ಸಂವಿಧಾನ ಅರಿಯಲು ಜಾಥಾ ಸಹಕಾರಿ: ಎಸಿ ಕೆ.ಜೆ.ಕಾಂತರಾಜ್

KannadaprabhaNewsNetwork | Published : Feb 15, 2024 1:16 AM

ಸಾರಾಂಶ

ಪ್ರತಿಯೊಬ್ಬರು ದೇಶದ ಸಂವಿಧಾನದ ಶ್ರೇಷ್ಠತೆ ಹಾಗೂ ಮಹತ್ವದ ಬಗ್ಗೆ ಅರಿತುಕೊಳ್ಳಬೇಕು. ಸಂವಿಧಾನ ಅರಿಯಲು ಜಾಗೃತಿ ಜಾಥಾ ಸಹಕಾರಿ ಎಂದು ತರೀಕೆರೆ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿ ಕೆ.ಜೆ.ಕಾಂತರಾಜ್ ಹೇಳಿದರು.

- ಬೀರೂರು ಪಟ್ಟಣಕ್ಕೆ ಆಗಮಿಸಿದ ‘ ಸಂವಿಧಾನ ಜಾಗೃತಿ ರಥ ಯಾತ್ರೆಗೆ ಅದ್ಧೂರಿ ಸ್ವಾಗತ

ಕನ್ನಡಪ್ರಭ ವಾರ್ತೆ, ಬೀರೂರು

ಪ್ರತಿಯೊಬ್ಬರು ದೇಶದ ಸಂವಿಧಾನದ ಶ್ರೇಷ್ಠತೆ ಹಾಗೂ ಮಹತ್ವದ ಬಗ್ಗೆ ಅರಿತುಕೊಳ್ಳಬೇಕು. ಸಂವಿಧಾನ ಅರಿಯಲು ಜಾಗೃತಿ ಜಾಥಾ ಸಹಕಾರಿ ಎಂದು ತರೀಕೆರೆ ಉಪವಿಭಾಗಾಧಿಕಾರಿ ಹಾಗೂ ಪುರಸಭೆ ಆಡಳಿತಾಧಿಕಾರಿ ಕೆ.ಜೆ.ಕಾಂತರಾಜ್ ಹೇಳಿದರು.

ಬಳ್ಳಿಗನೂರು ಮಾರ್ಗವಾಗಿ ಬೀರೂರು ಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ರಥ ಯಾತ್ರೆ ಮಾರ್ಗದ ಕ್ಯಾಂಪಿನ ಮಹಾತ್ಮ ಗಾಂಧಿ ಉದ್ಯಾನವನ ಮುಂಭಾಗ ಬಂದಾಗ ತಾಲೂಕು ಆಡಳಿತ ಹಾಗೂ ಪುರಸಭೆ ಮತ್ತು ನಾಗರಿಕರೊಂದಿಗೆ ಸೇರಿ ಅವರು ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಜಗತ್ತಿನ 192 ದೇಶಗಳಲ್ಲಿ ಎಲ್ಲಾ ಸಂವಿಧಾನ ಅವಲೋಕನ ಮಾಡಿದಾಗ ಬಹು ದೊಡ್ಡ ಲಿಖಿತ ಸಂವಿಧಾನ ನಮ್ಮದಾಗಿದೆ. ಸಂವಿಧಾನ ಸಮಾನತೆ, ಭಾತೃತ್ವ, ರಾಷ್ಟ್ರೀಯತೆ, ಏಕತೆ ತರುವಲ್ಲಿ ತನ್ನದೆ ಆದ ಪಾತ್ರ ವಹಿಸಿದೆ. ಸಂವಿಧಾನದ ಕರ್ತವ್ಯಗಳನ್ನು ಬರಿ ಓದಿಗಷ್ಟೆ ಸೀಮಿತವಾಗಿಸದೇ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ಬಿ.ಯೋಗೀಶ್ ಮಾತನಾಡಿ, ಭಾರತದ ಸಂವಿಧಾನ ಅಂಗೀಕಾರ ಗೊಂಡು 75 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ಸಾರ್ವಜನಿಕರಲ್ಲಿ ಸಂವಿಧಾನದ ಆಶಯ ಗಳನ್ನು ಎಲ್ಲರಿಗೂ ತಲುಪಬೇಕೆನ್ನುವ ನಿಟ್ಟಿನಲ್ಲಿ ಈ ಜಾಗೃತಿ ಜಾಥ ಆಯೋಜಿಸಿದ್ದು, ನಮ್ಮ ಜಿಲ್ಲೆಯಲ್ಲಿಯೂ ಎಲ್ಲಾ ಹೋಬಳಿ ಮತ್ತು ಗ್ರಾಮ ಪಂಚಾಯ್ತಿ ಮಟ್ಟದ ಗ್ರಾಮಗಳಿಗೂ ಸಂಚರಿಸಿ ಜನಸಾಮಾನ್ಯರಿಗೆ ಸಂವಿಧಾನದ ಮಹತ್ವ ಹಾಗೂ ಧ್ಯೇಯೊದ್ದೇಶದ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದೆ ಎಂದರು.

ವಕೀಲ ತಿಪ್ಪೇಶ್ ಮಾತನಾಡಿ, ಸಮಾನತೆ, ಮಾನವತಾವಾದ, ಸಮಾಜವಾದ ಹಾಗೂ ಧರ್ಮ ನಿರಪೇಕ್ಷಗಳಂಥ ಮೌಲ್ಯ ಗಳನ್ನು ಜನರಿಗೆ ಸಂವಿಧಾನ ಕೊಡುಗೆಯಾಗಿ ನೀಡಿದೆ. ಇಂತಹ ಪವಿತ್ರ ಸಂವಿಧಾನ ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಸಮರ್ಪಿಸಿರುವುದು ಸ್ಮರಣೀಯ. ಭಾರತದ ಸಂವಿಧಾನ 5 ಪ್ರಮುಖ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಏಕತೆ, ಕಲ್ಪಿಸಿ ವಿಶ್ವದಲ್ಲಿಯೇ ವಿಶೇಷ ಸ್ಥಾನ ಸ್ಥಾನ ಹೊಂದಿದೆ ಎಂದರು.

ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ ಮಾತನಾಡಿ, ಸಂವಿಧಾನದ ಆಶಯದಂತೆ ದೇಶದ ಪ್ರತಿ ನಾಗರಿಕರೂ ನಡೆದುಕೊಳ್ಳಬೇಕು. ಡಾ.ಬಿ.ಆರ್.ಅಂಬೇಡ್ಕರ್ ಕಠಿಣ ಪರಿಶ್ರಮದ ಫಲವಾಗಿ ಇಂದು ಎಲ್ಲರೂ ಸಾಮಾಜಿಕ ವ್ಯವಸ್ಥೆಯಡಿ ಜೀವನ ಸಾಗಿಸಲು ಸಂವಿಧಾನ ಅನುಕೂಲ ಮಾಡಿಕೊಟ್ಟಿದೆ ಎಂದರು.

ಪುರಸಭೆ ನೂರಾರು ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಜಾಥ ಆಗಮಿಸುತ್ತಿದಂತೆ ಪೂರ್ಣಕುಂಭ ಸ್ವಾಗತ ಕೋರಿದರು. ಪಟ್ಟಣದ ಮಹಾತ್ಮಗಾಂಧಿ ವೃತ್ತದಿಂದ ಅಂಬೇಡ್ಕರ್ ಪ್ರತಿಮೆಯವರೆಗೂ ಮೆರವಣಿಗೆ ನಡೆಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಮೇಣದ ಬತ್ತಿ ಹಚ್ಚಿ ವಿವಿಧ ಕಲಾ ತಂಡಗಳೊಂದಿಗೆ ಸಾಗಿದರು.

ಈ ವೇಳೆ ಪುರಸಭಾ ಸದಸ್ಯ ಬಿ.ಆರ್.ಮೋಹನ್ ಕುಮಾರ್‌, ತಾಲೂಕು ಮಟ್ಟದ ಅಧಿಕಾರಿಗಳು, ಪುರಸಭಾ ಸದಸ್ಯರು, ಎಲ್ಲಾ ಸಮಾಜದ ಮುಖಂಡರು, ಮೆರವಣಿಗೆ ನೇತೃತ್ವ ವಹಿಸಿದ್ದ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಬಿ.ಟಿ.ಚಂದ್ರಶೇಖರ್, ಎನ್.ಗಿರೀಶ್, ಬಿ.ಜಿ.ಮೈಲಾರಪ್ಪ, ಜಯಣ್ಣ, ಮಲ್ಲಿಕಾರ್ಜುನ್, ವಿನೋದ್ ಹಾಗೂ ದಲಿತ ಸಂಘರ್ಷ ಸಮಿತಿ ಎಲ್ಲಾ ಸದಸ್ಯರುಇದ್ದರು.14 ಬೀರೂರು1

ಬೀರೂರು ಪಟ್ಟಣಕ್ಕೆ ಮಂಗಳವಾರ ಸಂಜೆ ಆಗಮಿಸಿದ್ದ ಸಂವಿಧಾನ ಜಾಗೃತಿ ರಥಾ ಯಾತ್ರೆಯನ್ನು ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್, ತಹಶೀಲ್ದಾರ್ ಕವಿರಾಜ್, ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ ಸ್ವಾಗತ ಕೋರಿ ಪುಷ್ಪಾರ್ಚನೆ ಮಾಡಿದರು.

Share this article