ಹೈನುಗಾರಿಕೆಯಿಂದ ಉತ್ತಮ ಜೀವನಮಟ್ಟ: ಶಾಸಕ ಶ್ರೀನಿವಾಸ್

KannadaprabhaNewsNetwork | Published : Jun 8, 2025 2:53 AM
ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯ ಮಠ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವತಿಯಿಂದ ಹಾಲು ಶೇಖರಣ ಪ್ರಾರಂಭೋತ್ಸವ ಕಾರ್ಯಕ್ರಮ ಶಾಸಕ ಎಸ್.ಆರ್.ಶ್ರೀನಿವಾಸ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ರೈತರು ಹೈನುಗಾರಿಕೆಯನ್ನು ಮಾಡುವುದರಿಂದ ಉತ್ತಮ ಜೀವನಮಟ್ಟ ನಡೆಸಬಹುದು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಹಾಗಲವಾಡಿ ಹೋಬಳಿಯ ಮಠ ಗ್ರಾಮದಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವತಿಯಿಂದ ಹಾಲು ಶೇಖರಣ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಡೈರಿಗೆ ಹಾಲು ಹಾಕುವುದರಿಂದ ದಿನನಿತ್ಯ ಕೈಯಲ್ಲಿ ಹಣ ನೋಡಬಹುದು. ಈ ಹಣದಿಂದ ನಿಮ್ಮ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಇದು ಸಹಕಾರಿಯಾಗುತ್ತದೆ. ಆದ್ದರಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕು. ಮಠ ಗ್ರಾಮದ ಕೆರೆಗೆ ನೀರು ಹರಿಸಲು ಯೋಜನೆ ರೂಪಿಸಿದ್ದು, ತಕ್ಷಣ ಕಾಮಗಾರಿ ಪ್ರಾರಂಭಿಸುತ್ತಾರೆ. ಈ ಭಾಗಕ್ಕೆ ಈಗಾಗಲೇ ಸರ್ಕಾರದಿಂದ ಒಂದು ಕೋಟಿ ರು. ವೆಚ್ಚದ ಕೆಲಸಗಳು ಮುಗಿದಿವೆ. ಇನ್ನೂ ಹೆಚ್ಚಿನ ಅನುದಾನ ತಂದು ಹಂತ ಹಂತವಾಗಿ ಕೆಲಸ ಮಾಡಿಸುತ್ತೇನೆ ಎಂದರು.

ತುಮಕೂರು ಹಾಲು ಒಕ್ಕೂಟದ ನಿರ್ದೇಶಕಿ ಭಾರತಿ ಶ್ರೀನಿವಾಸ್ ಮಾತನಾಡಿ, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ರಾಜಕೀಯ ಮಾಡದೆ ಎಲ್ಲರ ಸಹಕಾರ ಪಡೆದು ಸಂಘದ ಅಭಿವೃದ್ಧಿಗೆ ಸಂಘಟಿತ ಮನೋಭಾವದಲ್ಲಿ ಮುಂದೆ ಸಾಗಬೇಕು. ಪ್ರಾರಂಭದಲ್ಲಿ ಕಡಿಮೆ ಹಾಲು ಸಂಗ್ರಹಣೆ ಆಗಿದ್ದರೂ, ಮುಂದಿನ ದಿನದಲ್ಲಿ ಹೆಚ್ಚಿಗೆ ಹಾಲು ಸಂಗ್ರಹಣೆ ಮಾಡಲು ಸಹಕಾರ ಸಂಘವು ಮುಂದಾಗಬೇಕು. ಹಾಲು ಒಕ್ಕೂಟದ ವತಿಯಿಂದ ಸಿಗುವಂತಹ ವಿವಿಧ ಸೌಲಭ್ಯಗಳನ್ನು ಡೈರಿಗೆ ಹಾಲು ಹಾಕುತ್ತಿರುವ ಎಲ್ಲ ರೈತರು ಪಡೆದುಕೊಳ್ಳಬೇಕು. ಅತಿ ಹೆಚ್ಚು ಹಾಲು ಬರುವಂತಹ ದೂರದ ಸ್ಥಳಗಳಿಗೆ ಅಲ್ಲಿಯೇ ಒಂದು ಉಪ ಕೇಂದ್ರ ತೆರೆಯುತ್ತೇವೆ ಎಂದು ಹೇಳಿದರು. ಪ್ರತಿಯೊಂದು ಮನೆಯಲ್ಲೂ ಒಂದು ಹಸುವನ್ನು ಸಾಕಿ ಜೀವನವನ್ನು ಹಸನು ಮಾಡಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ಚಂದ್ರಶೇಖರ್ ಕೇದಾನುರಿ, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಶಶಿಕಲಾ ನಿಂಗರಾಜು, ಗ್ರಾಪಂ ಅಧ್ಯಕ್ಷ ಗುರುರಾಜು,ಸದಸ್ಯರಾದ ಮಂಚಲದೊರೆ ರಮೇಶ್, ಕರಿಯಮ್ಮ, ಸಿದ್ದರಾಮಣ್ಣ, ಕೆ.ಟಿ.ರಾಜು,ಶಿವಾನಂದ್, ಬಸವರಾಜು, ಮಹದೇವ್, ಕೆಂಪರಾಜು, ಲಕ್ಷ್ಮಿಕಾoತರಾಜು,ಮುಖಂಡರಾದ ಸಣ್ಣರಂಗಯ್ಯ, ಗುರುರೇಣುಕಾರಾಧ್ಯ,ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.