ಶತಮಾನಗಳಿಂದ ಇರುವ ನಿಷೇಧಗೆರೆಗಳು ನಶಿಸಿ ಹೋಗುತ್ತಿರುವುದಕ್ಕೆ ಕಾರಣ ವಿದ್ಯೆ. ಪ್ರತಿಯೊಬ್ಬರೂ ಶಿಕ್ಷಣ ಪಡೆದು ಅಭಿವೃದ್ಧಿ ಹೊಂದಿದರೆ ನಿಷೇಧದ ಎಲ್ಲ ಗೆರೆಗಳೂ ಸಹಜವಾಗಿ ಮಾಯವಾಗುತ್ತವೆ.
ಹೊನ್ನಾವರ:
ಎಲ್ಲ ಸಮುದಾಯಗಳೂ, ಹಳ್ಳಿಗಳು ಅಭಿವೃದ್ಧಿಯಾಗಬೇಕು, ಆಗ ಮಾತ್ರ ದೇಶ ಅಭಿವೃದ್ಧಿಯಾಗುವುದು ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ನುಡಿದರು.
ತಾಲೂಕಿನ ಕೆಳಗಿನೂರಿನಲ್ಲಿ ತಾಲೂಕು ಒಕ್ಕಲಿಗರ ಸಂಘ ಹಾಗೂ ಭೈರವಿ ಮಹಿಳಾ ಸಂಘದ ಆಶ್ರಯದಲ್ಲಿ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ನಡೆದ ಒಕ್ಕಲು ಉತ್ಸವದಲ್ಲಿ ಆದಿ ಚುಂಚನಗಿರಿ ನೂತನ ಶಾಖಾ ಮಠದ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಶತಮಾನಗಳಿಂದ ಇರುವ ನಿಷೇಧಗೆರೆಗಳು ನಶಿಸಿ ಹೋಗುತ್ತಿರುವುದಕ್ಕೆ ಕಾರಣ ವಿದ್ಯೆ. ಪ್ರತಿಯೊಬ್ಬರೂ ಶಿಕ್ಷಣ ಪಡೆದು ಅಭಿವೃದ್ಧಿ ಹೊಂದಿದರೆ ನಿಷೇಧದ ಎಲ್ಲ ಗೆರೆಗಳೂ ಸಹಜವಾಗಿ ಮಾಯವಾಗುತ್ತವೆ. ಆದಿಚುಂಚನಗಿರಿ ಮಠದ ಯಾವುದೇ ಹಳ್ಳಿಯ ಶಾಲೆಗಳಿಗೆ ಹೋದರೂ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂದು ನುಡಿದರು.ಸಚಿವ ಮಂಕಾಳು ವೈದ್ಯ ಮಾತನಾಡಿ, ಇಂದು ಮಠಗಳನ್ನು ಕೇವಲ ರಾಜಕಾರಣಕ್ಕಾಗಿ ಬಳಸಿಕೊಳ್ಳುವ ವಿದ್ಯಮಾನಗಳು ನಡೆಯುತ್ತಿದೆ. ಆದರೆ ಆದಿ ಚುಂಚನಗಿರಿ ಮಠ ಸರ್ಕಾರದಿಂದ ಮಾಡಲಾಗದ ಕಾರ್ಯಗಳನ್ನು ಮಾಡುತ್ತಿದೆ. ಅನೇಕರಿಗೆ ಉನ್ನತ ಶಿಕ್ಷಣ ನೀಡುತ್ತ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ ಎಂದರು. ಇಂದು ತಾವು ಶಾಸಕರಾಗಿ, ಸಚಿವರಾಗಲು ಒಕ್ಕಲಿಗ ಸಮುದಾಯದ ವಿಶ್ವಾಸ ಹಾಗೂ ಆದಿಚುಂಚನಗಿರಿ ಪೀಠದ ಆಶೀರ್ವಾದವೇ ಕಾರಣ ಎಂದರು.
ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ತಿಮ್ಮಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಒಕ್ಕಲಿಗ ಸಮಾಜದ ಹಿರಿಯ ವಕೀಲ ಕೆ.ಟಿ. ಗೌಡ ಅವರನ್ನು ಒಕ್ಕಲಿಗ ಸಮುದಾಯದ ವತಿಯಿಂದ ಸನ್ಮಾನಿಸಲಾಯಿತು.
ಎಸ್ಎಸ್ಎಲ್ಸಿ, ಪಿಯುಸಿ, ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಹಾಗೂ ಪ್ರಸಕ್ತ ಸಾಲಿನ ತಾಲೂಕಿನ ವಿವಿಧ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರಾದ ಒಕ್ಕಲಿಗ ಸಮಾಜದವರನ್ನು ಗೌರವಿಸಲಾಯಿತು.ಬಿಜಿಎಸ್ ರೈತರತ್ನ ಪ್ರಶಸ್ತಿಯನ್ನು ಕೃಷಿಯಲ್ಲಿ ಸಾಧನೆಗೈದ ಒಕ್ಕಲಿಗ ಸಮಾಜದ ಮಾವಿನಕುರ್ವಾದ ಕೆರಿಯಾ ಗೌಡ, ಕಾಸರಕೋಡಿನ ಕನ್ನೆ ಕನ್ಯಾ ಗೌಡ ಅವರಿಗೆ ಪ್ರದಾನ ಮಾಡಲಾಯಿತು. ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಧರ್ಮೇಶ ಸಿರಿಬೈಲ್, ಜಲಸಾರಿಗೆ ಮಂಡಳಿಯ ಸಿಇಒ ಜಯರಾಮ ರಾಯಪುರೆ, ಮೀನುಗಾರಿಕೆ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ ರವೀಂದ್ರ ಪಿ.ಸಿ., ಭೈರವಿ ಮಹಿಳಾ ಸಂಘದ ತಾಲೂಕಾಧ್ಯಕ್ಷೆ ಶಾಂತಿ ಗೌಡ, ಕೃಷ್ಣ ಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೇಶ ಸಿ.ಕೆ., ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ಅಧ್ಯಕ್ಷೆ ಭಾರತೀಶಂಕರ, ಗಣಪಯ್ಯ ಗೌಡ, ನಿವೃತ್ತ ತಹಸೀಲ್ದಾರ್ ವಿ.ಆರ್. ಗೌಡ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಗೌಡ, ಹೆಸ್ಕಾಂ ಎಂಜಿನಿಯರ್ ಶಂಕರ ಗೌಡ, ತಾಲೂಕು ಆಸ್ಪತ್ರೆ ವೈದ್ಯ ರಮೇಶ ಗೌಡ, ಕೆಳಗಿನೂರು ಗ್ರಾಪಂ ಅಧ್ಯಕ್ಷೆ ಚಿತ್ರಾಕ್ಷಿ ಗೌಡ, ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ವಸಂತ ಗೌಡ, ಒಕ್ಕಲಿಗ ಯಕ್ಷಗಾನ ಬಳಗದ ಅಧ್ಯಕ್ಷ ರಾಮ ಗೌಡ, ಉದ್ದಿಮೆದಾರ ಗೋವಿಂದ ಗೌಡ, ಚಂದ್ರಹಾಸ ಗೌಡ, ಒಕ್ಕಲಿಗ ಸಂಘದ ಮಾಬ್ಲ ಗೌಡ ಮತ್ತಿತರರು ಉಪಸ್ಥಿತರಿದ್ದರು. ಒಕ್ಕಲಿಗರ ಸಂಘದ ತಾಲೂಕು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಗೌಡ ಪ್ರಾಸ್ತಾವಿಕ ಮಾತನಾಡಿದರು. ಲಕ್ಷ್ಮೀಕಾಂತ ಗೌಡ ಸ್ವಾಗತಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.