ಸ್ವಾರ್ಥಕ್ಕಾಗಿ ಸಂವಿಧಾನ ಬದಲಿಸಿದ್ದು ಕಾಂಗ್ರೆಸ್‌

KannadaprabhaNewsNetwork | Published : Jul 10, 2024 12:36 AM

ಸಾರಾಂಶ

ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಕರ್ನಾಟಕ ರಾಯಭಾರಿಯಾಗಿ ನಾನು ಕೆಲಸ ಮಾಡುತ್ತೇನೆ. ನರೇಂದ್ರ ಮೋದಿ ಅವರ ಬೆಂಬಲಿಗನಾಗಿ, ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಚಿತ್ರದುರ್ಗ ಸಂಸದ ಹಾಗೂ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಕರ್ನಾಟಕ ರಾಯಭಾರಿಯಾಗಿ ನಾನು ಕೆಲಸ ಮಾಡುತ್ತೇನೆ. ನರೇಂದ್ರ ಮೋದಿ ಅವರ ಬೆಂಬಲಿಗನಾಗಿ, ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಚಿತ್ರದುರ್ಗ ಸಂಸದ ಹಾಗೂ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮೋದಿಯವರ ಬಗ್ಗೆ ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡಿ ಜನರಿಗೆ ತಪ್ಪು ಕಲ್ಪನೆ ಮಾಡಿ, ಅಲ್ಪಸಂಖ್ಯಾತರಿಗೆ ತೊಂದರೆ ಕೊಡುತ್ತಾರೆ, ದೇಶದ ಸಂವಿಧಾನದ ಬದಲಾವಣೆ ಎಂದು ಎಸ್ಸಿ, ಎಸ್ಟಿ ಹಿಂದುಳಿದ ವರ್ಗದವರಿಗೆ ತಲೆಕೆಡಿಸುವ ಕೆಲಸ ಮಾಡಿದ್ದು ಕಾಂಗ್ರೆಸ್ ಪಕ್ಷ. ದೇಶಕ್ಕೆ ಅಪಾಯ ಇರುವುದು ಸಂವಿಧಾನ ಬದಲಾವಣೆ ಮಾಡಿದ್ದು ಕಾಂಗ್ರೆಸ್ ಪಕ್ಷ. 78 ಸಾರಿ ಸಂವಿಧಾನ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್ ಪಕ್ಷ. ನೆಹರೂ ಕಾಲದಿಂದ ಮನಮೋಹನಸಿಂಗ್ ಕಾಲದವರೆಗೂ ಅನೇಕ ಬಾರಿ ಸಂವಿಧಾನ ತಿದ್ದುಪಡಿ ಮಾಡಿದ್ದಾರೆ. ದೇಶದ ಹಿತಕ್ಕಾಗಿ ಅಲ್ಲಾ ತಮ್ಮ ಸ್ವಾರ್ಥಕ್ಕಾಗಿ ತಿದ್ದುಪಡಿ ಮಾಡಿದ್ದಾರೆ ಹೊರತು, ತಮ್ಮ ಬಂಧುಬಳಗದವರಿಗೆ ಅನುಕೂಲವಾಗುವ ಸಲುವಾಗಿ ತಿದ್ದುಪಡಿ ಮಾಡಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ಲೋಕಣ್ಣ ಕತ್ತಿ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರೋಣ. ಕಾರ್ಯಕರ್ತರು ಎದೆಗುಂದದೆ ಮುಂಬರುವ ಜಿಪಂ, ತಾಪಂ, ಪಪಂ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸೋಣ. ಇದಕ್ಕೆ ಈಗಿನಿಂದಲೇ ತಯಾರಿ ಮಾಡಿ, ಪಕ್ಷಕ್ಕಾಗಿ ಒಟ್ಟಾಗಿ ಕಾರ್ಯನಿರ್ವಹಿಸೋಣ. ಮುಧೋಳ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಯಾವುದೇ ಅಭಿವೃದ್ಧಿ ಕಂಡಿಲ್ಲ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಇದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಕಣ್ಣಾರೆ ಕಂಡಿದ್ದೇವೆ ಎಂದರು.

ಈ ವೇಳೆ ಬಿಜೆಪಿ ಮುಖಂಡರಾದ ಅರುಣ ಕಾರಜೋಳ, ಬಿಜೆಪಿ ಗ್ರಾಮೀಣ ಮಂಡಳದ ಅಧ್ಯಕ್ಷ ಸಂಗನಗೌಡ ಕಾತರಕಿ, ಕೆಎಂಎಫ್ ನಿರ್ದೇಶಕ ವಿವೇಕಾನಂದ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಾರಾಯಣ ಯಡಹಳ್ಳಿ, ಲೋಕಣ್ಣ ಕತ್ತಿ, ಎಂ.ಎಂ.ವಿರಕ್ತಮಠ, ಬಿ.ವ್ಹಿ.ಹಲಕಿ, ವ್ಹಿ.ಎಂ.ತೆಗ್ಗಿ, ಯಮನಪ್ಪ ಹೊರಟ್ಟಿ, ಬಿ.ಎಲ್.ಬಬಲಾದಿ, ಪರಮಾನಂದ ಟೊಪಣ್ಣವರ, ವಿರೇಶ ಪಂಚಕಟ್ಟಿಮಠ, ಪ್ರಕಾಶ ಚಿತ್ತರಗಿ, ಆಶೀಫ್ ಜೀರಗಾಳ, ಸಿದ್ರಾಮಪ್ಪ ದೇಸಾಯಿ, ಶಿವಪ್ಪ ಚೌಧರಿ, ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ, ವಿನೋದ ಘೋರ್ಪಡೆ, ಮಾರುತಿ ರಂಗಣ್ಣವರ, ಗೋಪಾಲಗೌಡ ಪಾಟೀಲ, ಅರುಣ ಮುಧೋಳ, ಮಲಿಕಸಾಬ ಭಾಗವಾನ, ಕಾಶಲಿಂಗ ಮಾಳಿ ವರ್ಚಗಲ್, ಲಕ್ಷಾನಟ್ಟಿ, ಅರಳಿಕಟ್ಟಿ, ಹೆಬ್ಬಾಳ, ದಾದನಟ್ಟಿ, ಹೊಸಕೊಟಿ, ವಿವಿಧ ಗ್ರಾಮಗಳಿಂದ ಅನೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಗೋವಿಮದ ಕಾರಜೋಳ ಅವರನ್ನು ಸನ್ಮಾನಿಸಿದರು.

Share this article