ಕನ್ನಡಪ್ರಭವಾರ್ತೆ ಸಾಗರ
ಮಹಾಶಿವರಾತ್ರಿ ಅಂಗವಾಗಿ ಪಟ್ಟಣದ ನಾಟ್ಯ ತರಂಗ ಸಂಸ್ಥೆ ಕಲಾವಿದರು ವಿದ್ವಾನ್ ಜಿ.ಬಿ. ಜನಾರ್ದನ್ ಮಾರ್ಗದರ್ಶನದಲ್ಲಿ ಶುಕ್ರವಾರ ಸಂಜೆ ೬.೩೦ರಿಂದ ಶನಿವಾರ ಬೆಳಗ್ಗೆ ೫ ಗಂಟೆವರೆಗೆ ಎಂಟು ಶಿವಾಲಯಗಳಲ್ಲಿ ವಿನೂತನ ಪರಿಕಲ್ಪನೆಯಾದ ಶಿವ ಜಾಗರಣೆ ನೃತ್ಯ ಸಂಚಾರವನ್ನು ನಡೆಸಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.ಸಂಸ್ಥೆ ಮುಖ್ಯಸ್ಥ ವಿದ್ವಾನ್ ಜಿ.ಬಿ.ಜನಾರ್ಧನ ಅವರ ಪರಿಕಲ್ಪನೆಯಲ್ಲಿ ಮಹಾಶಿವರಾತ್ರಿ ಜಾಗರಣೆಯಂದು ಶಿವನನ್ನು ನೃತ್ಯದ ಮೂಲಕ ಪೂಜಿಸಬೇಕೆನ್ನುವ ಪರಿಕಲ್ಪನೆಯಲ್ಲಿ ಹುಟ್ಟಿಕೊಂಡ ಕಾರ್ಯಕ್ರಮವೇ ಶಿವ ಸಂಚಾರ ನೃತ್ಯ ಜಾಗರಣೆ. ಇದರ ಅಂಗವಾಗಿ ಮೊದಲಿಗೆ ಸಾಗರದ ಗಣಪತಿ ದೇವಸ್ಥಾನದಲ್ಲಿ ಸಂಜೆ ೬ ಗಂಟೆಗೆ ನೃತ್ಯ ಪ್ರದರ್ಶನ, ನಂತರ ಭೀಮನಕೋಣೆಯ ತ್ರ್ಯಂಬಕೇಶ್ವರ ದೇವಸ್ಥಾನ, ಯಲಗಳಲೆ ಶಿವಾಲಯ, ಬಳಿಕ ಇಕ್ಕೇರಿ ಅಘೋರೇಶ್ವರ, ಗೋಳಗೋಡು ತ್ರಯ್ಯಂಬಕೇಶ್ವರ ದೇವಸ್ಥಾನ, ಸಿರವಂತೆ ತ್ರಿಪುರಾಂತಕೇಶ್ವರ ದೇವಸ್ಥಾನ, ಕೊನೆಯಲ್ಲಿ ಸಾಗರದ ನಗರೇಶ್ವರ ದೇವಸ್ಥಾನದಲ್ಲಿ ನಿರಂತರ ಪ್ರದರ್ಶನ ನೀಡಲಾಯಿತು.
ಶನಿವಾರ ಬೆಳಗ್ಗೆ ೫ ಗಂಟೆ ಸುಮಾರಿಗೆ ನೃತ್ಯ ಭಾಸ್ಕರ ಸಭಾಂಗಣದಲ್ಲಿ ಶಿವ ಸಂಚಾರ ನೃತ್ಯ ಜಾಗರಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಿದ್ವಾನ್ ಜಿ.ಬಿ.ಜನಾರ್ದನ್, ಇದೊಂದು ನಮ್ಮ ಸಂಸ್ಥೆ ಪ್ರಯೋಗ. ಪಟ್ಟಣ ವ್ಯಾಪ್ತಿಯ ಎರಡು, ಗ್ರಾಮೀಣ ಭಾಗದ ೬ ದೇವಸ್ಥಾನಗಳಲ್ಲಿ ಸತತ ೧೨ ಗಂಟೆಗಳ ನೃತ್ಯ ಪ್ರದರ್ಶನ ನೀಡಲಾಗಿದೆ.ಶಿವನನ್ನು ನೃತ್ಯದ ಮೂಲಕ ಆರಾಧಿಸುವ ಈ ಕಾರ್ಯಕ್ರಮ ಅತ್ಯಂತ ಖುಷಿ ಕೊಟ್ಟಿದೆ. ನನ್ನ ನೇತೃತ್ವದಲ್ಲಿ ಸಂಸ್ಥೆ ನೃತ್ಯಪಟುಗಳಾದ ಸಮನ್ವಿತಾ, ರಾಜಲಕ್ಷ್ಮೀ, ನಂದಿನಿ, ಸೌಖ್ಯಾ, ಕಾವ್ಯ ಮತ್ತು ಪೂಜಾರವರು ಹೆಜ್ಜೆ ಹಾಕಿದ್ದಾರೆ. ಮುಖ್ಯವಾಗಿ ಗ್ರಾಮೀಣ ಭಾಗದ ಜನರಲ್ಲೂ ನೃತ್ಯದ ಬಗ್ಗೆ ಅರಿವು ಮೂಡಿಸುವುದು ನಮ್ಮ ಆದ್ಯತೆಯಾಗಿತ್ತು. ರಾಜ್ಯದ ಯಾವ ನೃತ್ಯ ಸಂಸ್ಥೆಯೂ ಈತನಕ ಮಾಡದ ವಿನೂತನ ಪ್ರಯೋಗ ಇದಾಗಿದ್ದು, ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆ ವಿಶೇಷ ಸಂದರ್ಭದಲ್ಲಿ ಇನ್ನಷ್ಟು ನೃತ್ಯ ಪ್ರಕಾರ ಪ್ರದರ್ಶಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.
- - - -೯ಕೆ.ಎಸ್.ಎ.ಜಿ.೨:ಇಕ್ಕೇರಿ ಅಘೋರೇಶ್ವರ ದೇವಸ್ಥಾನದಲ್ಲಿ ನೃತ್ಯ ಪ್ರದರ್ಶನ.