-ಹೊಳಲ್ಕೆರೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ್ ಹೇಳಿಕೆ
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಶಿಕ್ಷಕರು ಕಲಿಕೆಯ ವಾತಾವರಣ ಸೃಷ್ಟಿಸಿ ಉತ್ತಮ ಫಲಿತಾಂಶ ಪಡೆಯಲು ಸದಾ ಶ್ರಮಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ್ ಸಲಹೆ ನೀಡಿದರು.ಪಟ್ಟಣದ ಹೊರವಲಯದ ಕಿತ್ತೂರು ರಾಣೆ ಚನ್ನಮ್ಮ ವಸತಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಎಸ್ಎಸ್ಎಲ್ಸಿ ತರಗತಿಯ ವಿಷಯಾಧಾರಿತ ಇಂಗ್ಲಿಷ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮನ್ವಯಾಧಿಕಾರಿ ಸುರೇಂದ್ರನಾಥ್ ಮಾತನಾಡಿ, ಶಿಕ್ಷಕರು ಬದಲಾದ ಕಾಲಕ್ಕೆ ತಕ್ಕಂತೆ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ಅನುಸಾರವಾಗಿ ಸನ್ನಿವೇಶ ರೂಪಿಸಿಕೊಡಬೇಕು. ವಿದ್ಯಾರ್ಥಿಗಳಲ್ಲಿ ನಕಾರಾತ್ಮಕ ಆಲೋಚನೆಗಳನ್ನು ಮೂಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಇಂಗ್ಲಿಷ್ ವಿಷಯ ಪರಿವೀಕ್ಷಕರಾದ ಚಂದ್ರಣ್ಣ. ಎಚ್.ಟಿ ಮಾತನಾಡಿ, ಪ್ರಶ್ನೆಪತ್ರಿಕೆಯ ಸ್ವರೂಪ ತಿಳಿದು ವಿದ್ಯಾರ್ಥಿಗಳಿಗೆ ಶಿಕ್ಷಕರು ಭಯರಹಿತ ವಾತಾವರಣವನ್ನು ಮೂಡಿಸುವ ಕಾರ್ಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಯರ್ರಿಸ್ವಾಮಿ, ವಿಷಯ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ್, ಅಸ್ಮಾ ಫಿರ್ದೋಸ್, ಹೊಳಲ್ಕೆರೆ ತಾಲೂಕು ಇಂಗ್ಲಿಷ್ ಕ್ಲಬ್ ಉಪಾಧ್ಯಕ್ಷ ರಾಜಶೇಖರ್, ಖಜಾಂಚಿ ಓಂಕಾರಪ್ಪ, ಕಾರ್ಯದರ್ಶಿ ಪ್ರವೀಣ್ ಕುಮಾರ್ ಹಾಗೂ ತಾಲೂಕಿನ ಇಂಗ್ಲಿಷ್ ವಿಷಯ ಬೋಧಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಇನಾಯತ್ ನಿರೂಪಿಸಿದರು. ಇಂಗ್ಲೀಷ್ ಕ್ಲಬ್ ಅಧ್ಯಕ್ಷ ಎಚ್.ಎಂ.ಸೋಮಶೇಖರ್ ವಂದಿಸಿದರು.------------
ಫೋಟೊ: ಹೊಳಲ್ಕೆರೆ ಹೊರವಲಯದ ಕಿತ್ತೂರು ರಾಣೆ ಚನ್ನಮ್ಮ ವಸತಿ ಪ್ರೌಢಶಾಲೆಯಲ್ಲಿ ನಡೆದ ಎಸ್ಎಸ್ಎಲ್ಸಿ ತರಗತಿಯ ವಿಷಯಾಧಾರಿತ ಇಂಗ್ಲಿಷ್ ಕಾರ್ಯಾಗಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ್ ಉದ್ಘಾಟಿಸಿದರು.(10 ಹೆಚ್ ಎಲ್ ಕೆ 1)