ದಲಿತರು ಬಲಾಢ್ಯರಾಗಬೇಕಾದರೇ ಆರ್ಥಿಕವಾಗಿ ಸದೃಢವಾಗಿರಬೇಕು : ರಾಜರತ್ನ ಅಂಬೇಡ್ಕರ್

KannadaprabhaNewsNetwork | Updated : Apr 04 2025, 01:21 PM IST

ಸಾರಾಂಶ

ದಲಿತರು ಬಲಾಢ್ಯರಾಗಬೇಕಾದರೇ ಆರ್ಥಿಕವಾಗಿ ಸದೃಢವಾಗಿರಬೇಕು ಎಂದು ಡಾ.ಬಿ‌.ಆರ್‌.ಅಂಬೇಡ್ಕರ್ ಮರಿಮೊಮ್ಮಗ ಡಾ.ಬಿ.ಆರ್.ಅಂಬೇಡ್ಕರ್ ಮಲ್ಟಿ ಸ್ಟೇಟ್ ಕೋ ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ರಾಜರತ್ನ ಅಂಬೇಡ್ಕರ್ ಹೇಳಿದರು.

 ಕಾಗವಾಡ :  ದಲಿತರು ಬಲಾಢ್ಯರಾಗಬೇಕಾದರೇ ಆರ್ಥಿಕವಾಗಿ ಸದೃಢವಾಗಿರಬೇಕು ಎಂದು ಡಾ.ಬಿ‌.ಆರ್‌.ಅಂಬೇಡ್ಕರ್ ಮರಿಮೊಮ್ಮಗ ಡಾ.ಬಿ.ಆರ್.ಅಂಬೇಡ್ಕರ್ ಮಲ್ಟಿ ಸ್ಟೇಟ್ ಕೋ ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ರಾಜರತ್ನ ಅಂಬೇಡ್ಕರ್ ಹೇಳಿದರು.

ಪಟ್ಟಣದ ಅಮ್ರಪಾಲಿ ಬುದ್ಧ ವಿಹಾರದ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಅನಾವರಗೊಳಿಸಿ ನಮ್ಮ ನಡೆ ಆರ್ಥಿಕ ಉನ್ನತಿ ಕಡೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಪೀಳಿಗೆಯನ್ನು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕವಾಗಿ ಸಧೃಢಗೊಳಿಸುವಲ್ಲಿ ಎಲ್ಲರ ಪಾತ್ರ ಬಹುಮುಖ್ಯವಾಗಿದೆ ಎಂದರು. 

ಕೇಂದ್ರ ಸರ್ಕಾರ ಬ್ಯಾಂಕುಗಳ ಮೂಲಕ ಅದಾನಿ, ಅಂಬಾನಿಯವರ ₹62,000 ಸಾವಿರ ಕೋಟಿ ಮನ್ನಾ ಮಾಡ್ತಾರೆ. ಆದರೆ, ದಲಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ₹30 ಲಕ್ಷ ಸಾಲ ಕೇಳಿದರೇ ನಿರಾಕರಣೆ ಮಾಡುತ್ತಾರೆ. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿ ಖಾಸಗೀಕರಣ ಮಾಡಿ ದಲಿತರು ಅಧೋಗತಿಗೆ ಬಂದು ನಿಲ್ಲುವ ಪರಿಸ್ಥಿತಿ ತಂದೊಡ್ಡಿದ್ದಾರೆ.

 ಹೀಗಾಗಿ ದಲಿತ ವರ್ಗ ಆರ್ಥಿಕವಾಗಿ ಮುನ್ನುಗ್ಗಬೇಕೆನ್ನುವ ಉದ್ದೇಶದಿಂದ ಡಾ.ಬಿ.ಆರ್.ಅಂಬೇಡ್ಕರ್ ಮಲ್ಟಿ ಸ್ಟೇಟ್ ಕೋ ಆಪ್ ಕ್ರೆಡಿಟ್ ಸೊಸೈಟಿ ಪ್ರಾರಂಭ ಮಾಡಿದ್ದೇನೆ. 5 ವರ್ಷದ ಅವಧಿಯಲ್ಲಿ 125 ಭೌದ್ದಿಷ್ಟ ರಾಷ್ಟ್ರಗಳಲ್ಲಿ ಸೇರಿದಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಸ್‌ಬಿಐ ಸಮಾನಾಂತರವಾಗಿ ಬ್ಯಾಂಕ್ ಮುನ್ನಡೆಸಿ ನಮ್ಮ ಸಮಾಜದ ಏಳಿಗೆಗೆ ಶ್ರಮಿಸುವ ಗುರಿ ಇಟ್ಟುಕೊಂಡಿದ್ದೇನೆ. 

ಅದಕ್ಕಾಗಿ ನಿಮ್ಮೆಲ್ಲರ ಸಹಕಾರ ಮುಖ್ಯವಾಗಿದೆ ಎಂದು ಕೋರಿದರು.ಈ ವೇಳೆ ಪೂಜ್ಯ ಬದಂತ ಪ್ರಾಚಾರ್ಯ ಡಾ.ಯಶ್ ಕಶ್ಯಪ್ ಯನ ಮಹಾಸ್ತಾವೀರ ವೈಶಾಲಿ ಬುದ್ದ ವಿಹಾರ ಜಯಸಿಂಗಪೂರ, ಪೂಜ್ಯ ನಾಗರತ್ನ ಭಂತೇಜಿ ಲುಂಬಿನಿ ಬುದ್ದ ವಿಹಾರ ಬೆಂಗಳೂರು, ಪೂಜ್ಯ ಭಂತೇ ಜ್ಞಾನಜ್ಯೋತಿ ಧಮ್ಮ ಭೂಮಿ ಗೂಗವಾಡ, ಆಚಾರ್ಯ ಭಿಕ್ಖು ಗೋವಿಂದೋ, ಎಐಜಿ ಫೌಂಡೇಶನ್‌ ಸಂಸ್ಥಾಪಕ ಅರವಿಂದ ಘಟ್ಟಿ, ಅನೀಲ ಪ್ರಧಾನ, ಲಖನ ವರ್ಧನ, ಭಾಸ್ಕರ್ ಸಾವಂತ ಸೇರಿದಂತೆ ಸಾವಿರಾರು ಬೌದ್ದ ಬಾಂಧವರು ಉಪಸ್ಥಿತರಿದ್ದರು.

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಬರೆದ ಪ್ರಾಬ್ಲಮ್ ಆಫ್‌ ರೂಪೆ ಪುಸ್ತಕವನ್ನು ಓದಿ ಬ್ರಾಹ್ಮಣರು 58 ಬ್ಯಾಂಕ್ ಸ್ಥಾಪನೆ ಮಾಡಿ ಇವತ್ತಿಗೆ ನೂರು ವರ್ಷ ಕಳೆದಿದೆ. ಅದರಿಂದ ಅವರು ಆರ್ಥಿಕ ಉನ್ನತಿ ಪಡೆದಿದ್ದಾರೆ. ಆದರೆ, ನಾವು ಇನ್ನೂ ಆರ್ಥಿಕತೆಯಲ್ಲಿ ಹಿಂದುಳಿದ್ದೇವೆ. ಇದು ಎಂತಹ ವಿಪರ್ಯಾಸವಾಗಿದೆ.

-ರಾಜರತ್ನ ಅಂಬೇಡ್ಕರ್, ಡಾ.ಬಿ‌.ಆರ್‌.ಅಂಬೇಡ್ಕರ್ ಮರಿಮೊಮ್ಮಗ ಡಾ.ಬಿ.ಆರ್.ಅಂಬೇಡ್ಕರ್ ಮಲ್ಟಿ ಸ್ಟೇಟ್ ಕೋ ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷರು.

Share this article