ಕನ್ನಡಪ್ರಭ ವಾರ್ತೆ ಹಾಸನ
ನಮ್ಮ ದೇಶದಲ್ಲಿ ಅಪೌಷ್ಟಿಕತೆ ವ್ಯಾಪಕವಾಗಿ ಹರಡಿದೆ. ಭಾರತದ ಅರ್ಧದಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಪೌಷ್ಟಿಕತೆಯು ಮಗುವನ್ನು ಸಂಪೂರ್ಣವಾಗಿ ಕ್ರಿಯಾತ್ಮಕ ವಯಸ್ಕನಾಗಿ ಅಭಿವೃದ್ಧಿಪಡಿಸುವುದನ್ನು ತಡೆಯುತ್ತದೆ ಮತ್ತು ಇದು ಶಿಕ್ಷಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದು ನಮ್ಮ ರಾಷ್ಟ್ರದ ಭವಿಷ್ಯದ ಮೇಲೆ ಪರಿಣಾಮ ಬೀರುವ ದೊಡ್ಡ ಸವಾಲಾಗಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಯು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, ೨೦೧೩ರ ವ್ಯಾಪ್ತಿಗೆ ಒಳಪಡುತ್ತದೆ. ಇದು ವಿಶ್ವದಲ್ಲೇ ಅತಿ ದೊಡ್ಡ ಕಾರ್ಯಕ್ರಮವಾಗಿದ್ದು, ೧೧.೨೦ ಲಕ್ಷಕ್ಕೂ ಹೆಚ್ಚು ಶಾಲೆಗಳಲ್ಲಿ ೧೧.೮೦ ಕೋಟಿ ಮಕ್ಕಳಿಗೆ ಈ ಬಿಸಿಯೂಟ ಸೇವೆ ನೀಡಲಾಗುತ್ತಿದೆ ಎಂದರು.
ಶಾಲೆಗಳಲ್ಲಿ ಮಕ್ಕಳ ಏಕಾಗ್ರತೆಯನ್ನು ಹೆಚ್ಚಿಸಲು, ಹಸಿವನ್ನು ತಡೆಗಟ್ಟಲು, ಶಾಲಾ ಭಾಗವಹಿಸುವಿಕೆ ಮತ್ತು ಸಾಮಾಜಿಕ ಸಮಾನತೆಯನ್ನು ಉತ್ತೇಜಿಸುವಲ್ಲಿ ಮತ್ತು ಲಿಂಗ ಸಮಾನತೆಯನ್ನು ಹೆಚ್ಚಿಸುವಲ್ಲಿ ಯೋಜನೆಗಳು ಸಹಾಯ ಮಾಡಿದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಇತ್ತೀಚಿನ ಅಧ್ಯಯನವು ಗ್ರಾಮೀಣ ಕುಟುಂಬಗಳ ಕ್ಯಾಲೊರಿ ಸೇವನೆಯ ೧೫% ರಷ್ಟು ಈ ಯೋಜನೆಯಿಂದ ಬಂದಿದೆ ಎಂದು ತೋರಿಸಿದೆ. ೨೦೦೧ರಲ್ಲಿ ಸರ್ವೋಚ್ಛ ನ್ಯಾಯಾಲಯವು ಪ್ರಾಥಮಿಕ ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೆ ಬೇಯಿಸಿದ ಊಟವನ್ನು ನೀಡುವುದನ್ನು ಸರ್ಕಾರಕ್ಕೆ ಕಡ್ಡಾಯಗೊಳಿಸಿತು ಎಂದು ಹೇಳಿದರು.ಮಧ್ಯಾಹ್ನದ ಬಿಸಿಯೂಟದ ಕಾರ್ಮಿಕರಾದ (ಅಡುಗೆಯ ಸಹಾಯಕರು) ಮಹಿಳೆಯರು ಸಾಮಾಜಿಕವಾಗಿ ಹಿಂದುಳಿದ, ಅತಿಕಡುಬಡತನ ಕುಟುಂಬದ, ವಿಧವೆ, ವಿಚ್ಛೇದಿತ ಮಹಿಳೆಯರಾಗಿದ್ದಾರೆ. ಮತ್ತು ತಮ್ಮ ದಿನನಿತ್ಯದ ಬದುಕಿಗೆ ಕಷ್ಟಪಡುತ್ತಿದ್ದಾರೆ. ಬಡ, ರೈತ, ಕೃಷಿಕೂಲಿಕಾರರ, ಮಕ್ಕಳಿಗೆ ಬಿಸಿ ಆಹಾರ ಬೇಯಿಸಿ, ಹಾಲು ನೀಡಿ, ಶಾಲಾ ಸ್ವಚ್ಛತೆ ಮಾಡಿ, ಶಾಲೆಯಲ್ಲಿ ನೀಡುವ ಎಲ್ಲಾ ಕೆಲಸ ನಿರ್ವಹಿಸಿ ಮಕ್ಕಳಲ್ಲಿ ಶೈಕ್ಷಣಿಕ ಆಸಕ್ತಿ ಮೂಡಿಸುವಲ್ಲಿ ಈ ಮಹಿಳೆಯರ ತಾಯ್ತತನದ ಪರಿಶ್ರಮವಿದೆ. ದಿನಕ್ಕೆ ಸುಮಾರು ೬-೮ ಗಂಟೆಗಳ ಕಾಲ ಕೆಲಸ ಮಾಡುವ ಇವರನ್ನು ಕಾರ್ಮಿಕರೆಂದು ಗುರುತಿಸಲಾಗಿಲ್ಲ ಮತ್ತು ಕನಿಷ್ಟ ವೇತನವನ್ನು ಸಹ ನೀಡಲಾಗುವುದಿಲ್ಲ. ಅವರು ಯಾವುದೇ ಮೂಲಭೂತ ಸೌಲಭ್ಯವಾಗಲಿ, ಸಾಮಾಜಿಕ ಭದ್ರತೆ ಪ್ರಯೋಜನಗಳಾಗಲಿ ಪಡೆಯುತ್ತಿಲ್ಲ. ಮತ್ತು ವರ್ಷದಲ್ಲಿ ಕೇವಲ ಹತ್ತು ತಿಂಗಳು ಮಾತ್ರ ಕೆಲಸಕ್ಕೆ ಗೌರವಧನ ಪಡೆಯುತ್ತಿದ್ದಾರೆ. ೨೦೦೯ರಿಂದ ಬಿಸಿಯೂಟ ಕಾರ್ಮಿಕರಿಗೆ ತಿಂಗಳಿಗೆ ಕೇವಲ ೧೦೦೦ ರು. ವೇತನ ನೀಡುತ್ತಿರುವುದು ದೇಶದಲ್ಲಿ ನಾಚಿಕೆಗೇಡಿನ ಸಂಗತಿಯಾಗಿದೆ.
ದೇಶದ ಬಿಸಿಯೂಟ ಕಾರ್ಮಿಕರು ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಗಾಗಿ ಮತ್ತು ಎಂಡಿಎಂಎಸ್ ಯೋಜನೆಯನ್ನು ಬಲಪಡಿಸಲು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಆದರೆ ಸರ್ಕಾರವು ಮಧ್ಯಾಹ್ನದ ಬಿಸಿಯೂಟದ ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದೆ. ಮಧ್ಯಾಹ್ನದ ಬಿಸಿಯೂಟದ ಕಾರ್ಮಿಕರ ವೇತನ ಹೆಚ್ಚಳ ಅನುಷ್ಠಾನವನ್ನು ಜಾರಿಗೊಳಿಸಲು ಮತ್ತು ಮಧ್ಯಾಹ್ನದ ಬಿಸಿಯೂಟದ ಕಾರ್ಮಿಕರ ಕುಂದುಕೊರತೆಗಳನ್ನು ಪರಿಹರಿಸಲು ನೀವು ವೈಯಕ್ತಿಕವಾಗಿ ಮಧ್ಯಪ್ರವೇಶಿಸಬೇಕೆಂದು ವಿನಂತಿಸುತ್ತೇವೆ ಎಂದು ಕೋರಿದರು.