ಸಾಹಿತ್ಯ ಲೋಕಕ್ಕೆ ಜಾನಪದದ ಕೊಡುಗೆ ಅಪಾರ: ಕೆ.ಎಸ್‌.ರಾಜಕುಮಾರ್

KannadaprabhaNewsNetwork |  
Published : Feb 15, 2024, 01:16 AM IST
ನರಸಿಂಹರಾಜಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ವಿಜಯಕುಮಾರ್,ಎಂ.ಜಯಣ್ಣ,ಎಸ್‌.ಜಿ.ರಾಜನಾಯ್ಕ ಅವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಸಾಹಿತ್ಯ ಲೋಕಕ್ಕೆ ಜಾನಪದದ ಕೊಡುಗೆ ಅಪಾರವಾಗಿದೆ ಎಂದು ತಾಲೂಕು ಕಸಾಪ ಕೋಶಾಧ್ಯಕ್ಷ ಕೆ.ಎಸ್. ರಾಜಕುಮಾರ್ ಹೇಳಿದರು.

- ಕಸಾಪದಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ- ಸನ್ಮಾನ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸಾಹಿತ್ಯ ಲೋಕಕ್ಕೆ ಜಾನಪದದ ಕೊಡುಗೆ ಅಪಾರವಾಗಿದೆ ಎಂದು ತಾಲೂಕು ಕಸಾಪ ಕೋಶಾಧ್ಯಕ್ಷ ಕೆ.ಎಸ್. ರಾಜಕುಮಾರ್ ಹೇಳಿದರು.

ರೋಟರಿ ಹಾಲ್‌ನಲ್ಲಿ ಸೋಮವಾರ ರಾತ್ರಿ ನಡೆದ ಖಂಡೋಜಿ ಗಣಪತಿ ಮತ್ತು ಸಹೋದರರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಹಿತ್ಯ ಲೋಕಕ್ಕೆ ಜಾನಪದದ ಕೊಡುಗೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಹಿಂದೆ ಸಂಬಂಧ ಗಳಿಗೆ ಬೆಲೆಯಿತ್ತು. ಸಂಬಂಧಗಳು ಒಂದಕ್ಕೊಂದು ಬೆಸುಗೆಯಾಗಿದ್ದವು. ಅಣ್ಣ, ತಂಗಿ, ತಾಯಿ, ತಂದೆ ಸಂಬಂಧಗಳಿಗೆ ಬಹಳ ಗೌರವವಿತ್ತು. ಕನ್ನಡ ಜಾನಪದ ಸಾಹಿತ್ಯದಲ್ಲಿ ಇಂತಹ ಸಂಬಂಧಗಳ ಬಗ್ಗೆ ಸುಂದರವಾಗಿ ವರ್ಣನೆ ಮಾಡಲಾಗಿದೆ. ಜಾನಪದ ಸಾಹಿತ್ಯ ಲೋಕಕ್ಕೆ ವರದಾನವಾಗಿದೆ. ಜಾನಪದದಿಂದ ಸಾಹಿತ್ಯ ಲೋಕಕ್ಕೆ ಹೆಚ್ಚು ಮೆರುಗು ಬಂದಿದೆ. ಗಂಡನಿಲ್ಲದ ಹೆಣ್ಣಿನ ಬಾಳು, ತಾಯಿ ಇಲ್ಲದ ತವರಿನ ಬಗ್ಗೆ ಜಾನಪದದಲ್ಲಿ ಮಾಡಿರುವ ವರ್ಣನೆ ಅದ್ಭುತವಾಗಿದೆ ಎಂದರು.

ಕಸಾಪ ಪೂರ್ವಾಧ್ಯಕ್ಷ ಎಸ್.ಎಸ್.ಸಂತೋಷ್‌ಕುಮಾರ್ ಆಶಯ ಭಾಷಣ ಮಾಡಿ, ದತ್ತಿ ದಾನಿಗಳು ಸಾಹಿತ್ಯ ಪರಿಷತ್ತಿನ ಆಸ್ತಿಗಳು. ಜಾನಪದ ಸಾಹಿತ್ಯ ಹಾಗೂ ಕುವೆಂಪು ಅವರ ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ದತ್ತಿ ದಾನಿಗಳಿಂದ ಕಸಾಪ ಹಿಂದಿನಿಂದಲೂ 30ಕ್ಕೂ ಅಧಿಕ ದತ್ತಿ ಉಪನ್ಯಾಸಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.

ತಾಲೂಕು ಕಸಪಾ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ ಮಾತನಾಡಿ, ದತ್ತಿ ದಾನಿಗಳು ಹೆಚ್ಚೆಚ್ಚು ದತ್ತಿ ಗಳನ್ನು ನೀಡಲು ಮುಂದಾಗಬೇಕು. ನಿರಂತರವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿರಬೇಕು. ಇಂತಹ ಕಾರ್ಯಕ್ರಮದಲ್ಲಿ ಕರಾಟೆಯಲ್ಲಿ ಸಾಧನೆ ಮಾಡಿದವರಿಗೆ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.

ಕಸಬಾ ಹೋಬಳಿ ಘಟಕದ ಅಧ್ಯಕ್ಷೆ ಜುಬೇದಾ ಮಾತನಾಡಿ, ದತ್ತಿ ಉಪನ್ಯಾಸಗಳಲ್ಲಿ ನೀಡಿರುವ ವಿಷಯಗಳು ಅತ್ಯಂತ ಅರ್ಥಗರ್ಭಿತ ಹಾಗೂ ಕಾಲಕ್ಕೆ ತಕ್ಕಂತಹ ವಿಷಯಗಳಾಗಿವೆ. ತಾಲೂಕು ಕಸಾಪ ನಮ್ಮ ಜಿಲ್ಲೆಯಲ್ಲಿಯೇ ಮಾದರಿ ಘಟಕವಾಗಿ ಹೊರಹೊಮ್ಮುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ಕಸಾಪಕ್ಕೆ ಅನೇಕರು ಕೈ ಜೋಡಿಸಿ, ಉತ್ತಮ ಕಾರ್ಯಗಳಿಗೆ ಕಾರಣರಾಗಿದ್ದಾರೆ. ಎಲ್ಲರ ಸಹಕಾರದಿಂದ ಕಸಾಪ ಮುಂದೆ ಇನ್ನೂ ಉತ್ತಮ ಕಾರ್ಯಕ್ರಮ ಆಯೋಜಿಸುವ ಮೂಲಕ ಕನ್ನಡ ಭಾಷೆಯನ್ನು ಎಲ್ಲೆಡೆ ಪಸರಿಸುವ ಕಾರ್ಯ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕರಾಟೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಯಾಸೀನ್‌ ಅಹಮ್ಮದ್, ಬಿಂದುಸಾರ ಹಾಗೂ ಶಿಕ್ಷಣ ಇಲಾಖೆ ವಿಜಯಕುಮಾರ್, ಎಂ.ಜಯಣ್ಣ, ಎಸ್.ಜಿ.ರಾಜಾನಾಯ್ಕ ಹಾಗೂ ದತ್ತಿ ದಾನಿಗಳಾದ ಕೆ.ಗಣಪತಿ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ, ವರ್ತಕರ ಸಂಘದ ಅಧ್ಯಕ್ಷ ಎಸ್.ಎಸ್.ಜಗದೀಶ್, ನಿವೃತ್ತ ಆರೋಗ್ಯಾಧಿಕಾರಿ ಪಿ.ಪ್ರಭಾಕರ್, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಶ್ರೀನಿವಾಸ್, ರಕ್ಷಿತ, ಸುಚಿತ್ರಾ, ಎಸ್.ಡಿ.ಶೃತಿ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ