ಹೊನ್ನಾವರ: ತಾಲೂಕಿನ ಮಂಕಿ ಮಾವಿನಕಟ್ಟೆ ಸಮೀಪದಿಂದ ಮಂಕಿ ಆಸ್ಪತ್ರೆಯವರೆಗೆ ಐಆರ್ಬಿ ಕಳಪೆ ಕಾಮಗಾರಿ ಸರಿಪಡಿಸಿ, ಸರ್ವಿಸ್ ರಸ್ತೆ, ಡಿವೈಡರ್ ದೀಪ ಅಳವಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ವಿವಿಧ ಸಂಘಟನೆ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.ಮಂಕಿ ಪಟ್ಟಣ ಪಂಚಾಯಿತಿ ಆವರಣದಲ್ಲಿ ಡಾ. ಪುನೀತ್ ರಾಜಕುಮಾರ ಪುಣ್ಯತಿಥಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ವಿವಿಧ ಸಂಘಟನೆಯ ಪ್ರಮುಖರು ಐಆರ್ಬಿ ರಸ್ತೆ ಕಾಮಗಾರಿಯಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಿರುವ ಸಮಸ್ಯೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಕ್ರಾಂತಿರಂಗ ಸಂಘಟನೆಯ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ, ಕೆಆರ್ಎಸ್ ಪಕ್ಷದ ಮುಖಂಡರಾದ ನೀಲಕಂಠ ನಾಯ್ಕ ಮಾತನಾಡಿದರು. ಕೆಆರ್ಎಸ್ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ರಾಮಾನುಜ ಅಯ್ಯಂಗಾರ್, ಉಪಾಧ್ಯಕ್ಷ ಗಣಪತಿ ನಾಯ್ಕ, ಹರೀಶ ಮೊಗೇರ, ವಿವಿಧ ಸಂಘಟನೆಯ ಪ್ರಮುಖರಾದ ರಾಜೇಶ ನಾಯ್ಕ, ಸತೀಶ ನಾಯ್ಕ, ಈಶ್ವರ ಗೌಡ ಮತ್ತಿತರಿದ್ದರು.
ಮುಂಡಗೋಡ: ಪಟ್ಟಣದ ಹುಬ್ಬಳ್ಳಿ- ಶಿರಸಿ ಮುಖ್ಯ ರಸ್ತೆಯ ಬೀದಿದೀಪಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಹುಬ್ಬಳ್ಳಿ ರಸ್ತೆ ಗೌಳಿ ಓಣಿ ನಿವಾಸಿಗಳು ಮಂಗಳವಾರ ಪಟ್ಟಣ ಪಂಚಾಯಿತಿಗೆ ಮನವಿ ಅರ್ಪಿಸಿದರು.ಪಟ್ಟಣದ ಹುಬ್ಬಳ್ಳಿ ರಸ್ತೆಯ ವಿದ್ಯುತ್ ದೀಪಗಳು ಹಲವು ದಿನಗಳಿಂದ ಕೆಟ್ಟಿದ್ದು, ಇದರಿಂದ ರಾತ್ರಿ ವೇಳೆ, ಹೆಣ್ಣುಮಕ್ಕಳು, ವೃದ್ಧರು ಏಕಾಂಗಿಯಾಗಿ ಸಂಚರಿಸಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಶಿರಸಿ- ಹುಬ್ಬಳ್ಳಿ ಮುಖ್ಯ ರಸ್ತೆಯಾಗಿರುವುದರಿಂದ ಈ ಮಾರ್ಗವಾಗಿ ನೂರಾರು ವಾಹನಗಳು ಸಂಚರಿಸುತ್ತವೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಈ ವಿಷಯವನ್ನು ತೀವ್ರ ಗಂಭೀರವಾಗಿ ಪರಿಗಣಿಸಿ ತಕ್ಷಣ ಪಟ್ಟಣದ ಬೀದಿದೀಪಗಳನ್ನು ಸರಿಪಡಿಸಿ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಿ ಮುಂದಾಗಬಹುದಾದ ಅನಾಹುತಗಳನ್ನು ತಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.