ಟೈಲರ್ಸ್‌ಗಳ ಭದ್ರತೆಗಾಗಿ ಸಿಎಂಗೆ ಮನವಿ ಸಲ್ಲಿಸಲು ನಿರ್ಧಾರ

KannadaprabhaNewsNetwork | Published : Jan 12, 2024 1:46 AM

ಸಾರಾಂಶ

ಬೆಂಗಳೂರಿನ ಜಯನಗರದ 5ನೇ ಬ್ಲಾಕ್ ಶಾಲಿನಿ ಮೈದಾನದಲ್ಲಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ರಜತ ಮಹೋತ್ಸವ ಸಂಭ್ರಮ ಮತ್ತು ರಾಜ್ಯಮಟ್ಟದ ಟೈಲರ್ ವೃತ್ತಿ ಬಾಂಧವರ ಬೃಹತ್ ಸಮಾವೇಶ ಜ.30ರ ಮಂಗಳವಾರದಂದು ನಡೆಯಲಿದೆ ಎಂದು ಟೈಲರ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎಂ. ಸುರೇಂದ್ರ ತಿಳಿಸಿದ್ದಾರೆ.

ರಾಜ್ಯ ಟೈಲರ್ಸ್ ಅಸೋಸಿಯೇಷನ್‌ ಶೃಂಗೇರಿ ಕ್ಷೇತ್ರ ಸಮಿತಿ ಜಿಲ್ಲಾಧ್ಯಕ್ಷ ಸುರೇಂದ್ರ

ಕನ್ನಡಪ್ರಭ ವಾರ್ತೆ, ಕೊಪ್ಪ

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ರಜತ ಮಹೋತ್ಸವ ಸಂಭ್ರಮ ಮತ್ತು ರಾಜ್ಯಮಟ್ಟದ ಟೈಲರ್ ವೃತ್ತಿ ಬಾಂಧವರ ಬೃಹತ್ ಸಮಾವೇಶ ಜ.30ರ ಮಂಗಳವಾರದಂದು ಬೆಂಗಳೂರಿನ ಜಯನಗರದ 5ನೇ ಬ್ಲಾಕ್ ಶಾಲಿನಿ ಮೈದಾನದಲ್ಲಿ ನಡೆಯಲಿದೆ ಎಂದು ಟೈಲರ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಎಂ. ಸುರೇಂದ್ರ ತಿಳಿಸಿದ್ದಾರೆ. ಪಟ್ಟಣದ ಪುರಭವನದಲ್ಲಿ ನಡೆದ ರಾಜ್ಯ ಟೈಲರ್ಸ್ ಅಸೋಸಿಯೇಷನ್‌ನ ಶೃಂಗೇರಿ ಕ್ಷೇತ್ರ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಉಪಸ್ಥಿತಿ ಇರಲಿದ್ದು ಮುಖ್ಯ ಮಂತ್ರಿ ಸಿದ್ಧರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮುಂತಾದ ಗಣ್ಯರ ಉಪಸ್ಥಿತಿ ಇರಲಿದೆ. ಶೃಂಗೇರಿ ಕ್ಷೇತ್ರ ಸಮಿತಿ ಏಳು ವಲಯಗಳ ಟೈಲರ್ ವೃತ್ತಿ ಬಾಂಧವರು ಈ ಸಭೆಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.

ನಂತರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜವಳಿ ಉದ್ಯಮಕ್ಕೆ ವಿಶೇಷ ಅನುದಾನ ನೀಡುತ್ತಿರುವುದು ಸ್ವಾಗತಾರ್ಹ. ಸಾರ್ವಜನಿಕ ವಲಯದಲ್ಲಿ ಅತೀ ಅಗತ್ಯ ಸೇವೆ ನೀಡುತ್ತಿರುವ ಟೈಲರ್ಸ್ ವೃತ್ತಿ ಬಾಂಧವ ರನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ತೆಗೆದು ಜವಳಿ ನಿಗಮದ ವ್ಯಾಪ್ತಿಗೆ ಒಳ ಪಡಿಸ ಬೇಕು. ಟೈಲರ್‌ಗಳು ದಿನನಿತ್ಯ ಬಳಸುವ ಕಚ್ಚಾ ಸಾಮಾಗ್ರಿಗಳ ಕಂಪನಿಗಳಿಂದ ಸೆಸ್ಸ್ ಅನ್ನು ಬಳಸಿ ಟೈಲರ್ಸ್ ಕ್ಷೇಮನಿಧಿ ಮಂಡಳಿ ರಚಿಸಿ ಸಾಮಾಜಿಕ ನ್ಯಾಯ ಮತ್ತು ಭದ್ರತೆ ಒದಗಿಸಿಕೊಡಬೇಕೆಂದು ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಸಲ್ಲಿಸಿ ಕ್ರಮಕ್ಕಾಗಿ ಆಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದರು.

ರಾಜ್ಯ ಸಮಿತಿ ಸದಸ್ಯ ಕೆ.ವಿ. ಚಂದ್ರಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವಿ. ಬಾಲಕೃಷ್ಣ, ಶೃಂಗೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ರವೀಂದ್ರ ಎನ್.ಜಿ. ಕಾರ್ಯದರ್ಶಿ ನಳಿನಾಕ್ಷಿ, ಕೋಶಾಧಿಕಾರಿ ಜಯರಾಮಶೆಟ್ಟಿ, ಶೃಂಗೇರಿ ಕ್ಷೇತ್ರದ 7 ವಲಯ ಗಳಾದ ಶೃಂಗೇರಿ, ಕೊಪ್ಪ, ನ.ರಾ.ಪುರ, ಹರಿಹರಪುರ, ಜಯಪುರ, ಕಮ್ಮರಡಿ, ಬಾಳೆಹೊನ್ನೂರು ವಲಯಗಳ ಅಧ್ಯಕ್ಷರು ಮತ್ತು ಸದಸ್ಯರಿದ್ದರು.

Share this article