ಕನ್ನಡಪ್ರಭ ವಾರ್ತೆ ಮೈಸೂರು
ಮುಸ್ಲಿಂ ಧರ್ಮಗುರು ಅಕ್ಮಲ್ ಪಾಷ ಅವರ ಕೊಲೆಯನ್ನು ಖಂಡಿಸಿ ಎಸ್ ಡಿಪಿಐ ಮುಖಂಡರು ಹಾಗೂ ಕಾರ್ಯಕರ್ತರು ಶಾಂತಿನಗರ ಬಡಾವಣೆಯ ಮಹದೇವಪುರ ಮುಖ್ಯರಸ್ತೆಯಲ್ಲಿರುವ ಮದನಿ ಮಸೀದಿ ಎದುರು ಭಾನುವಾರ ಸಂಜೆ ಪ್ರತಿಭಟಿಸಿದರು.ಈ ವೇಳೆ ಎಸ್ಡಿಪಿಐ ಮುಖಂಡ ಅಫ್ಸರ್ ಕೊಡ್ಲಿಪೇಟೆ ಮಾತನಾಡಿ, ಅಕ್ಮಲ್ ಪಾಷ ಅವರನ್ನು ಕೊಲೆ ಮಾಡಿದ ಆರೋಪಿಗಳು ಮತ್ತು ಅವರಿಗೆ ಕುಮ್ಮಕ್ಕು ನೀಡಿದ ವ್ಯಕ್ತಿಗಳ ಬಗ್ಗೆ ಸಾಕಷ್ಟು ಮಾಹಿತಿ ಇದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿಲ್ಲ. ಏನು ಕಾರಣ? ಯಾರು ಅವರನ್ನು ರಕ್ಷಿಸುತ್ತಿದ್ದಾರೆ? ಪೊಲೀಸರ ಕೈ ಕಟ್ಟಿ ಹಾಕಿರುವ ರಾಜಕಾರಣಿಗಳ ಹೆಸರನ್ನಾದರೂ ಹೇಳಿ ನಾವು ಸರ್ಕಾರವನ್ನು ಪ್ರಶ್ನಿಸುತ್ತೇವೆ ಎಂದು ಒತ್ತಾಯಿಸಿದರು.
ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಜಿಲ್ಲಾಧ್ಯಕ್ಷ ರಫತ್ ಖಾನ್, ಮುಖಂಡರಾದ ಅಮ್ಜದ್ ಖಾನ್, ನೂರುದ್ದೀನ್ ಮೌಲಾನ, ತಬ್ರೇಝ್ ಸೇಠ್ ಮೊದಲಾದವರು ಇದ್ದರು.ಐವರ ವಿರುದ್ಧ ಪ್ರಕರಣ ದಾಖಲು
ಮೈಸೂರು ಮಹಾ ನಗರ ಪಾಲಿಕೆ ಮಾಜಿ ಸದಸ್ಯ ಅಯಾಜ್ ಪಾಷ (ಪಂಡು) ಸಹೋದರ, ಮುಸ್ಲಿಂ ಧರ್ಮಗುರು ಅಕ್ಮಲ್ ಪಾಷ ಕೊಲೆ ಪ್ರಕರಣಕ್ಕೆ ಸಂಬಂಧ ಐವರ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅಕ್ಮಲ್ ಪಾಷ (45) ಉದಯಗಿರಿಯ ಮಸೀದಿಯಿಂದ ಮನೆಗೆ ಶುಕ್ರವಾರ ರಾತ್ರಿ ತೆರಳುತ್ತಿದ್ದಾಗ ಮಾದೇಗೌಡ ವೃತ್ತದ ಸಮೀಪ ಬೈಕ್ ಗಳಲ್ಲಿ ಬಂದ 6 ಮಂದಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದು ಪರಾರಿಯಾಗಿದ್ದಾರೆ.
ಈ ಸಂಬಂಧ ಅಕ್ಮಲ್ ಪತ್ನಿ ನೀಡಿದ ದೂರಿನ ಮೇರೆಗೆ ಉದಯಗಿರಿ ಠಾಣೆ ಪೊಲೀಸರು, ಪಾಲಿಕೆ ಮಾಜಿ ಸದಸ್ಯ ಬಷೀರ್ ಅಹಮ್ಮದ್, ಈತನ ಪುತ್ರ ಫೈಜಾನ್ ಅಹಮದ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಪರ್ವೀಜ್ ಮತ್ತು ಇಬ್ರಾಹಿಂ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.