ಹೊನ್ನಾವರದಲ್ಲಿ ಹೆದ್ದಾರಿ ಅವ್ಯವಸ್ಥೆ ಸರಿಪಡಿಸಲು ಆಗ್ರಹ

KannadaprabhaNewsNetwork | Published : Oct 30, 2024 12:39 AM

ಸಾರಾಂಶ

ಕಳೆದ ಎರಡು ವರ್ಷಗಳಿಂದ ಐಆರ್‌ಬಿ ನಿರ್ಲಕ್ಷ್ಯ ಧೋರಣೆಯ ಕುರಿತು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಹೊನ್ನಾವರ: ತಾಲೂಕಿನ ಮಂಕಿ ಮಾವಿನಕಟ್ಟೆ ಸಮೀಪದಿಂದ ಮಂಕಿ ಆಸ್ಪತ್ರೆಯವರೆಗೆ ಐಆ‌ರ್‌ಬಿ ಕಳಪೆ ಕಾಮಗಾರಿ ಸರಿಪಡಿಸಿ, ಸರ್ವಿಸ್ ರಸ್ತೆ, ಡಿವೈಡರ್ ದೀಪ ಅಳವಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ವಿವಿಧ ಸಂಘಟನೆ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.ಮಂಕಿ ಪಟ್ಟಣ ಪಂಚಾಯಿತಿ ಆವರಣದಲ್ಲಿ ಡಾ. ಪುನೀತ್ ರಾಜಕುಮಾರ ಪುಣ್ಯತಿಥಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ವಿವಿಧ ಸಂಘಟನೆಯ ಪ್ರಮುಖರು ಐಆರ್‌ಬಿ ರಸ್ತೆ ಕಾಮಗಾರಿಯಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆಗಿರುವ ಸಮಸ್ಯೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಎರಡು ವರ್ಷಗಳಿಂದ ಐಆರ್‌ಬಿ ನಿರ್ಲಕ್ಷ್ಯ ಧೋರಣೆಯ ಕುರಿತು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಂಕಿ ಮಾವಿನಕಟ್ಟೆಯಲ್ಲಿ ಸರ್ವಿಸ್ ರಸ್ತೆ, ಮಂಕಿ ಆಸ್ಪತ್ರೆ ಬಳಿ ಸರ್ವಿಸ್ ರಸ್ತೆ ಮತ್ತು ಡಿವೈಡರ್ ಲೈಟ್ ಬಗ್ಗೆ ವಿನಂತಿಸುತ್ತಲೇ ಇದ್ದೇವೆ. ಜಿಲ್ಲಾಡಳಿತ, ತಾಲೂಕು ಆಡಳಿತ, ಎನ್‌ಎಚ್‌ಎಐ ಬೇಡಿಕೆ ಈಡೇರಿಸಲು ವಿಫಲವಾಗಿದೆ. ಬೇಡಿಕೆ ಈಡೇರದೆ ಹೋದಲ್ಲಿ‌ ಮಂಕಿ ರಾಷ್ಟ್ರೀಯ ಹೆದ್ದಾರಿ ತಡೆ ಮೂಲಕ ಹೋರಾಟ ಮಾಡುವುದಾಗಿ ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅನುಪಸ್ಥಿತಿಯಲ್ಲಿ ಇಲಾಖೆಯ ಅಧಿಕಾರಿಗಳು ಮನವಿ ಸ್ವೀಕರಿಸಿದರು.

ಕರ್ನಾಟಕ ಕ್ರಾಂತಿರಂಗ ಸಂಘಟನೆಯ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ, ಕೆಆರ್‌ಎಸ್ ಪಕ್ಷದ ಮುಖಂಡರಾದ ನೀಲಕಂಠ ನಾಯ್ಕ ಮಾತನಾಡಿದರು. ಕೆಆರ್‌ಎಸ್ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ರಾಮಾನುಜ ಅಯ್ಯಂಗಾರ್, ಉಪಾಧ್ಯಕ್ಷ ಗಣಪತಿ ನಾಯ್ಕ, ಹರೀಶ ಮೊಗೇರ, ವಿವಿಧ ಸಂಘಟನೆಯ ಪ್ರಮುಖರಾದ ರಾಜೇಶ ನಾಯ್ಕ, ಸತೀಶ ನಾಯ್ಕ, ಈಶ್ವರ ಗೌಡ ಮತ್ತಿತರಿದ್ದರು.

ಬೀದಿದೀಪಗಳ ದುರಸ್ತಿಗೆ ನಿವಾಸಿಗಳ ಆಗ್ರಹ

ಮುಂಡಗೋಡ: ಪಟ್ಟಣದ ಹುಬ್ಬಳ್ಳಿ- ಶಿರಸಿ ಮುಖ್ಯ ರಸ್ತೆಯ ಬೀದಿದೀಪಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಹುಬ್ಬಳ್ಳಿ ರಸ್ತೆ ಗೌಳಿ ಓಣಿ ನಿವಾಸಿಗಳು ಮಂಗಳವಾರ ಪಟ್ಟಣ ಪಂಚಾಯಿತಿಗೆ ಮನವಿ ಅರ್ಪಿಸಿದರು.ಪಟ್ಟಣದ ಹುಬ್ಬಳ್ಳಿ ರಸ್ತೆಯ ವಿದ್ಯುತ್ ದೀಪಗಳು ಹಲವು ದಿನಗಳಿಂದ ಕೆಟ್ಟಿದ್ದು, ಇದರಿಂದ ರಾತ್ರಿ ವೇಳೆ, ಹೆಣ್ಣುಮಕ್ಕಳು, ವೃದ್ಧರು ಏಕಾಂಗಿಯಾಗಿ ಸಂಚರಿಸಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಶಿರಸಿ- ಹುಬ್ಬಳ್ಳಿ ಮುಖ್ಯ ರಸ್ತೆಯಾಗಿರುವುದರಿಂದ ಈ ಮಾರ್ಗವಾಗಿ ನೂರಾರು ವಾಹನಗಳು ಸಂಚರಿಸುತ್ತವೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಈ ವಿಷಯವನ್ನು ತೀವ್ರ ಗಂಭೀರವಾಗಿ ಪರಿಗಣಿಸಿ ತಕ್ಷಣ ಪಟ್ಟಣದ ಬೀದಿದೀಪಗಳನ್ನು ಸರಿಪಡಿಸಿ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಿ ಮುಂದಾಗಬಹುದಾದ ಅನಾಹುತಗಳನ್ನು ತಡೆಯಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಮಂಜುನಾಥ ವೆರ್ಣೇಕರ, ಸುರೇಶ ಹೊಸ್ಕೇರಿ, ಮಲ್ಲಿಕಾರ್ಜುನ ಗೌಳಿ, ಸಂದೀಪ ನಾಯಕ, ಜಗದೀಶ ಗೌಳಿ, ಮುತ್ತುರಾಜ ಗೌಳಿ, ಅಭಿಷೇಕ ಗೌಳಿ, ಭರತ ಗೌಳಿ, ಸಂತೋಷ ಗೌಳಿ, ಅಜಿತ, ದರ್ಶನ ಭೋವಿ, ರಾಜು ರೆಡ್ಡಿ, ಕಾರ್ತಿಕ ಕೂಡ್ಲಮಠ, ಪ್ರಮೋದ ಗೌಳಿ, ಶಶಾಂಕ ಗೌಳಿ, ಮಣಿಕಂಠ ಗೌಳಿ, ಚಂದ್ರಕಾಂತ ವೆರ್ಣೇಕರ, ಬಸವರಾಜ ಠಣಕೆದಾರ, ಆನಂದ ಗೌಳಿ, ಸುಂಧು ಮುಂತಾದವರು ಉಪಸ್ಥಿತರಿದ್ದರು.

Share this article