ಕನ್ನಡಪ್ರಭ ವಾರ್ತೆ ಬೈಲಹೊಂಗಲ
ದಕ್ಷಿಣ ಕಾಶಿಯಂದೆ ಪ್ರಸಿದ್ಧಿ ಪಡೆದ ಉತ್ತರ ಕರ್ನಾಟಕ ಭಾಗದ ಶ್ರೀಕ್ಷೇತ್ರ ಸೊಗಲ ಸೋಮೇಶ್ವರನ ದೇವಸ್ಥಾನದ ಸನ್ನಿಧಾನದಲ್ಲಿ ಧುಮುಕುತ್ತಿರುವ ಜಲಪಾತದಲ್ಲಿ ಎಳ್ಳು, ಹರಿಶಿನ ಮೈಗೆ ಹಚ್ಚಿಕೊಂಡು ಸ್ನಾನ ಮಾಡಿ ಲಕ್ಷಾಂತರ ಭಕ್ತರು ಕರ್ನಾಟಕ, ಸೇರಿದಂತೆ ಹೊರ ರಾಜ್ಯಗಳಿಂದ ಆಗಮಿಸಿದ್ದ ಭಕ್ತ ಸಮೂಹ, ಸಾಗರೋಪಾದಿಯಲ್ಲಿ ಹರಿದು ಬಂದು ಭಾನುವಾರ ಹಾಗೂ ಸೋಮವಾರ ದೇವರ ದರ್ಶನ ಪಡೆದರು. ಎಲ್ಲಿ ನೋಡಿದರಲ್ಲಿ ಜನಸಾಗರದಿಂದ ಕ್ಷೇತ್ರ ಕಿಕ್ಕಿರಿದಿತ್ತು.ಬಾಳಿಯ ದಿಂಡಿನ ತೆಪ್ಪೋತ್ಸವನ್ನು ಕಬ್ಬು, ತೆಂಗು, ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ವಾದ್ಯಮೇಳಗಳಿಂದ ಸೋಮೇಶ್ವರನ ದೇವಸ್ಥಾನದಲ್ಲಿದ್ದ ಬೆಳ್ಳಿಯ ಮೂರ್ತಿಯನ್ನು ಪಲ್ಲಕಿಯಲ್ಲಿ ತಂದು ತೆಪ್ಪದ ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಸಂಜೆ 4 ಕ್ಕೆ ಹೊಸೂರ ಗುರುಮಡಿವಾಳೇಶ್ವರಮಠದ ಗಂಗಾಧರ ಸ್ವಾಮೀಜಿ, ಬೈಲಹೊಂಗಲ-ಹೊಸೂರ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ನರೇಂದ್ರದ ಪರಮ ಪೂಜ್ಯ ಸಂಗಮೇಶ ಸ್ವಾಮೀಜಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು. ದೇವಸ್ಥಾನದ ಧರ್ಮದರ್ಶಿ ನಿಂಗಯ್ಯ ಪೂಜೇರಿ, ಅರ್ಚಕರಾದ ಗುರುಸ್ವಾಮಿ ಹೊಸಪೇಟಿಮಠ ಪ್ರಾರ್ಥಿಸಿದರು. ಶಾಸಕ ಮಹಾಂತೇಶ ಕೌಜಲಗಿ, ಟ್ರಸ್ಟ್ ಅಧ್ಯಕ್ಷ ವೀರನಗೌಡ ದೇ ಸಂಗಣ್ಣವರ ಹಾಗೂ ಆಡಳಿತ ಮಂಡಳಿ ಸರ್ವ ಸದಸ್ಯರು, ಸದ್ಬಕ್ತರು. ಸುತ್ತಲಿನ ಗ್ರಾಮಗಳ ಪ್ರಮುಖರ ಹಾಗೂ ಸಾವಿರಾರು ಭಕ್ತರ ಜಯಘೋಷಗಳ ಮಧ್ಯ ವಿಜೃಂಭಣೆಯಿಂದ ತಪ್ಪೋತ್ಸವದಲ್ಲಿ ಸಹಸ್ರಾರು ಜನ ಪಾಲ್ಗೊಂಡು ಭಕ್ತಿ-ಭಾವ ಮೆರದರು.
ಅಪಾರ ಜನಸ್ತೋಮ:ಗೋವಾ, ಮಹಾರಾಷ್ಟ್ರ, ಕೇರಳ, ಹೈದ್ರಾಬಾದ, ಆಂದ್ರಪ್ರದೇಶ, ಕರ್ನಾಟಕದ ವಿವಿಧ ಭಾಗದಿಂದ ಭಾನುವಾರ ಹಾಗೂ ಸೋಮವಾರ ಬೆಳಗ್ಗೆಯಿಂದಲೇ ಬೈಕ್, ವಾಹನ, ಚಕ್ಕಡಿ, ಟ್ರ್ಯಾಕ್ಟರ್, ಖಾಸಗಿ ವಾಹನಗಳ ಮುಖಾಂತರ ಲಕ್ಷಾಂತರ ಭಕ್ತರು ಆಗಮಿಸುವ ದೃಶ್ಯ ಸಾಮಾನ್ಯವಾಗಿತ್ತು. ಶ್ರೀಕ್ಷೇತ್ರಸೊಗಲದಲ್ಲಿ ಬೆಟ್ಟದಲ್ಲಿ ಕುಳಿತು ಭಕ್ತರು ಪುಣ್ಯ ಸ್ನಾನ ಮಾಡಿ, ಕುಟುಂಬದ ಸದಸ್ಯರು ಒಟ್ಟಿಗೆ ಕುಳಿತು ಸಿಹಿ ಅಡುಗೆ, ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಚಪಾತಿ, ಶೇಂಗಾ, ಗುರೆಳ್ಳ ಚಟ್ಟಿ, ಬಾನ, ಮೊಸರಣ್ಣ, ಗಜ್ಜರಿ ಚಟ್ನಿ, ಸಿಹಿ ಮಾದೋಲಿ, ಬಾಳೆಹಣ್ಣು, ವಿವಿಧ ಭಕ್ಷ ಭೋಜನದೊಂದಿಗೆ ಆಗಮಿಸಿದ ಭಕ್ತರು ದೇವರಿಗೆ, ಜಲಧಾರೆಗಳಿಗೆ ಪೂಜಿಸಿ, ನೈವದ್ಯ ಸಲ್ಲಿಸಿ, ರಸಭೂರಿ ಭೋಜನ ಸವಿದು, ಹಸಿರು ಪ್ರಕೃತಿಯಲ್ಲಿ ಸಂಚರಿಸುವ ಮೂಲಕ ಎಳ್ಳು ಬೆಲ್ಲ ವಿನಿಮಯ ಮಾಡಿಕೊಂಡು ನಾವು ನೀವು ಎಳ್ಳು ಬೆಲ್ಲದಂಗ ಇರೋನೆಂದು ಕುಷಲೋಪರಿ ಹಂಚಿಕೊಂಡು ಮಕರ ಸಂಕ್ರಮಣ ಆಚರಿಸಿದರು. ಪುಣ್ಯ ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಮಕ್ಕಳು ಜಿಂಕೆ ವನ, ಹುಲಿ ಗವಿ ಇತರ ದೇವಾಲಯಗಳಿಗೂ ಭೇಟಿ ನೀಡುವುದು ಸಾಮಾನ್ಯವಾಗಿತ್ತು. ಭಾನುವಾರ ರಾತ್ರಿ ಕ್ಷೇತ್ರಕ್ಕೆ ಅಪಾರ ಭಕ್ತರು ಆಗಮಿಸಿ, ಠಿಕಾಣಿ ಹೂಡಿದ್ದರು. ಸೋಮವಾರ ಕ್ಷೇತ್ರದಲ್ಲಿ ಎಲ್ಲಿ ನೋಡಿದಲ್ಲಿ ತುಂಬಿದ್ದ ಭಕ್ತರ ಕಂಠದಿಂದ ಹೊರಬಂದ ಜಯಘೋಷಗಳು ಮುಗಿಲು ಮುಟ್ಟುವಂತಿತ್ತು.
ವ್ಯಾಪಾರ ಭರ್ಜರಿ: ಎಳ್ಳು-ಬೆಲ್ಲ, ಕಡಲೆಯ ವ್ಯಾಪಾರ ಭರ್ಜರಿಯಾಗಿತ್ತು. ಕ್ಷೇತ್ರದ ದೇವಾಲಯಗಳಲ್ಲಿ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವಿಶೇಷ ಪೂಜೆಯು ಪೂಜಾರಿ ಮನೆತನದವರಿಂದ ಜರುಗಿದವು. ಸೋಮೇಶ್ವರನ, ಶಿವ-ಪಾರ್ವತಿ ಗದ್ದುಗೆಯನ್ನು ಹೂಗಳಿಂದ ಶೃಂಗರಿಸಲಾಗಿತ್ತು. ಬಿಲ್ವಾರ್ಚನೆ, ತ್ರಿಕಾಲ ಪೂಜೆ, ಬುತ್ತಿ, ಎಲೆ, ಮೂರ್ತಿ ಪೂಜೆ, ಪ್ರಾರ್ಥನೆ, ಪುಷ್ಪಾರ್ಚನೆ, ಅಲಂಕಾರ, ತೆರತೆರನಾದ ಪುಷ್ಪಮಾಲೆ, ಸಹಸ್ರ ಬಿಲ್ವಾರ್ಚಣೆ, ಅಭಿಷೇಕಗಳು ಬೆಳಗ್ಗೆಯಿಂದ ಜರಗಿದವು. ಸೊಗಲಕ್ಷೇತ್ರದ ಸೇವಾ ಸಮಿತಿಯ ಸ್ವಯಂ ಸೇವಕರು ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಕೆಲಸ ನಿರ್ವಹಿಸಿದರು. ಸಂಕ್ರಾಂತಿಗೆ ಆಗಮಿಸಿದ ಭಕ್ತರು, ಶೆಲ್ಪಿ, ವೀಡಿಯೊ ಮಾಡುವುದು ಕಂಡು ಬಂತು. ಎಲ್ಲಿನೋಡಿದಲ್ಲಿ ಸಂಕ್ರಾತಿಯ ಗೀತೆಗಳು, ಕಡಲೆ, ಎಳ್ಳು-ಬೆಲ್ಲ ಮಾರುವುದು ಸಾಮಾನ್ಯವಾಗಿತ್ತು. ಕುಟುಂಬದ ಸದಸ್ಯರು, ಮಕ್ಕಳು, ಸ್ನೇಹಿತರು, ನವ-ಜೋಡಿಗಳು ಅಂಗಡಿಗಳಲ್ಲಿ ಸಾಮಾನು ಖರೀದಿ ಜೋರಾಗಿತ್ತು. ಕ್ಷೇತ್ರದ ಸುತ್ತ-ಮುತ್ತಲು ವಾಹನಗಳ ಭರಾಟೆ ಹೆಚ್ಚಾಗಿ, ಟ್ರಾಫಿಕ್ ಸಮಸ್ಯೆಯಾಗಿತ್ತು.