ಹಂಪಿಯಲ್ಲಿ ಮರಗಳಿಗೆ ಮಾರಕವಾದ ರಿಫ್ಲೆಕ್ಟರ್‌

KannadaprabhaNewsNetwork | Updated : Mar 14 2024, 02:08 AM IST

ಹಂಪಿಯಲ್ಲಿ ಸಂಚಾರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ರಿಫ್ಲೆಕ್ಟರ್‌ಗಳನ್ನು ಮರಗಳಿಗೆ ಅಳವಡಿಸಿದೆ.

ಹೊಸಪೇಟೆ: ಹಂಪಿ ಉತ್ಸವದ ಮೂರು ದಿನಗಳಲ್ಲಿ 12 ಲಕ್ಷ ಜನರು ಆಗಮಿಸಿದ್ದರು. ಬಸ್‌, ಬೈಕ್‌ ಸೇರಿದಂತೆ ನೂರಾರು ವಾಹನಗಳು ಆಗಮಿಸಿದ್ದವು. ಸಂಚಾರ ಸುರಕ್ಷತೆಗಾಗಿ ಹಂಪಿ-ಕಡ್ಡಿರಾಂಪುರ ರಸ್ತೆ, ಹಂಪಿ- ಕಮಲಾಪುರ ರಸ್ತೆಯಲ್ಲಿ ನೂರಾರು ಮರಗಳಿಗೆ ಪೊಲೀಸ್ ಇಲಾಖೆ ರಿಫ್ಲೆಕ್ಟರ್‌ ಅಳವಡಿಸಿತ್ತು. ಈಗ ಅವೇ ಮರಗಳಿಗೆ ಮರಣಶಾಸನವಾಗಿ ಪರಿಣಮಿಸಿವೆ.

ಹಂಪಿಯಲ್ಲಿ ಸಂಚಾರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ರಿಫ್ಲೆಕ್ಟರ್‌ಗಳನ್ನು ಮರಗಳಿಗೆ ಅಳವಡಿಸಿದೆ. ರಾತ್ರಿ ಹೊತ್ತಿನಲ್ಲಿ ಇವುಗಳಿಂದ ಜನರು ಬಚಾವ್‌ ಆಗಿದ್ದಾರೆ. ಸಂಭಾವ್ಯ ಅಪಾಯದಿಂದ ಪಾರಾಗಿದ್ದಾರೆ. ಈಗ ಜನರನ್ನು ಪಾರು ಮಾಡಿದ ಮರಗಳಿಗೆ ರಿಫ್ಲೆಕ್ಟರ್‌ ಅಳವಡಿಸಿರುವುದರಿಂದ ಒಣಗಲಾರಂಭಿಸಿವೆ. ಕೆಲ ಮರಗಳು ಉರುಳಿ ಬೀಳುತ್ತಿವೆ ಎಂಬುದು ಪರಿಸರ ಪ್ರೇಮಿಗಳ ಅಂಬೋಣ.

ಭಾರೀ ಬಿಸಿಲು:

ಹಂಪಿಯಲ್ಲಿ ಭಾರೀ ಬಿಸಿಲು ಇರುವುದರಿಂದ ಈ ಮರಗಳೇ ಪ್ರವಾಸಿಗರಿಗೆ ಆಸರೆಯಾಗಿವೆ. ಬೆಳೆದು ನಿಂತಿರುವ ಮರಗಳನ್ನು ಕಾಪಾಡಿಕೊಂಡರೆ ಪರಿಸರ ಉಳಿಸಿದಂತಾಗಲಿದೆ. ಆದರೆ, ಪೊಲೀಸ್‌ ಇಲಾಖೆ ರಿಫ್ಲೆಕ್ಟರ್‌ ಅಳವಡಿಸಿರುವುದರಿಂದ ಮರಗಳಿಗೆ ಹೊಡೆತ ಬೀಳುತ್ತಿದೆ. ಇದರ ಬದಲಿಗೆ ರಸ್ತೆಯ ಎರಡು ಬದಿ ರಿಫ್ಲೆಕ್ಟರ್‌ಗಳನ್ನು ಅಳವಡಿಸಬೇಕು ಎಂಬುದು ಪರಿಸರ ಪ್ರೇಮಿಗಳ ಆಗ್ರಹ.

ಹಂಪಿಯ ಕಲ್ಲು-ಬಂಡೆಗಳಿಂದ ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚುತ್ತಿದೆ. ಮರಗಳು ಬಿಸಿಗಾಳಿ ತಡೆಯಲಿವೆ. ಆದರೆ, ರಿಫ್ಲೆಕ್ಟರ್‌ ಹೊಡೆತದಿಂದ ಮರಗಳು ಉರುಳುತ್ತಿವೆ. ಈ ರಿಫ್ಲೆಕ್ಟರ್‌ ತೆಗೆದು ಮರಗಳಿಗೆ ಔಷಧ ಸಿಂಪಡಿಸಿ ಉಳಿಸಬೇಕಿದೆ.

ಮರಗಳ ಬದುಕಿನ ಬಗ್ಗೆ ಯಾರೂ ಯೋಚನೆ ಮಾಡುತ್ತಿಲ್ಲ. ಕಳೆದ ಹಂಪಿ ಉತ್ಸವದ ಬಳಿಕ ಹಲವು ಮರಗಳು ಉರುಳಿ ಬಿದ್ದಿವೆ. ಅರಣ್ಯ ಇಲಾಖೆ ಕೂಡ ಈ ಬಗ್ಗೆ ಸ್ಪಂದಿಸುತ್ತಿಲ್ಲ. ಪೊಲೀಸರು ಮಾತ್ರ ಮರಗಳಿಗೆ ರಿಫ್ಲೆಕ್ಟರ್‌ಗಳನ್ನು ಅಳವಡಿಸಿ; ಸುಮ್ಮನಾಗುತ್ತಿದ್ದಾರೆ ಎಂಬುದು ಪರಿಸರ ಪ್ರೇಮಿಗಳ ಅಳಲು.

ಸಸಿಗಳನ್ನು ನೆಡಲಿ:

ಮಳೆಗಾಲದಲ್ಲಿ ಹೊಸಪೇಟೆಯಿಂದ ಕಮಲಾಪುರ, ಕಂಪ್ಲಿಯಿಂದ ಕಮಲಾಪುರ, ಹಂಪಿಯಿಂದ ಕಡ್ಡಿರಾಂಪುರ ಕ್ರಾಸ್, ಕಮಲಾಪುರದಿಂದ ಹಂಪಿಯವರೆಗೆ ಸಸಿಗಳನ್ನು ನೆಟ್ಟು ಅರಣ್ಯ ಇಲಾಖೆ ಫೋಷಣೆ ಮಾಡಬೇಕು. ಆದರೆ ಪರಿಸರ ದಿನಾಚರಣೆ ಹಾಗೂ ಇನ್ನಿತರ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಸಿಗಳನ್ನು ನೆಟ್ಟು ಆ ಬಳಿಕ ಮರೆತು ಬಿಡುತ್ತಿದೆ. ಹಾಗಾಗಿ ಪೋಷಣೆ ಇಲ್ಲದೇ ಈ ರಸ್ತೆಯಲ್ಲಿ ಮರಗಳೇ ಇಲ್ಲದಂತಾಗಿದೆ.

ಹಂಪಿಯಲ್ಲಿ ನೂರಾರು ವರ್ಷದ ಮರಗಳಿವೆ. ಇವುಗಳನ್ನು ಸಂರಕ್ಷಿಸುವುದರ ಜೊತೆಗೆ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯವನ್ನು ಅರಣ್ಯ ಇಲಾಖೆ ಮಾಡಬೇಕು. ಎಲ್ಲ ಇಲಾಖೆಗಳ ಜತೆಗೆ ಸಮನ್ವಯ ಸಾಧಿಸಿ ಕ್ರಮ ವಹಿಸಬೇಕು. ಮರಗಳಿಗೆ ರಿಫ್ಲೆಕ್ಟರ್‌ಗಳನ್ನು ಅಳವಡಿಕೆ ಮಾಡಬಾರದು. ಈಗ ಅಳವಡಿಸಿರುವುದನ್ನು ತೆಗೆಯಬೇಕು. ಮರಗಳನ್ನು ಸಂರಕ್ಷಿಸಬೇಕು ಎನ್ನುತ್ತಾರೆ ಪರಿಸರ ಪ್ರೇಮಿ ಸುರೇಶ್‌.