ಕನ್ನಡಪ್ರಭ ವಾರ್ತೆ ಚಾಮರಾಜನಗರ
ದೇಶದ ನಾಗರಿಕರ ರಕ್ಷಣೆಗಾಗಿ ಕಾನೂನುಗಳನ್ನು ರೂಪಿಸಿ ಸಂವಿಧಾನದಲ್ಲಿ ಅಳವಡಿಸಲಾಗಿದ್ದು, ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಬಿ.ಎಸ್. ಭಾರತಿ ತಿಳಿಸಿದರು.ನಗರದ ಚಾಮರಾಜನಗರ ವಿಶ್ವವಿದ್ಯಾಲಯದ ನಿಜಗುಣ ಸಭಾಂಗಣದಲ್ಲಿ ಶುಕ್ರವಾರ ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಜಂಟಿಯಾಗಿ ಹಮ್ಮಿಕೊಂಡ ‘ಭಾರತ ಸಂವಿಧಾನ ಸಮರ್ಪಣಾ ದಿನಾಚರಣೆ-೭೫’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಾಲ್ಯದಿಂದಲೇ ಅನುಭವಿಸಿದ್ದ ಕಷ್ಟಜೀವನ ಮೆಟ್ಟಿನಿಂತ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ದೇಶದ ಎಲ್ಲಾ ನಾಗರಿಕರಿಗೂ ಸಮಾನ ಅವಕಾಶ ಕಲ್ಪಿಸಲು ಆದ್ಯತೆ ನೀಡಿದರು. ಮಹಾರಾಷ್ಟ್ರದಲ್ಲಿ ಸಾಮಾಜಿಕ ಬಹಿಷ್ಕಾರ ನಿಷೇಧ ಕಾನೂನು ಇದೆ. ಸಾಮಾಜಿಕ ಬಹಿಷ್ಕಾರ ಪಿಡುಗು ನಿವಾರಣೆಗೆ ಅದೇ ಮಾದರಿಯ ಪರಿಣಾಮಕಾರಿ ಕಾನೂನು ಇಲ್ಲಿಯೂ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಹೈಕೋರ್ಟ್ನ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎಸ್.ಎ.ಅಹಮದ್, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಜತೆಗೆ ಸಹೋದರತೆ ಸಂವಿಧಾನದ ಆಶಯವಾಗಿದೆ. ದೇಶದಲ್ಲಿರುವ ನೂರಾರು ಭಾಷೆ, ಧರ್ಮ, ವಿಭಿನ್ನ ಸಂಸ್ಕೃತಿಗಳನ್ನು ಸಹೋದರತ್ವದ ಆಧಾರದಡಿ ಬೆಸೆಯುವ ಕೆಲಸವನ್ನು ಸಂವಿಧಾನ ಮಾಡುತ್ತಿದೆ. ದೇಶದ ೧೪೦ ಕೋಟಿ ಜನರಿಗೂ ಸಮಾನ ಅವಕಾಶಗಳನ್ನು ಒದಗಿಸಲು ಭದ್ರ ಅಡಿಪಾಯವಾಗಿ ಸಂವಿಧಾನ ನಿಂತಿದೆ. ಸಂವಿಧಾನ ಸಮರ್ಪಣೆಯ ೭೫ ವರ್ಷಗಳ ಸಂಕ್ರಮಣ ಕಾಲದಲ್ಲಿರುವ ನಾವೆಲ್ಲರೂ ಸಂವಿಧಾನದ ಮೌಲ್ಯಗಳನ್ನು ಓದಬೇಕು. ಜವಾಬ್ದಾರಿಯುತ ನಾಗರಿಕರಾಗಿ ಉತ್ತಮ ಸಮಾಜ ಕಟ್ಟಬೇಕು ಎಂದು ಸಲಹೆ ನೀಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಪ್ರಖರ ಬೌದ್ಧಿಕ ಸಾಮರ್ಥ್ಯ, ಇಚ್ಛಾಶಕ್ತಿ, ಹಾಗೂ ನಿರಂತರ ಅಧ್ಯಯನಶೀಲತೆಯಿಂದ ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಸಂವಿಧಾನ ಜಾರಿಯಾಗಿ ಜನರ ಬದುಕಿಗೆ ಅರ್ಥ ಸಿಕ್ಕಿದೆ. ನಮ್ಮೆಲ್ಲರ ಆಶಯಗಳಿಗೆ ಅಕ್ಷರ ರೂಪ ದೊರೆತಿದೆ. ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ದೇಶ ರಚನಾತ್ಮಕ ಬೆಳವಣಿಗೆ ಹೊಂದಲು ಸಂವಿಧಾನ ನೇರ ಕಾರಣವಾಗಿದೆ ಎಂದು ತಿಳಿಸಿದರು.ಕಲಾ ವಿಷಯ ಹೊರತುಪಡಿಸಿ ಇನ್ನುಳಿದ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ವಾಣಿಜ್ಯ ವಿದ್ಯಾರ್ಥಿಗಳು ದೇಶದ ಇತಿಹಾಸ, ಸಂವಿಧಾನದ ಬಗ್ಗೆ ಹೆಚ್ಚಿನ ಅರಿವು ಹೊಂದಬೇಕು. ಇಂದಿನ ವಿದ್ಯಾರ್ಥಿಗಳು, ಯುವಕರು ಮೊಬೈಲ್ ಸಂಸ್ಕೃತಿಗೆ ಮಾರುಹೋಗಬಾರದು. ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸಾಂವಿಧಾನಿಕ ಗ್ರಂಥಾಲಯ ರಚನೆಯಾಗಬೇಕು ಎಂದು ಹೇಳಿದರು.
ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧ್ಯಕ್ಷ ಪಿ. ಮರಿಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ನಂತರ ಪ್ರಬುದ್ಧ ದೇಶ ಕಟ್ಟಲು ಸಂವಿಧಾನ ಅಗತ್ಯವಾಗಿದ್ದ ಸಮಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಬೃಹತ್, ಹಾಗೂ ಲಿಖಿತ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಪ್ರಪಂಚದ ಯಾವುದೇ ದೇಶದಲ್ಲಿಯೂ ಇಷ್ಟುದೊಡ್ಡ ಸಂವಿಧಾನ ಚಾಲ್ತಿಯಲ್ಲಿಲ್ಲ ಎಂದರೆ ತಪ್ಪಾಗಲಾರದು. ಸಂವಿಧಾನದ ಪ್ರಜಾಸತ್ತಾತ್ಮಕ ಮೌಲ್ಯ, ಆಶಯಗಳನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ’ವಿಕಸಿತ ಭಾರತ ನಿರ್ಮಾಣದಲ್ಲಿ ಸಂವಿಧಾನದ ಪಾತ್ರ’ ಕುರಿತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಭೌತಶಾಸ್ತ್ರ ವಿಭಾಗದ ಮಲ್ಲೇಶ್, ದ್ವಿತೀಯ ಸ್ಥಾನ ಪಡೆದ ಕನ್ನಡ ವಿಭಾಗದ ಅನಿತಾ ಹಾಗೂ ತೃತೀಯ ಸ್ಥಾನ ಪಡೆದ ರಾಜ್ಯಶಾಸ್ತ್ರ ವಿಭಾಗದ ರೋಜಾ ಅವರಿಗೆ ಸ್ಮರಣಿಕೆ, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಅಧ್ಯಕ್ಷ ಪಿ. ಮರಿಸ್ವಾಮಿ ವಿಶ್ವವಿದ್ಯಾಲಯದಲ್ಲಿ ಸಾಂವಿಧಾನಿಕ ಗ್ರಂಥಾಲಯ ತೆರೆಯಲು ೧೦ ಸಾವಿರ ರು. ದೇಣಿಗೆ ನೀಡಿದರು.ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್, ಚಾಮರಾಜನಗರ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್, ಚಾಮರಾಜನಗರ ವಿವಿ (ಮೌಲ್ಯಮಾಪನ) ಕುಲಸಚಿವ ಪ್ರೊ.ಜಿ.ವಿ.ವೆಂಕಟರಮಣ, ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ವಿ.ಜಿ. ಸಿದ್ದರಾಜು, ಜಿಲ್ಲಾ ಸರ್ಕಾರಿ ವಕೀಲ ಹಾಗೂ ಚಾಮರಾಜನಗರ ವಿವಿ ಕಾನೂನು ಸಲಹೆಗಾರ ಆರ್. ಅರುಣ್ಕುಮಾರ್ ಇದ್ದರು.