ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಪಟ್ಟಣದ ವ್ಯಾಪ್ತಿಯಲ್ಲಿನ ಎಲ್ಲ ರಸ್ತೆಗೆ ಹೊಂದಿಕೊಂಡಿರುವ ಪಾದಚಾರಿ ರಸ್ತೆಯ ಅತಿಕ್ರಮಣ ತೆರವು ಮಾಡಲು ಎಲ್ಲ ರೀತಿಯ ಕ್ರಮಗಳನ್ನು ಪುರಸಭೆ ಕೈಗೊಂಡಿದ್ದು, ನಿತ್ಯ ತೆರವು ಮಾಡುತ್ತಿದ್ದರೆ ಸಾರ್ವಜನಿಕರ ಕೆಲಸಕ್ಕೆ ತೊಂದರೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ರಜಾ ದಿನಗಳಲ್ಲಿ ತೆರವು ಕಾರ್ಯ ಮುಂದುವರಿಸಲಿದ್ದಾರೆ.
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಡಾ. ಎ.ಪಿ.ಜೆ. ಅಬ್ದುಲ್ ಕಲಂ ವೃತ್ತ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಿಂದ ಹೊಳಗುಂದಿ ರಸ್ತೆ ಸೇರಿದಂತೆ ಎಲ್ಲ ಕಡೆಗೂ ತೆರವು ಮಾಡಲು ಪುರಸಭೆ ಸಿಬ್ಬಂದಿಯಿಂದ ರಸ್ತೆ ಗುರುತು ಕಾರ್ಯ ಮಾಡಲಾಗುವುದು. ಕೆಲವಡೆ ಈ ಜಾಗ ನಮಗೆ ಮೀಸಲಿದೆ ಎಂದು ಹರಕು ಮುರಕು ಶೆಡ್, ಕಿತ್ತು ಹೋಗಿರುವ ತಳ್ಳುವ ಗಾಡಿಗಳನ್ನು ಇಟ್ಟಿದ್ದಾರೆ. ಅವುಗಳನ್ನು ಕೂಡಲೇ ತೆರವು ಮಾಡುತ್ತೇವೆ. ಈ ತೆರವು ಕಾರ್ಯ ನಿರಂತರವಾಗಿ ನಡೆಯುತ್ತಲೇ ಇರುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಪಚ್ಚಿ ತಿಳಿಸಿದರು.ರಸ್ತೆಗೆ ಹೊಂದಿಕೊಂಡಿರುವ ಪಾದಚಾರಿಯಿಂದ ಗೂಡಂಗಡಿ ವ್ಯಾಪಾರಸ್ಥರಿಗೆ ತಾತ್ಕಾಲಿಕವಾಗಿ 3.5 ಅಡಿ ಜಾಗದಲ್ಲಿ ತಳ್ಳುವ ಗಾಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಮತ್ತೆ ಅತಿಕ್ರಮಣ ಮಾಡಿದರೆ ಪುರಸಭೆಯಿಂದ ದಂಡ ವಸೂಲಿ ಮಾಡಲು ಕ್ರಮ ವಹಿಸುತ್ತೇವೆಂದರು.