ಪ್ರಪಂಚದಲ್ಲಿಯೇ ಅತಿದೊಡ್ಡ ಸಂವಿಧಾನ ನಮ್ಮದು. ಸಂವಿಧಾನ ಇಲ್ಲದಿದ್ದರೆ ಕತ್ತಲೆ ಕೂಪದಲ್ಲಿ ಕಳೆಯುತ್ತಿದ್ದೇವು.
ಕನ್ನಡಪ್ರಭ ವಾರ್ತೆ ಸುರಪುರ
ಬ್ರಿಟಿಷರ ದಾಸ್ಯದಿಂದ ಮುಕ್ತಿ ಹೊಂದಿದ ಭಾರತಕ್ಕೆ ತನ್ನದೇ ಆದ ಸಂವಿಧಾನದ ಅಗತ್ಯವಿತ್ತು. ದೊಡ್ಡದಾದ ದೇಶಕ್ಕೆ ಅಭಿವೃದ್ಧಿ ಹೊಂದುವ ಮತ್ತು ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಸಂವಿಧಾನದ ಅಗತ್ಯವಿತ್ತು. ಇದನ್ನು ಕೊಟ್ಟವರು ಡಾ. ಬಿ.ಆರ್. ಅಂಬೇಡ್ಕರ್. ಸಂವಿಧಾನದ ಆಶಯಗಳನ್ನು ಇಂದಿನ ಯುವ ಸಮುದಾಯಕ್ಕೆ ತಿಳಿಸುವ ಅಗತ್ಯವಿದೆ ಎಂದು ಉಪನ್ಯಾಸಕ ಕನಕಪ್ಪ ವಾಗಣಗೇರಿ ಹೇಳಿದರು.
ತಾಲೂಕಿನ ಸಮೀಪದ ತಳವಾರಗೇರಾದಲ್ಲಿ ಸೋಮವಾರ ವಾಗಣಗೇರಾ ಗ್ರಾಮ ಪಂಚಾಯ್ತಿಯಿಂದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಪಂಚದಲ್ಲಿಯೇ ಅತಿದೊಡ್ಡ ಸಂವಿಧಾನ ನಮ್ಮದು. ಸಂವಿಧಾನ ಇಲ್ಲದಿದ್ದರೆ ಕತ್ತಲೆ ಕೂಪದಲ್ಲಿ ಕಳೆಯುತ್ತಿದ್ದೇವು. 1950 ಜ.26ರಂದು ಸಂವಿಧಾನ ಜಾರಿಗೆ ಬಂದಿತು. ಇಲ್ಲಿಗೆ 75 ವರ್ಷ ತಲುಪಿದ್ದು ಪ್ರತಿಯೊಬ್ಬರೂ ಸಂಭ್ರಮಿಸಬೇಕಿದೆ ಎಂದರು.
ಸಂವಿಧಾನವು ದೀನ ದಲಿತರ, ಶೋಷಿತರ, ತುಳಿತಕ್ಕೊಳಗಾದವರ ಧ್ವನಿಯಾಗಿದೆ. ಇದರಿಂದಲೇ ದೇಶದ ಅಭ್ಯುದಯ ಸಾಧ್ಯ. ಸಂವಿಧಾನಕ್ಕೆ ಮನ್ನಣೆ ನೀಡಿದರೆ ರಾಷ್ಟ್ರವನ್ನು ಇನ್ನಷ್ಟು ಉತ್ತುಂಗಕ್ಕೆ ಒಯ್ಯುತ್ತದೆ. ಸಂವಿಧಾನ ಅನುಸಾರ ಪ್ರತಿಯೊಬ್ಬರೂ ಜೀವಿಸಬೇಕು ಎಂದು ತಿಳಿಸಿದರು.
ತಾಲೂಕಿನ ಸಮೀಪದ ವಾಗಣಗೇರಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಳವಾರಗೇರಾದಲ್ಲಿ ಕುಂಭಕಳಸ ಮೆರವಣಿಗೆ ಹಾಗೂ ಬೈಕ್ ರ್ಯಾಲಿ ಮೂಲಕ ಅದ್ಧೂರಿಯಾಗಿ ಸೋಮವಾರ ಸ್ವಾಗತಿಸಲಾಯಿತು.
ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ವಾಗಣಗೇರಾ, ತಳವಾರಗೇರಾ, ಮಲ್ಲಿಭಾವಿ, ಟಿ. ಬೊಮ್ಮನಹಳ್ಳಿಯ ಜನರು ತಳವಾರಗೇರಾ ಗ್ರಾಮಕ್ಕೆ ಆಗಮಿಸಿದ್ದರು. ಬೆಳಗಿನಿಂದಲೇ ಗ್ರಾಮದಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪುತ್ರಪ್ಪಗೌಡ, ಕಾರ್ಯದರ್ಶಿ ಹುಸೇನ್ ಭಾಷಾ, ಸಿಬ್ಬಂದಿ ಹಾಗೂ ವಿವಿಧ ಗ್ರಾಮಗಳ ಮುಖಂಡರು ಸಂವಿಧಾನ ಜಾಗೃತಿ ಜಾಥಾ ಆಗಮನಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದರು.
ವಿವಿಧೆಡೆ ಜಾಥಾ: ತಾಲೂಕಿನ ಆಲ್ದಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳು, ಪೇಠಾ ಅಮ್ಮಾಪುರದ ಗ್ರಾಮಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯಿತು. ಪಂಚಾಯ್ತಿ ಅಭಿವೃದ್ಧಿ ರಾಜಕುಮಾರ ಸೇರಿದಂತೆ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.