ಗಣರಾಜ್ಯೋತ್ಸವ ಕಾರ್ಯಕ್ರಮ
ಹಾಸನ: ಸಂವಿಧಾನ ನಮ್ಮ ಪ್ರಜಾಪ್ರಭುತ್ವ ರಾಷ್ಟ್ರದ ಆತ್ಮವಿದ್ದಂತೆ. ಈ ಸಂವಿಧಾನ ಎಲ್ಲರಿಗೂ ನ್ಯಾಯ ಸಮಾನತೆ ಮತ್ತು ಸ್ವಾತಂತ್ರ್ಯವನ್ನು ನೀಡಿದೆ ಎಂದು ಖ್ಯಾತ ಅಂತಾರಾಷ್ಟ್ರೀಯ ಚಿತ್ರ ಕಲಾವಿದರಾದ ಕೆ.ಟಿ.ಶಿವಪ್ರಸಾದ್ ಹೇಳಿದ್ದಾರೆ.ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ವತಿಯಿಂದ ಏರ್ಪಡಿಸಿದ್ದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಸಂವಿಧಾನವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಅದರ ರಕ್ಷಣೆ ಮಾಡುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಸಿ ಜನರಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುತ್ತಿರುವುದು ಒಳ್ಳೆಯ ಕೆಲಸ ಎಂದು ಅಭಿಪ್ರಾಯ ಪಟ್ಟರು.
ದಲಿತ ಮುಖಂಡ ಅಂಬುಗ ಮಲ್ಲೇಶ್ ಮಾತನಾಡಿ, ‘ಸಾವಿರಾರು ಜನರ ತ್ಯಾಗ ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿತು. ೧೯೫೦ರ ಜನವರಿ೨೬ರಂದು ಭಾರತದಲ್ಲಿ ಗಣರಾಜ್ಯ ದಿನವಾಗಿ ಆಚರಿಸಲಾಯಿತು. ಪ್ರತಿ ವರ್ಷವು ನಮ್ಮ ದೇಶದಲ್ಲಿ ಇದೊಂದು ಮಹತ್ವದ ದಿನವಾಗಿದ್ದು ಸ್ವಾತಂತ್ರ್ಯ ಹೋರಾಟಗಾರರು ಮತ್ತು ತ್ಯಾಗವನ್ನು ಸ್ಮರಿಸಲು ಈ ದಿನ ಎಲ್ಲಾ ನಾಗರಿಕರು ಒಟ್ಟಾಗಿ ಸೇರುತ್ತೆವೆ. ಈ ದಿನ ಒಂದು ಮಹತ್ವದ ದಿನ ಏಕೆಂದರೆ ಭಾರತದ ಸಂವಿಧಾನ ಜಾರಿಗೆ ಬಂದ ದಿನ, ನಮ್ಮ ದೇಶದ ಸಂವಿಧಾನ ಬೃಹತ್ ಸಂವಿಧಾನವನ್ನು ಪ್ರತಿಯೊಬ್ಬರು ಗೌರವಿಸಬೇಕು’ ಎಂದರು.ಸಾಹಿತಿ ಸಿ.ಸುವರ್ಣ ಕೆ.ಟಿ.ಶಿವಪ್ರಸಾದ್, ದಲಿತ ಮುಖಂಡ ಕೃಷ್ಣದಾಸ್, ದಲಿತ ಸಂಘರ್ಷ ಸಮಿತಿಯ ಟಿ.ಡಿ. ಸುಮಾ, ಮೇಘರಾಜ್, ಸಿಂಗಟಗೆರೆ ದಯಾನಂದ, ಮರ್ಕುಲಿ ದೇವಪ್ಪ, ನಿವೃತ್ತ ತಹಸೀಲ್ದಾರ್ ಸಿ. ನಾಗಯ್ಯ ಇತರರು ಇದ್ದರು. ದಲಿತ ವಿದ್ಯಾರ್ಥಿ ಘಟಕದ ಸಂಚಾಲಕ ಪ್ರದೀಪ್ ಸ್ವಾಗತಿಸಿದರು. ತಾರಾನಾಥ್ ವಂದಿಸಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಹಾಸನದಲ್ಲಿ ಏರ್ಪಡಿಸಿದ್ದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ವಕೀಲರಾದ ಸಿ.ಇ.ವೆಂಕಟೇಶ ಸಂವಿಧಾನ ಪ್ರಸ್ತಾವನೆಯನ್ನು ಬೋಧಿಸಿದರು.