ಹೊಸಕೋಟೆ: ಮನುಷ್ಯನಲ್ಲಿ ದುರಾಸೆಯ ಜೀವನ ಹೆಚ್ಚಾಗುತ್ತಿದ್ದು ನೆಮ್ಮದಿಯನ್ನು ಕಳೆದುಕೊಳ್ಳುವಂತಾಗಿದೆ. ಆಧ್ದರಿಂದ ವಿದ್ಯಾರ್ಥಿ ದೆಸೆಯಿಂದಲ್ಲಿ ಮಕ್ಕಳನ್ನು ದುರಾಸೆಯ ಹಳಿಯಿಂದ ಹೊರತಂದು ಸಂತೃಪ್ತಿಯ ಮನೋಭಾವ ರೂಢಿಸಬೇಕು ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ತಿಳಿಸಿದರು.
ನಗರದ ಕೋಟೆ ವಾರ್ಡಿನಲ್ಲಿರುವ ಚಾಣಕ್ಯ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಹಾಗೂ “ಕಲ್ಚರಲ್ ಕಲರವ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು, ಪ್ರಸ್ತುತ ದೇಶದ ವ್ಯವಸ್ಥೆಯಲ್ಲಿ ದುರಾಡಳಿತ ಹೆಚ್ಚಾಗಿದ್ದು, ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇಂತಹ ಸಂದರ್ಭದಲ್ಲಿ ದೇಶದಲ್ಲಿ ಬದಲಾವಣೆ ಎನ್ನುವುದು ಅತಿಮುಖ್ಯ. ಈ ಹಿನ್ನೆಲೆಯಲ್ಲಿ ಇಂದಿನ ಯುವ ಸಮುದಾಯ ಶಾಲಾ ಹಂತದಿಂದಲೆ ನ್ಯಾಯ, ನೀತಿ, ಧರ್ಮದ ಬಗ್ಗೆ ಅರಿವು ಪಡೆದುಕೊಳ್ಳಬೇಕು. ನಮಗೆ ಅಗತ್ಯವಾದುದನ್ನು ಧರ್ಮ ಮಾರ್ಗದಲ್ಲಿ ಪಡೆದುಕೊಂಡು ಸಂತೃಪ್ತಿಯ ಜೀವನವನ್ನು ಹೊಂದಬೇಕು. ಅತಿಯಾಸೆ ಎನ್ನುವುದು ಮನುಷ್ಯನನ್ನು ಅದಃಪಥನದತ್ತ ಕೊಂಡೊಯ್ಯುತ್ತದೆ. ಆದ್ದರಿಂದ ಅತಿಯಾಸೆ ರಹಿತ, ಸ್ವಚ್ಛ, ಸುಂದರವಾದ ನವಸಮಾಜವನ್ನು ನಿರ್ಮಿಸುವ ಕಾರ್ಯ ಯುವ ಪೀಳಿಗೆಯಿಂದಲೇ ಆಗಬೇಕು ಎಂದರು.ತಹಸೀಲ್ದಾರ್ ವಿಜಯ್ ಕುಮಾರ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಎನ್ನುವುದು ಸಾಕಷ್ಟು ಮಹತ್ವ ಪಡೆದುಕೊಂಡಿದ್ದು ಪ್ರತಿಯೊಬ್ಬರ ಜೀವನ ಶಿಕ್ಷಣದ ಮೇಲೆ ನಿಂತಿದೆ. ಆದ್ದರಿಂದ ಪ್ರತಿಯೊಬ್ಬರು ವಿದ್ಯಾರ್ಥಿ ಜೀವನದ ದೆಸೆಯಲ್ಲಿ ಕಲಿಕೆಗೆ ಒತ್ತನ್ನು ನೀಡಬೇಕು ಎಂದರು.
ಕೇಂದ್ರ ಕಸಾಪ ಸಹ ಕಾರ್ಯದರ್ಶಿ ವಿ.ಎಸ್.ಹಿರೇಮಠ್ ಮಾತನಾಡಿ, ಕಠಿಣ ಪರಿಶ್ರಮ, ನಿರಂತರ ಓದಿನಿಂದ ಜೀವನದಲ್ಲಿ ಸಾಧನೆಗೈಯ್ಯಲು ಸಾಧ್ಯ. ಮನೆಯಲ್ಲಿ ತಂದೆತಾಯಿಗಳು ತಮ್ಮ ಜೀವನವನ್ನು ಸವೆಸಿ ಮಕ್ಕಳಿಗೆ ವಿಧ್ಯಾಭ್ಯಾಸ ಕೊಡಲು ಕಷ್ಟಪಡುತ್ತಾರೆ. ಅವರ ಋಣ ತೀರಿಸುವ ಕಾರ್ಯ ಆಗಬೇಕು. ಆದ್ದರಿಂದ ವಿದ್ಯಾರ್ಥಿಗಳು ಶಾಲಾ ಹಂತದಿಂದಲೆ ಸ್ಪಷ್ಟ ಗುರಿ ಹೊಂದಿ, ಗುರಿ ಮುಟ್ಟಲು ನಿರಂತರ ಪ್ರಯತ್ನ ಪಡಬೇಕು ಎಂದರು.ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಎಂ.ಹೊಸಮನಿ, ಉಪಾಧ್ಯಕ್ಷ ಆರ್.ಲಕ್ಮೀ ನಾರಾಯಣ್ ಸಿಂಗ್, ಕಾರ್ಯದರ್ಶಿ ಶ್ರೀಶೈಲ ದಿನ್ನಿ, ಜಂಟಿ ಕಾರ್ಯದರ್ಶಿ ಎನ್.ಸುಧೀಂದ್ರ, ಖಜಾಂಚಿ ಜಿ.ಮಂಜುನಾಥ್ ಸಿಂಗ್ ಉಪಸ್ಥಿತರಿದ್ದರು.
ಫೋಟೋ: 4 ಹೆಚ್ಎಸ್ಕೆ 3ಹೊಸಕೋಟೆ ನಗರದ ಚಾಣಕ್ಯ ಪಬ್ಲಿಕ್ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆಯವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು.