಕಾಪಾಡಿಕೊಂಡು ಬಂದಲ್ಲಿ ದೇಶದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಸಮೀಪದ ಉತ್ತೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಯುನೈಟೆಡ್ ಬ್ರೂವರೀಸ್ ನವರು ನೀಡಿದ ವಾಟರ್ ಪ್ಯುರಿಪೈಯರ್ ಮತ್ತು ಕೂಲರ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು, ಮಕ್ಕಳ ಆರೋಗ್ಯ ಸುಸ್ಥಿತಿ ಮತ್ತು ವೃದ್ಧಿಗೆ ಶುದ್ಧ ಕುಡಿಯುವ ನೀರು ಅಮೂಲ್ಯವಾಗಿದೆ. ಈ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಯುಬಿಎಲ್ ಕಂಪನಿಗೆ ನೆರವು ಮತ್ತು ಶಾಲಾಭಿವೃದ್ಧಿ ಸಮಿತಿ, ಶಿಕ್ಷಕರ ಸಹಕಾರದೊಂದಿಗೆ ಶುದ್ಧ ಕುಡಿಯುವ ನೀರು ಘಟಕ ಅಳವಡಿಸಲಾಗಿದೆ. ಸರ್ಕಾರಿ ಶಾಲೆಯ ಶೈಕ್ಷಣಿಕ ಮತ್ತು ಅದರ ಪೂರಕ ಅಭಿವೃದ್ಧಿಗೆ ಪೋಷಕರ ಸಹಕಾರ ಅತ್ಯಮೂಲ್ಯವಾಗಿದೆ ಎಂದರು.

ಯುಬಿಎಲ್ ಮುಖ್ಯಸ್ಥ ಸುಖಾನಂದ ಕುಮಾರ ಮಾತನಾಡಿ, ಸರ್ಕಾರಿ ಶಾಲೆ ಮಕ್ಕಳಿಗೂ ಅತ್ಯುತ್ತಮ ಸೌಲಭ್ಯ ಒದಗಿಸುವುದು ಕಂಪನಿಯ ಆಶಯವಾಗಿದೆ. ಸರ್ಕಾರಿ ಶಾಲೆಗಳು ಉಳಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕಂಪನಿ ಸರ್ಕಾರಿ ಶಾಲೆಗಳಿಗೆ ಸಹಾಯ ಮಾಡುತ್ತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಮುಲ್ಲಾ ಮಾತನಾಡಿದರು. ಮೈರನ್ ಎಜಿನ್ಸಿಯ ಇಮ್ರಾನ್, ಇಸಿಒ ಪ್ರಕಾಶ ಹೊಸಮನಿ, ಎಸ್‌ಡಿಎಂಸಿ ಅಧ್ಯಕ್ಷ ಸುಖಾನಂದ ಕುಕನೂರ, ಉಪಾಧ್ಯಕ್ಷ ವಿಠ್ಠಲ ಟಕ್ಕಳಕಿ, ಪಿಕೆಪಿಎಸ್ ಅಧ್ಯಕ್ಷ ಮಹಾಲಿಂಗಪ್ಪ ಚಿನಿವಾಲ, ಮಾಜಿ ಗ್ರಾಪಂ ಅಧ್ಯಕ್ಷ ಪರಮಾನಂದ ಚಿಗರಿ, ಸಿಆರ್‌ಪಿ ಸುರೇಶ ಹರಕಂಗಿ, ಶಾಲೆಯ ಪ್ರಭಾರಿ ಮುಖ್ಯಸ್ಥ ಎ.ಎಂ.ಬಾಗೋಜಿ, ರಾಜು ಭಾಗವಾನ ಹಾಗೂ ಶಾಲಾ ಆಡಳಿತ ಮಂಡಳಿ ಉತ್ತೂರು ಗ್ರಾಮದ ಮುಖಂಡ ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.

Share this article