ಭಾವೈಕ್ಯತಾ ದಿನಾಚರಣೆ ಕೈಬಿಡಲು ತೋಂಟದಾರ್ಯ ಮಠಕ್ಕೆ ದಿಂಗಾಲೇಶ್ವರ ಶ್ರೀ ಆಗ್ರಹ

KannadaprabhaNewsNetwork |  
Published : Feb 20, 2024, 01:48 AM ISTUpdated : Feb 20, 2024, 01:49 AM IST
ಪೋಟೋ ಇದೆ. | Kannada Prabha

ಸಾರಾಂಶ

ತೋಂಟದಾರ್ಯ ಮಠದ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ‌ ಅವರ 75ನೇ ಜಯಂತಿ‌ಯನ್ನು ಭಾವೈಕ್ಯತಾ ದಿನ ಎಂದು ಆಚರಿಸುತ್ತಿರುವುದು ಶಿರಹಟ್ಟಿ ಫಕೀರಸ್ವಾಮಿ ಮಠದ ಪರಂಪರೆಯನ್ನು ಕಿತ್ತುಕೊಳ್ಳುವ ಹುನ್ನಾರವಾಗಿದೆ. ಕೂಡಲೇ ಅದನ್ನು ನಿಲ್ಲಿಸಬೇಕು ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದರು.

ಗದಗ: ತೋಂಟದಾರ್ಯ ಮಠದ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ‌ ಅವರ 75ನೇ ಜಯಂತಿ‌ಯನ್ನು ಭಾವೈಕ್ಯತಾ ದಿನ ಎಂದು ಆಚರಿಸುತ್ತಿರುವುದು ಶಿರಹಟ್ಟಿ ಫಕೀರಸ್ವಾಮಿ ಮಠದ ಪರಂಪರೆಯನ್ನು ಕಿತ್ತುಕೊಳ್ಳುವ ಹುನ್ನಾರವಾಗಿದೆ. ಕೂಡಲೇ ಅದನ್ನು ನಿಲ್ಲಿಸಬೇಕು ಎಂದು ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದರು. ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿ, ತೋಂಟದಾರ್ಯ ಮಠವು ಫೆ. 21ರಂದು ಲಿಂ. ಡಾ. ತೋಟದ ಸಿದ್ಧಲಿಂಗ ಸ್ವಾಮೀಜಿ ಅವರಿಗೆ ಅನ್ವಯಿಸಿ ಅವರ 75ನೇ ಜಯಂತಿ ದಿನವನ್ನು ಭಾವೈಕ್ಯತೆಯ ದಿನವನ್ನು ಆಚರಿಸುವುದಾಗಿ, ಜೊತೆಗೆ ಭಾವೈಕ್ಯತೆಯ ಹರಿಹಾರ ಎಂಬುದಾಗಿ ತಿಳಿಸಿದೆ. ಇದನ್ನು ತಕ್ಷಣವೇ ಕೈ ಬಿಡಬೇಕು ಎಂದರು.ಸುಮಾರು 500 ವರ್ಷಗಳ ಭಾವೈಕ್ಯತಾ ಪರಂಪರೆ ಇತಿಹಾಸವನ್ನು ಹೊಂದಿರುವ ಶಿರಹಟ್ಟಿಯ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಮಹಾಸಂಸ್ಥಾನ ಪೀಠದ ಕರ್ತೃ ಫಕೀರೇಶ್ವರರಿಗೆ ಮಾತ್ರ ಅನ್ವಯಿಸುವ ಭಾವೈಕ್ಯತಾ ಹರಿಕಾರ ಎಂಬ ವಿಶೇಷ ಪದವನ್ನು ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರಿಗೆ ಬಳಸುತ್ತಿರುವುದು ಖಂಡನಾರ್ಹ. ಅವರ ಜಯಂತಿ ಆಚರಿಸಿದರೆ ನಮ್ಮದೇನು ಅಭ್ಯಂತರವಿಲ್ಲ. ಭಾವೈಕ್ಯತೆಯ ದಿನ ಎಂದು ಪ್ರಕಟಿಸಿರುವುದು ಶಿರಹಟ್ಟಿ ಮಠದ ಭಕ್ತ ವೃಂದಕ್ಕೆ ಅಪಾರ ನೋವನ್ನುಂಟು ಮಾಡಿದೆ ಎಂದರು.ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರೇ ತಮ್ಮ ಜೀವಿತಾವಧಿಯ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಿರಹಟ್ಟಿ ಫಕೀರೇಶ್ವರ ಮಠವೇ ನಿಜವಾದ ಭಾವೈಕ್ಯತೆಯ ಮಠ ಎಂದು ಸಾವಿರಾರು ಬಾರಿ ಹೇಳಿದ್ದರು. ಆದರೆ ಅವರು ತೀರಿ ಹೋದ ನಂತರ ಈಗಿರುವ ಸ್ವಾಮೀಜಿಗಳು ಹಾಗೂ ಆಡಳಿತಾಧಿಕಾರಿಗಳು ಸೇರಿ ಭಾವೈಕ್ಯತೆ ಎನ್ನುವುದನ್ನು ಹೈಜಾಕ್ ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ಲಿಂಗಾಯತ ಪ್ರಾತಿನಿಧ್ಯ ಹೊಂದಿರುವ ಹಾಗೂ ವಿರಕ್ತಮಠದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ವೀರಶೈವ ಲಿಂಗಾಯತ ಧರ್ಮವನ್ನು ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬ ಹೋರಾಟದ ಮುಂದಾಳತ್ವ ವಹಿಸಿಕೊಂಡು ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಪ್ರಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ನಡೆಯನ್ನು 560ಕ್ಕೂ ಹೆಚ್ಚು ಮಠಾಧೀಶರು ಖಂಡಿಸಿದ್ದರು ಎಂದರು.

ಶಿರಹಟ್ಟಿ ಮಠವು ಹಿಂದು -ಮುಸ್ಲಿಂ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ. ಹಾಗಾಗಿ ಭಾವೈಕ್ಯತೆ ಎನ್ನುವುದು ಶಿರಹಟ್ಟಿ ಮಠಕ್ಕೆ ಮಾತ್ರ ಯೋಗ್ಯ ಎನ್ನುವುದು ಶ್ರೀ ಮಠದ ಭಕ್ತರ ಅಭಿಪ್ರಾಯವಾಗಿದೆ. ಫಕ್ಕಿರೇಶ್ವರ ಮಠದಲ್ಲಿ ಮಂದಿರವಿದೆ, ಮಸೀದಿಯಿದೆ. ಗೋಪುರವೂ ಇದೆ, ಮೀನಾರ ಕೂಡಾ ಇದೆ. ಫಕೀರೇಶ್ವರ ಹೆಸರಿನಲ್ಲಿ ಫಕೀರನು ಇದ್ದಾನೆ, ಈಶ್ವರನೂ ಇದ್ದಾನೆ. ಜಗದ್ಗುರು ಫಕೀರೇಶ್ವರ ಮುಕುಟಪ್ರಾಯ ಭಾವೈಕ್ಯತೆ ಎಂಬ ಪದವನ್ನು ನಮ್ಮಿಂದ ಕಸಿದುಕೊಳ್ಳಲು ಯತ್ನಿಸುತ್ತಿರುವುದರಿಂದ, ನಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತೋಂಟದಾರ್ಯ ಮಠದ ಶ್ರೀಗಳಿಗೂ, ಆಡಳಿತ ವರ್ಗದವರಿಗೂ ಮನವರಿಕೆ ಮಾಡಿಕೊಂಡು, ಅವರ ಭಾವೈಕ್ಯತೆ ಪದವನ್ನು ಹಿಂಪಡೆಯುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಒಂದೊಮ್ಮೆ ಅವರು ಹಿಂಪಡೆಯದೇ ಇದ್ದಲ್ಲಿ ಫೆ. 21ರಂದು ಗದಗ ನಗರದಲ್ಲಿ ನಮ್ಮ ಮಠದ ಭಕ್ತರ ವತಿಯಿಂದ ಕರಾಳ ದಿನವನ್ನಾಗಿ ಆಚರಿಸಲಾಗುವುದು ಎಂದು ಹೇಳಿದರು.ಫಕೀರೇಶ್ವರ ಮಠದ ಭಕ್ತ ಎನ್.ಆರ್. ಕುಲಕರ್ಣಿ ಮಾತನಾಡಿ, ಭಾವೈಕ್ಯತಾ ದಿನ ವಿಷಯದ ಕುರಿತು ತೋಂಟದಾರ್ಯ ಮಠದ ಶ್ರೀಗಳು ಹಾಗೂ ಆಡಳಿತ ಮಂಡಳಿಯವರು ಎರಡು ಮಠಗಳ ಭಕ್ತರಿಗೆ ಸಂಘರ್ಷಕ್ಕೆ ಉಂಟು ಮಾಡುವ ನಿರ್ಧಾರ ಕೈಬಿಡದಿದ್ದರೆ, ಫೆ. 21ರಂದು ಗದಗ ನಗರದ ಬನ್ನಿಕಟ್ಟಿ ಸಮೀಪದಲ್ಲಿರುವ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನ ಪೀಠದ ಶಾಖಾಮಠದಲ್ಲಿ ಪೂಜೆ ನೆರವೇರಿಸಿ, ಮಾಲಾರ್ಪಣೆ ಮಾಡಿ ನಮ್ಮ ಪಾಲಿನ ಕರಾಳ ದಿನ ಎಂದು ಆಚರಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಸಿ.ಸಿ. ನೂರಶೆಟ್ಟರ, ಶಿವನಗೌಡ ಪಾಟೀಲ, ಸಂದೀಪ ಕಪ್ಪತ್ತನವರ, ಫಕ್ಕೀರೇಶ ರಟ್ಟಿಹಳ್ಳಿ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚೈತ್ರ ‌ನವರಾತ್ರಿ ನಿಮಿತ್ತ ಕನ್ನಡ ಗೀತೆ ಜತೆ ಮೋದಿ ಶುಭಾಶಯ -ದಿನಕ್ಕೊಂದು ಭಾಷೆಯ ಗೀತೆ ಪೋಸ್ಟ್‌
ಸೌದೆ ಒಲೆಗೆ ಖಾನಾವಳಿ ಮೊರೆ-ಒಂದು ಕ್ವಿಂಟಲ್ ಕಟ್ಟಿಗೆಗೆ 900 ರು. ವೆಚ್ಚ