ಬಿಜೆಪಿ ಸ್ವಾಭಿಮಾನ ಪರಿವಾರ ಕಾರ್ಯಕರ್ತರ ಸಮಾವೇಶ
ಕನ್ನಡಪ್ರಭ ವಾರ್ತೆ, ಮೂಡಿಗೆರೆಬಿಜೆಪಿಯಲ್ಲಿ ಎರಡು ಬಣಗಳಾಗಿರುವುದು ಉತ್ತಮ ಬೆಳೆವಣಿಗೆಯಲ್ಲ. ಇದನ್ನು ಶೀಘ್ರದಲ್ಲಿಯೇ ಸರಿಪಡಿಸಿ ಎಲ್ಲರೂ ಪಕ್ಷ ಸಂಘಟನೆಗೆ ದುಡಿಯುವ ಕೆಲಸ ಆಗಬೇಕಿದೆ ಎಂದು ಜಿಪಂ ಮಾಜಿ ಸದಸ್ಯ ವಿ.ಕೆ.ಶಿವೇಗೌಡ ಹೇಳಿದರು. ಶುಕ್ರವಾರ ಪಟ್ಟಣದಲ್ಲಿ ಬಿಜೆಪಿ ಸ್ವಾಭಿಮಾನ ಪರಿವಾರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರನ್ನು ಏಕಾಏಕಿ ಅಮಾನತ್ತುಗೊಳಿಸುವ ಕ್ರಮಸರಿಯಲ್ಲ. ಇದು ಪಕ್ಷ ಸಂಘಟನೆಗೆ ಹಿನ್ನೆಡೆ . ಪುಟ್ಟಣ್ಣ ಮತ್ತು ಕನ್ನಳ್ಳಿ ಭರತ್ ರನ್ನು ಪಕ್ಷದಿಂದ ಅಮಾನತ್ತುಗೊಳಿಸಿದ್ದರಿಂದ ಬಿಜೆಪಿ ಎರಡು ಬಣಗಳಾಗಿದೆ. ಈ ಅಮಾನತ್ತು ವಾಪಾಸು ಪಡೆಯದಿದ್ದರೆ ವಿಕೋಪಕ್ಕೆ ತಿರುಗುತ್ತದೆ.
ಹಾಗಾಗಿ ಅಮಾನತ್ತು ವಾಪಾಸು ಪಡೆಯುವವರೆಗೆ ಬಿಜೆಪಿ ತಾಲೂಕು ಅಧ್ಯಕ್ಷರ ಪದಗ್ರಹಣ ಸೇರಿದಂತೆ ತಾಲೂಕಿನಲ್ಲಿ ಎಸ್ಸಿ ಮೋರ್ಚಾ, ಅಲ್ಪಸಂಖ್ಯಾತ, ಮಹಿಳಾ, ಯುವ ಮೋರ್ಚಾ ಸೇರಿದಂತೆ ಯಾವುದೇ ಹೋಬಳಿ ಅಧ್ಯಕ್ಷರ ಘೋಷಣೆ ಆಗಬಾರದೆಂದು ಹಿರಿಯ ಮುಖಂಡರಿಗೆ ಮಾಡಿದ ಮನವಿಗೆ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಇಂದು ನಡೆಯುವ ತಾಲೂಕು ಅಧ್ಯಕ್ಷರ ಪದಗ್ರಹಣ ರದ್ದಾಗಿದೆ. ಯಾವುದೇ ಲೋಪ ದೋಷಗಳಿದ್ದರೂ ಅದನ್ನು ಸರಿಪಡಿಸಿಕೊಂಡು ಪಕ್ಷ ಸಂಘಟನೆ ಹಾಗೂ ಸಂಸತ್ ಚುನಾವಣೆ ಎದುರಿಸಲು ಮುಂದಾಗೋಣ ಎಂದು ಕರೆ ನೀಡಿದರು.ಪಪಂ ಸದಸ್ಯ ಪುಟ್ಟಣ್ಣ ಮಾತನಾಡಿ, ಪಕ್ಷದ ಕೆಲವರು ಗುತ್ತಿಗೆದಾರರಾಗಿ ಕಳಪೆ ಕಾಮಗಾರಿ ಮಾಡುವ ಮೂಲಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಅವೆಲ್ಲಾ ಬಯಲಿಗೆ ಬರುತ್ತದೆ ಎಂಬ ಕಾರಣಕ್ಕೆ ಹಿರಿಯ ಮುಖಂಡರ ಮೂಲಕ ತನ್ನನ್ನು ಪಕ್ಷದಿಂದ ಅಮಾನತ್ತು ಮಾಡಿದ್ದಾರೆ. ಹಿಂದೆ ಪಕ್ಷಕ್ಕೆ ದುಡಿದ ಅನೇಕ ಮುಖಂಡರು ಇಂದು ತಟಸ್ಥವಾಗಿರುವುದಕ್ಕೆ ಕಾರಣ ಕೆಲ ಕಿಡಿಗೇಡಿಗಳು ಎಂಬುದು ಎಲ್ಲರಿಗೂ ತಿಳಿದಿದೆ ಎಂದರು.
ಭರತ್ ಬಾಳೂರು, ಭರತ್ ಕನ್ನಹಳ್ಳಿ, ರವೀಂದ್ರ ಊರುಬಗೆ, ವಿಜೇಂದ್ರ ಕುಂದೂರು, ಸಂಜಯ್ ಕೊಟ್ಟಿಗೆಹಾರ, ಹೆಮ್ಮಕ್ಕಿ ಗಿರೀಶ್, ಪ್ರಾನ್ಸಿಸ್, ದೇವರಾಜ್ ಸಬ್ಲಿ ಮತ್ತಿತರರಿದ್ದರು.15ಎಂಡಿಜಿ2ಎ :
ಮೂಡಿಗೆರೆ ಪಟ್ಟಣದಲ್ಲಿ ಏರ್ಪಡಿಸಿದ್ದ ಬಿಜೆಪಿ ಸ್ವಾಭಿಮಾನ ಪರಿವಾರ ಕಾರ್ಯಕರ್ತರ ಸಮಾವೇಶದಲ್ಲಿ ಪಟದೂರು ಪುಟ್ಟಣ್ಣ ಮಾತನಾಡಿದರು.