ನಗರಸಭೆಯಲ್ಲಿ ಕಾಂಗ್ರೆಸ್‌ ಅಧಪತ್ಯ ಸಾಧಿಸಿದ ಶಾಸಕ ಶಿವಲಿಂಗೇಗೌಡ

KannadaprabhaNewsNetwork | Published : Aug 23, 2024 1:01 AM

ಸಾರಾಂಶ

ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಪರ-ವಿರೋಧ ಗೋಜಲಿನಲ್ಲಿ ಎಲ್ಲೂ ಗುರುತಿಸಿಕೊಳ್ಳದೇ ಸೈಲೆಂಟಾಗಿದ್ದುಕೊಂಡೇ ತಮ್ಮ ಆಪ್ತರ ಮೂಲಕ ನಗರಸಭೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಹೊರಗೆ ಏನೇ ನಡೆಯಲಿ, ಒಳಗೆ ಹೀಗೆಯೇ ಆಗಲಿದೆ ಎಂದು ಎಲ್ಲರೂ ಲೆಕ್ಕಾಚಾರ ಮಾಡಿದಂತೆಯೇ ಜೆಡಿಎಸ್‌ನಿಂದ ಗೆದ್ದಿರುವ ಹಿರಿಯ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಎಂ, ಸಮೀವುಲ್ಲಾ ಅವರೇ ಮತ್ತೊಮ್ಮೆ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಮನೋಹರ್ ಮೇಸ್ತ್ರಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಪಕ್ಷಾಂತರ, ರಾಜೀನಾಮೆ, ಅನರ್ಹತೆ, ಇತ್ಯಾದಿ ಹಲವು ರಾಜಕೀಯ ಬೆಳವಣಿಗೆಗಳಿಂದಾಗಿ ತೀವ್ರ ಕುತೂಹಲ ಕೆರಳಿದ್ದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಪರ-ವಿರೋಧ ಗೋಜಲಿನಲ್ಲಿ ಎಲ್ಲೂ ಗುರುತಿಸಿಕೊಳ್ಳದೇ ಸೈಲೆಂಟಾಗಿದ್ದುಕೊಂಡೇ ತಮ್ಮ ಆಪ್ತರ ಮೂಲಕ ನಗರಸಭೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೊರಗೆ ಏನೇ ನಡೆಯಲಿ, ಒಳಗೆ ಹೀಗೆಯೇ ಆಗಲಿದೆ ಎಂದು ಎಲ್ಲರೂ ಲೆಕ್ಕಾಚಾರ ಮಾಡಿದಂತೆಯೇ ಜೆಡಿಎಸ್‌ನಿಂದ ಗೆದ್ದಿರುವ ಹಿರಿಯ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಎಂ, ಸಮೀವುಲ್ಲಾ ಅವರೇ ಮತ್ತೊಮ್ಮೆ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಮನೋಹರ್ ಮೇಸ್ತ್ರಿ ಆಯ್ಕೆಯಾದರು. ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಮೊದಲು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಯಿತು. ಹಾಸನ ಉಪ ವಿಭಾಗ ಅಧಿಕಾರಿಗಳು ಆದ ಚುನಾವಣಾ ಅಧಿಕಾರಿ ಮಾರುತಿ, ಸಹಾಯಕ ಚುನಾವಣಾಧಿಯಾಗಿ ನಗರಸಭೆ ಆಯುಕ್ತ ಕೃಷ್ಣಮೂರ್ತಿ ಕರ್ತವ್ಯ ನಿರ್ವಹಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಸಮೀವುಲ್ಲಾ ಮತ್ತು ಜೆಡಿಎಸ್‌ನ ಸುಜಾತ ರಮೇಶ್ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಮನೋಹರ್ ಮೇಸ್ತ್ರಿ ಮತ್ತು ಬಿಜೆಪಿಯ ಎಸ್.ಅಭಿರಾಮಿ ಉಮೇದುವಾರಿಕೆ ಸಲ್ಲಿಸಿದರು. ಒಟ್ಟು ೩೧ ಸದಸ್ಯ ಬಲದ ನಗರಸಭೆಯಲ್ಲಿ ೬ ಮಂದಿ ಜೆಡಿಎಸ್ ಮತ್ತು ಒಬ್ಬರು ಪಕ್ಷೇತರ ಸದಸ್ಯರು ಅನರ್ಹಗೊಂಡಿದ್ದರಿಂದ ಉಳಿಕೆ ೨೪ ಸದಸ್ಯರು ಮತದಾನದ ಅವಕಾಶ ಪಡೆದಿದ್ದರು. ಈ ನಡುವೆ ಕಾಂಗ್ರೆಸ್ ಸದಸ್ಯ ವೆಂಕಟಮುನಿ ತಟಸ್ಥವಾಗಿ ಉಳಿದರು. ಯಾರ ಪರ ಅಥವಾ ವಿರೋಧ ಮತ ಹಾಕಲಿಲ್ಲ. ಮತ್ತೊಂದೆಡೆ ಬಿಜೆಪಿಯ ಗೀತಾ ಹೇಮಂತ್ ಅವರು ಗೈರು ಹಾಜರಾಗಿದ್ದರು. ಈ ನಡುವೆ ದಿಢೀರ್ ಬೆಳವಣಿಗೆಯಲ್ಲಿ ಜೆಡಿಎಸ್ ಸದಸ್ಯ ಈಶ್ವರಪ್ಪ ಹಾಸನಕ್ಕೆ ತೆರಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅಲ್ಲಿಗೆ ೨೧ ಸದಸ್ಯರು ಮಾತ್ರ ಮತದಾನ ಮಾಡುವ ಅವಕಾಶ ಪಡೆದಿದ್ದರು.

ನಾಮಪತ್ರ ವಾಪಸ್ ಪ್ರಕ್ರಿಯೆ ಆರಂಭವಾದ ನಂತರ ಚುನಾವಣೆ ಆರಂಭವಾಯಿತು. ಹಾಜರಿದ್ದ ಸದಸ್ಯರು ಕೈ ಎತ್ತುವ ಮೂಲಕ ತಮ್ಮ ಮತ ಯಾರಿಗೆ ಎಂಬುದನ್ನು ಖಾತ್ರಿ ಪಡಿಸಬೇಕು ಎಂದು ಚುನಾವಣಾಧಿಕಾರಿ ಹೇಳಿದರು. ಮತದಾನ ಪ್ರಕ್ರಿಯೆ ನಡೆದು ಸಮೀವುಲ್ಲಾ ಪರ ೧೪ ಮತ ಚಲಾವಣೆಯಾದರೆ, ಸುಜಾತ ರಮೇಶ್ ಪರ ೭ ಮತ ಬಿದ್ದವು. ಹಾಗೆಯೇ ಉಪಾಧ್ಯಕ್ಷರ ಚುನಾವಣೆಯಲ್ಲೂ ಇಷ್ಟೇ ಮತಗಳು ಹಂಚಿಕೆಯಾದವು. ಬಿಜೆಪಿ-ಜೆಡಿಎಸ್ ಕಡೆಯಿಂದ ವಿಪ್ ಜಾರಿ ಮಾಡಿದ್ದರೂ ಯಾವುದೇ ಲಾಭ ತಂದುಕೊಂಡಲಿಲ್ಲ. ಅಂತಿಮವಾಗಿ ಚುನಾವಣಾಧಿಕಾರಿ ಮಾರುತಿ ಅವರು ಸಮೀವುಲ್ಲಾ ಅಧ್ಯಕ್ಷರಾಗಿ, ಮನೋಹರ್ ಮೇಸ್ತ್ರಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು. ಚುನಾವಣೆ ಪ್ರಕ್ರಿಯೆ ಮುಗಿದ ನಂತರ ವಿಜೇತರು ಮತ್ತವರ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಸಂಭ್ರಮಾಚರಣೆ ಮಾಡಿದರು.

ಮೈತ್ರಿಗೆ ಮುಖಭಂಗ:

ಒಂದು ಕಾಂಗ್ರೆಸ್ ಸದಸ್ಯರಿದ್ದರೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ಶಿವಲಿಂಗೇಗೌಡರ ಆಪ್ತರೇ ಗೆದ್ದರು. ದೋಸ್ತಿಗಳಿಗೆ ಮಣ್ಣು ಮುಕ್ಕಿಸಿ ತಮ್ಮ ಬೆಂಬಲಿಗರನ್ನು ಶಿವಲಿಂಗೇಗೌಡ ಗೆಲ್ಲಿಸಿಕೊಂಡರು. ಜೆಡಿಎಸ್‌ನಿಂದ ಆಯ್ಕೆ ಆದರೂ ಶಿವಲಿಂಗೇಗೌಡ ಜೊತೆ ಗುರುತಿಸಿಕೊಂಡಿದ್ದ ೧೩ ಸದಸ್ಯರು, ಕೊನೆವರೆಗೂ ಜೊತೆಯಾಗಿದ್ದು ಗೆದ್ದರು. ಓರ್ವ ಪಕ್ಷೇತರ ಸದಸ್ಯೆ ಇವರ ಕೈ ಹಿಡಿದರು. ಜೆಡಿಎಸ್‌ನಿಂದ ವಿಪ್ ಜಾರಿಯಾಗಿದ್ದರೂ, ಜೆಡಿಎಸ್ ಸದಸ್ಯರನ್ನೇ ಕಣಕ್ಕಿಳಿಸಿ ಶಿವಲಿಂಗೇಗೌಡ ಗೆದ್ದರು.

*ಬಾಕ್ಸ್ ಐಟಂ1 :- ಎಲ್ಲಿಯೂ ಪ್ರತ್ಯಕ್ಷವಾಗಿ ಗುರುತಿಸಿಕೊಳ್ಳದ ಶಾಸಕ ಶಿವಲಿಂಗೇಗೌಡರು, ತಮ್ಮ ಜೊತೆ ಗುರುತಿಸಿಕೊಂಡಿದ್ದ ಸದಸ್ಯರನ್ನು ಆರಂಭದಿಂದ ಕಡೆವರೆಗೂ ಒಟ್ಟಾಗಿ ಕಾಯ್ದಿಟ್ಟುಕೊಳ್ಳುವ ಮೂಲಕ ಕಳೆದ ಬಾರಿ ಕೈ ತಪ್ಪಿದ್ದ ನಗರಸಭೆ ಗಾದಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಈಗಲೇ ಹೇಳಲಾಗದು, ಆದರೂ ಸದ್ಯಕ್ಕೆ ಶಿವಲಿಂಗೇಗೌಡರು ತಮ್ಮದೇ ಮಾಸ್ಟರ್ ಪ್ಲಾನ್ ಮೂಲಕ ಮೇಲುಗೈ ಸಾಧಿಸಿದ್ದಾರೆ. ಈ ಕುರಿತು ಮಾತನಾಡಿದ ಶಿವಲಿಂಗೇಗೌಡರು, ನಾನು ಕಾಂಗ್ರೆಸ್‌ನಿಂದ ಗೆದ್ದಿದ್ದೇನೆ. ನಗರಸಭೆಯಲ್ಲಿ ನಮ್ಮ ಪಕ್ಷದ ಒಬ್ಬರೇ ಸದಸ್ಯರಿದ್ದರು. ಹಾಗಾಗಿ ನಾವು ಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ, ಎಲೆಕ್ಷನ್ ಪ್ರಕ್ರಿಯೆಯಲ್ಲೂ ಭಾಗಿಯಾಗಿಲ್ಲ ಎಂದಷ್ಟೇ ಹೇಳಿ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದರು.

*ಹೇಳಿಕೆ1ಅಭಿವೃದ್ಧಿಯೇ ನಮ್ಮ ಆದ್ಯತೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತೇವೆ. ಎಲ್ಲ ಸದಸ್ಯರ ವಿಶ್ವಾಸ, ಸಹಕಾರ ಪಡೆದು ನಗರವನ್ನು ಮತ್ತಷ್ಟು ಪ್ರಗತಿ ಪಥದತ್ತ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಾವು ಜಾತ್ಯಾತೀತ ಜನತಾದಳದಿಂದಲೇ ಗೆದ್ದಿರುವುದು. ಆ ತತ್ವದಡಿಯಲ್ಲೇ ನೀವು ಇರಿ ಎಂದು ನಮ್ಮ ಹಿಂದಿನ ರಾಜ್ಯಾಧ್ಯಕ್ಷರು ಹೇಳಿದ್ದರು. ಅದರಂತೆಯೇ ಇದ್ದೇವೆ. ನಮ್ಮ ಪರ ಇಂದು ೧೪ ಮತ ಬಂದಿವೆ. ಎಲ್ಲರ ಸಹಕಾರ ಪಡೆದು ಕೆಲಸ ಮಾಡುತ್ತೇವೆ. - ಸಮೀವುಲ್ಲಾ, ನೂತನ ಅಧ್ಯಕ್ಷ

Share this article