ಗದಗ: ಭಾರತ ದೇಶ ಸ್ವಾತಂತ್ರ್ಯವಾಗುವ ಸಮಯದಲ್ಲಿ ವಕೀಲರ ಪಾತ್ರ ಹಿರಿದಾಗಿತ್ತು. ಸಾತಂತ್ರ್ಯ ಹೋರಾಟದಲ್ಲಿ ವಕೀಲಿಕಿ ಮಾಡುವವರೇ ಜಾಸ್ತಿ ಹೋರಾಟದಲ್ಲಿದ್ದರು. ಅಂತಹ ವೃತ್ತಿಯನ್ನು ಮಾಡುವ ಕಾನೂನು ವಿದ್ಯಾರ್ಥಿಗಳಾದ ನೀವು ಸದಾ ಅಧ್ಯಯನಶೀಲರಾಗಬೇಕು ಎಂದು ಹಿರಿಯ ನಿವೃತ್ತ ನ್ಯಾಯಾಧೀಶ ಹಾಗೂ ಗ್ರಾಹಕರ ರಕ್ಷಣಾ ವೇದಿಕೆಯ ಹಿರಿಯ ಸದಸ್ಯ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಜಿ.ಎಸ್. ಪಲ್ಲೇದ ಹೇಳಿದರು. ನಗರದ ಕೆ.ಎಲ್.ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ 74ನೇ ಗಣರಾಜೋತ್ಸವದ ಧ್ವಜಾರೋಹಣ ನೆರವೇರಿಸಿ, ನಂತರ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.. ಭಾರತದ ಸಂವಿಧಾನವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದ ಅವಿಭಾಜ್ಯ ಅಂಗವಾಗಿ ಪರಿವರ್ತಿಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಲು ಹೆಜ್ಜೆಯನ್ನು ಹಾಕಬೇಕು. ನಮ್ಮ ಸಂವಿಧಾನದಡಿ ರೂಪಿಸಿರುವ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳು ದೇಶವನ್ನು ಸಮರ್ಥವಾಗಿ ಮುನ್ನಡೆಸಿ ಸರ್ವರಿಗೂ ಸಮಾನ ಅವಕಾಶಗಳನ್ನು ಲಭ್ಯವಾಗುವಂತೆ ಮಾಡಿದೆ ಎಂದರು. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಮಾತ್ರ ಅದನ್ನು ಓದುತ್ತಿದ್ದಾರೆ ಹೊರತು, ಸಂವಿಧಾನದ ಮಹತ್ವ ಹಾಗೂ ಸಾರಾಂಶ ಅರ್ಥೈಸಿಕೊಳ್ಳಲು ಯಾರೂ ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ವಂಶಪಾರಂಪರ್ಯ ವೃತ್ತಿ ತ್ಯಜಿಸಿ, ಒಬ್ಬ ಸಾಮಾನ್ಯ ವ್ಯಕ್ತಿಯೂ ಕೂಡ ಉನ್ನತ ಹುದ್ದೆ ಅಲಂಕರಿಸುವ ಅವಕಾಶ ಮಾಡಿ ಕೊಟ್ಟಿರುವುದು ನಮ್ಮ ಸಂವಿಧಾನದ ಹಿರಿಮೆಯಾಗಿದೆ ಎಂದರು.
ಸಹ ಪ್ರಾಧ್ಯಾಪಕ ಡಾ. ಸಂತೋಷ ಪಾಟೀಲ, ಶರತ್ ಡಿ., ಡಿ.ಎಲ್. ಬಿಳಗಿ, ಡಾ.ಸಿ.ಬಿ. ರಣಗಟ್ಟಿಮಠ, ಬಿ.ಸಿ. ಜಾಲಿಗಿಡದ, ಎಸ್.ಎಸ್. ಅರಕೇರಿ, ಎ.ಎಸ್. ದಂಡಗಿ ಸೇರಿದಂತೆ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎಸ್.ಟಿ.ಮೂರಶಿಳ್ಳಿನ ಸ್ವಾಗತಿಸಿದರು. ಚೈತ್ರಾ ಗೌಡ್ರ ಪ್ರಾರ್ಥಿಸಿದರು. ಐಕ್ಯೂಎಸ್ ಸಂಯೋಜಕ, ಡಾ. ವಿಜಯ ಮುರದಂಡೆ ವಂದಿಸಿದರು. ಮುಕ್ತಾ ಹಡಪದ ನಿರೂಪಿಸಿದರು.