ನಗರಸಭೆ, ಗ್ರಾಮಾಂತರ ರಸ್ತೆಗಳ ರಿಪೇರಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಕಾಂಗ್ರೆಸ್ ಮನವಿ

KannadaprabhaNewsNetwork | Published : Aug 15, 2024 1:47 AM

ಸಾರಾಂಶ

ನಗರಸಭೆ ವ್ಯಾಪ್ತಿಯ ಸುತ್ತಮುತ್ತಲಿನ ಮತ್ತು ಗ್ರಾಮಾಂತರ ಪ್ರದೇಶದ ರಸ್ತೆ ರಿಪೇರಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಕಾಂಚನ್‌ ನೇತೃತ್ವ ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ

ನಗರಸಭೆ ವ್ಯಾಪ್ತಿಯ ಸುತ್ತಮುತ್ತಲಿನ ಮತ್ತು ಗ್ರಾಮಾಂತರ ಪ್ರದೇಶದ ರಸ್ತೆ ರಿಪೇರಿಗೆ ಆಗ್ರಹಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯದ ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟ ಉಡುಪಿ ನಗರದ ಸುತ್ತಮುತ್ತಲಿನ ಹಾಗೂ ರಾಜ್ಯದ ಅತೀ ದೊಡ್ಡ ಮೀನುಗಾರಿಕಾ ಬಂದರು ಪ್ರದೇಶ ಹಾಗೂ ಪ್ರವಾಸೋದ್ಯಮ ನಾಡಾಗಿರುವ ಮಲ್ಪೆಯ ಪ್ರಮುಖ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿದ್ದು ಸಾರ್ವಜನಿಕರಿಗೆ ಸಂಚಾರಿಸಲು ಕಷ್ಟಕರವಾಗಿದೆ.

ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಸ್ಥಿತಿ ಅಯೋಮಯವಾಗಿದೆ. ಮಲ್ಪೆ ಮೀನುಗಾರಿಕಾ ಬಂದರಿನಿಂದ ಉಡುಪಿ ಮಾರ್ಗವಾಗಿ ಸಂಚರಿಸುವ ಬಹುತೇಕ ಎಲ್ಲ ರಸ್ತೆಗಳು ಹೊಂಡಮಯವಾಗಿದೆ. ಮುಂದೆ ಸಾಲುಸಾಲಾಗಿ ಬರುವ ಹಬ್ಬಗಳಾದ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ ಹಬ್ಬಗಳಿರುವುದರಿಂದ ಸಾರ್ವಜನಿಕ ಹಾಗೂ ಮನೆಗಳಲ್ಲಿ ಪೂಜಿಸಲ್ಪಡುವ ಗಣೇಶನ ವಿಗ್ರಹಗಳನ್ನು ವಿಸರ್ಜನೆ ಮಾಡಲು ಇದೇ ರಸ್ತೆಗಳಲ್ಲಿ ಸಂಚರಿಸುವುದರಿಂದ ಮುಂಜಾಗ್ರತೆಯಾಗಿ ಈ ಹೊಂಡಗಳನ್ನು ಮುಚ್ಚಿ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ತಾವೂ ತಕ್ಷಣ ಉಡುಪಿ ನಗರಸಭೆಗೆ, ಪಂಚಾಯಿತಿ ವ್ಯಾಪ್ತಿಯ ಅಧಿಕಾರಿಗಳಿಗೆ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಪ್ರಾಧಿಕಾರಕ್ಕೆ ಆದಷ್ಟು ಬೇಗನೇ ದುರಸ್ಥಿ ಮಾಡಿಕೊಡುವಂತೆ ಸೂಚನೆ ನೀಡಬೇಕಾಗಿ ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ಪಕ್ಷದ ನಾಯಕರಾದ ಗಣೇಶ್ ನೆರ್ಗಿ, ಸತೀಶ್ ಕುಮಾರ್ ಮಂಚಿ, ಶರತ್ ಶೆಟ್ಟಿ, ಸತೀಶ್ ಕೊಡವೂರು, ಶಶಿರಾಜ್ ಕುಂದರ್, ಆನಂದ ಪೂಜಾರಿ, ಮೀನಾಕ್ಷಿ ಮಾಧವ, ಕೃಷ್ಣ ಹೆಬ್ಬಾರ್, ಜ್ಯೋತಿ ಹೆಬ್ಬಾರ್, ಮಮತಾ ಶೆಟ್ಟಿ, ಸಂಧ್ಯಾ ತಿಲಕರಾಜ್, ಸತೀಶ್ ಪುತ್ರನ್, ಹಮ್ಮದ್, ಸುರೇಂದ್ರ ಆಚಾರ್ಯ, ಸದಾನಂದ ಮೂಲ್ಯ ಅರ್ಚನಾ ದೇವಾಡಿಗ, ಆಶಾ ಚಂದ್ರಶೇಖರ್, ಹಸನ್ ಅಜ್ಜರಕಾಡು ಉಪಸ್ಥಿತರಿದ್ದರು.

Share this article