7 ಪೊಲೀಸ್ ಠಾಣೆಗಳ ರೌಡಿ ಪರೇಡ್ ಕಾರ್ಯಕ್ರಮದಲ್ಲಿ ಜಿಲ್ಲಾ ಅಡಿಷನಲ್ ಎಸ್ಪಿ ಅಭಿಪ್ರಾಯ
ಕನ್ನಡಪ್ರಭ ವಾರ್ತೆ ಕೊಟ್ಟೂರುಯಾವುದೋ ಕಾರಣಕ್ಕೆ ಅಪರಾಧಿಗಳಾಗಿ ಪ್ರಕರಣ ದಾಖಲಿಸಿಕೊಂಡಿರುವ ಆರೋಪಿಗಳು ಶಾಶ್ವತವಾಗಿ ಅಪರಾಧ ಕೃತ್ಯಗಳಲ್ಲಿ ಮುಂದುವರಿಯದೆ ಸಚ್ಛಾರಿತ್ರ್ಯ ಮತ್ತು ಸಮಾಜಮುಖಿ ವ್ಯಕ್ತಿಗಳಾಗಿ ಬದಲಾವಣೆಗೊಳ್ಳಬೇಕು. ಇದಕ್ಕೆ ಪೊಲೀಸ್ ಇಲಾಖೆ ಸದಾ ಬೆಂಬಲ ನೀಡುತ್ತದೆ ಎಂದು ವಿಜಯನಗರ ಜಿಲ್ಲಾ ಅಡಿಷನಲ್ ಎಸ್ಪಿ ಸಲೀಂ ಪಾಷ ಹೇಳಿದರು.
ಭಾನುವಾರ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಆಯೋಜಿಸಿದ್ದ ಕೂಡ್ಲಿಗಿ ಪೊಲೀಸ್ ಉಪವಿಭಾಗದ 7 ಪೊಲೀಸ್ ಠಾಣೆಗಳ ರೌಡಿ ಪರೇಡ್ನಲ್ಲಿ ಮಾತನಾಡಿದರು.ಅಪರಾಧ ಕೃತ್ಯಗಳಲ್ಲಿ ನಿರಂತರ ಭಾಗವಹಿಸುವುದರಿಂದ ಬದುಕಿನ ಎಲ್ಲ ಬಗೆಯ ಸಂಕಷ್ಟ ಸಂಬಂಧಿಕರು ಅನುಭವಿಸಬೇಕಾಗುತ್ತದೆ, ಪೊಲೀಸ್ ಪ್ರಕರಣಗಳಲ್ಲಿ ದಾಖಲಾದ ಮತ್ತು ಶಿಕ್ಷೆಗೆ ಒಳಗಾದ ಆರೋಪಿಗಳು ನಂತರ ಮನಃಪರಿವರ್ತನೆಗೊಂಡು ಉತ್ತಮ ಪ್ರಜೆಯಾಗಿ ಬದುಕುವತ್ತ ಮನಸ್ಸು ಮಾಡಬೇಕು ಇಲ್ಲದಿದ್ದರೆ ಜೀವಂತ ಇರುವವರೆಗೂ ಅಪರಾಧಿ ಪ್ರಜ್ಞೆಯಲ್ಲೆ ಮುಳುಗಿರಬೇಕಾಗಿರುತ್ತದೆ ಎಂದರು.
ಅಪರಾಧ ಕೃತ್ಯ ಮಾಡಿ ನಂತರ ಇದರಲ್ಲೆ ಮುಂದುವರಿಯುವ ಮನಸ್ಸು ಮಾಡದೇ ಸನ್ನಡತೆ ಮೈಗೂಡಿಸಿಕೊಂಡರೆ ಪೊಲೀಸ್ ಆಡಳಿತದಿಂದ ಕೆಲವೊಂದು ಪ್ರಕರಣಗಳಿಂದ ಮುಕ್ತಗೊಳಿಸುವ ಕ್ರಮ ಹಿರಿಯ ಅಧಿಕಾರಿಗಳು ಕೈಗೊಳ್ಳಲಿದ್ದಾರೆ ಎಂದರು.ಕೂಡ್ಲಿಗಿ ಡಿವೈಎಸ್ಪಿ ದೊಡ್ಡಮನಿ ಮಾತನಾಡಿ, ಪ್ರತಿ ಪ್ರಜೆ ಪೊಲೀಸ್ ಸ್ನೇಹಿಯಾಗಬೇಕೆಂಬುದನ್ನೆ ಪೊಲೀಸ್ ಆಡಳಿತ ಬಯಸುತ್ತಿದ್ದು, ಇದಕ್ಕೆ ಪೂರಕವಾಗಿ ಸಮಾಜ ಬಾಂಧವರು ಸ್ಪಂದಿಸಿ ಯಾವುದೇ ಬಗೆಯ ಅಪರಾದ ಪ್ರಕರಣಗಳು ಜರುಗದಂತೆ ಗಮನ ಹರಿಸಬೇಕು ಎಂದರು.
ಆರೋಪಿಗಳು ಮುಂದಿನ ತಮ್ಮ ಮತ್ತು ಕುಟುಂಬದ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಅಪರಾದಿ ಮನೋಭಾವದಿಂದ ಹೊರಗೆ ಬರಬೇಕು, ಅಪರಾಧಿತನದಲ್ಲಿ ಮುಂದುವರೆದರೆ ಎಂದೂ ಶಾಂತಿ ಮತ್ತು ನೆಮ್ಮದಿ ಕಂಡುಕೊಳ್ಳಲಾರರು ಈ ಬಗ್ಗೆ ಆರೋಪಿಗಳು ಗಮನಹರಿಸಿ ಉತ್ತಮ ನಾಗರಿಕನಾಗಿ ಬದಲಾವಣೆಗೊಳ್ಳಬೇಕು ಎಂದರು.ಪೊಲೀಸ್ ಪರೇಡ್ನಲ್ಲಿ 7 ಪೊಲೀಸ್ ಠಾಣೆಗಳ 150 ರೌಡಿಗಳ ವಿಚಾರಣೆ ಕೈಗೊಂಡ ಅಡಿಷನಲ್ ಎಸ್ಪಿ ಮತ್ತು ಡಿವೈಎಸ್ಪಿ ಕೆಲವೊಂದು ಮಾರ್ಗದರ್ಶನ ನೀಡಿದರು. ಪರೇಡ್ನಲ್ಲಿ ಸಿಪಿಐಗಳಾದ ಕೊಟ್ಟೂರಿನ ವೆಂಕಟಸ್ವಾಮಿ, ಎಚ್.ಬಿ. ಹಳ್ಳಿಯ ವಿಕಾಸ್ ಲಮಾಣಿ, ಕೂಡ್ಲಿಗಿ ಪ್ರಹ್ಲಾದ್, ಸಬ್ಇನ್ಸ್ಪೆಕ್ಟರ್ಗಳಾದ ಗೀತಾಂಜಲಿ ಸಿಂಧೆ (ಕೊಟ್ಟೂರು), ಬಸವರಾಜ ಅಡವಿಬಾವಿ (ಎಚ್.ಬಿ. ಹಳ್ಳಿ) ಗುರುಚಂದ್ರ (ತಂಬ್ರಳ್ಳಿ), ಸುಬ್ರಹ್ಮಣ್ಯ (ಗುಡೇಕೋಟೆ), ಬೀಬಿ ಮರಿಯಾಂಬೆ (ಮರಿಯಮ್ಮನಹಳ್ಳಿ), ಪ್ರಕಾಶ್ (ಕೂಡ್ಲಿಗಿ) ಮತ್ತು ಸಿದ್ರಾಮ (ಖಾನಹೊಸಹಳ್ಳಿ) ಇದ್ದರು.