ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿ ಮತ್ತು ನಿಕ್ರಾ ಯೋಜನೆಯ ನೋಡಲ್ ಅಧಿಕಾರಿ ಡಾ.ಶ್ರುತಿ ಎಂ.ಕೆ, ಇತ್ತೀಚಿನ ದಿನಗಳಲ್ಲಿ ಕೂಲಿಕಾರ್ಮಿಕರ ಸಮಸ್ಯೆ ಇದ್ದು ಈ ಸಮಸ್ಯೆಯನ್ನು ಸರಿದೂಗಿಸಲು ಡ್ರೋನ್ ಮೂಲಕ ಸಿಂಪಡಣೆ ಮಾಡುವುದು ಒಂದು ಪರ್ಯಾಯ ತಂತ್ರಜ್ಞಾನ. ಡ್ರೋನ್ ಮೂಲಕ ಸಿಂಪಡಣೆಯಲ್ಲಿ ಸಾಂಪ್ರದಾಯಿಕ ಪದ್ಧತಿಗಿಂತ ಗಣನೀಯವಾಗಿ ಕಡಿಮೆ ನೀರಿನ ಪ್ರಮಾಣ ಬೇಕಾಗಿರುವುದರಿಂದ ಮಳೆಯಾಶ್ರಯ ಪ್ರದೇಶಗಳಲ್ಲಿ ಇದರ ಬಳಕೆ ಬಹಳ ಉಪಯುಕ್ತವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಿಂಪಡಣೆಗೆ ಬೇಕಾಗುವ ಸಮಯದ ಉಳಿತಾಯ ಆಗಿ ದಕ್ಷತೆಯು ಹೆಚ್ಚಾಗಿರುತ್ತದೆ ಎಂದು ತಿಳಿಸಿದರು.
ಲಘು ಪೋಷಕಾಂಶಗಳನ್ನು ಹಸಿಕಡಲೆ ಬೆಳೆಗೆ ಒದಗಿಸುವುದರಿಂದ ಬೆಳೆವಣಿಗೆ ಮತ್ತು ಇಳುವರಿ ಮೇಲೆ ಆಗುವ ಅನುಕೂಲತೆಗಳ ಬಗ್ಗೆ ವಿವರಣೆ ನೀಡಿದರು. ಸಾಂಪ್ರದಾಯಿಕ ಪದ್ಧತಿಯಲ್ಲಿ ಸಿಂಪಡಣೆಯ ಕೌಶಲ್ಯ ಅಗತ್ಯವಿದ್ದು ರಾಸಾಯನಿಕಗಳ ಸಿಂಪಡಣೆಯ ವೇಳೆ ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ, ಡ್ರೋನ್ ಬಳಸುವುದರಿಂದ ರಾಸಾಯನಿಕ ಸಿಂಪಡಣೆಯ ವೇಳೆ ಉಂಟಾಗುವ ಅಡ್ಡ ಪರಿಣಾಮಗಳನ್ನು ನಿಯಂತ್ರಿಸಿ ನಿಖರ ಸಿಂಪಡಣೆ ಸಾಧ್ಯ ಎಂದರು. ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ನಂದಿನಿ ಮಾತನಾಡಿ, ಡ್ರೋನ್ ತಂತ್ರಜ್ಞಾನ ಬಳಕೆಯಿಂದ ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ಸಿಂಪಡಣೆ ಸಾಧ್ಯ, ರೈತರಿಗೆ ಸಮಯ ಮತ್ತು ಕಾರ್ಮಿಕರ ಉಳಿತಾಯವಾಗಿ ಅನುಕೂಲಕರವಾಗಿದೆ ಎಂದು ತಿಳಿಸಿದರು.ನಿಕ್ರಾ ಯೋಜನೆಯ ಹಿರಿಯ ಸಂಶೋಧನಾ ಸಹಾಯಕ ಮೋಹನ್ಕುಮಾರ್ ಯೋಜನೆಯಲ್ಲಿ ಡ್ರೋನ್ ಮೂಲಕ ಸಿಂಪಡಣೆಯ ತಾಂತ್ರಿಕತೆಯನ್ನು ರೈತರಿಗೆ ಪರಿಚಯಿಸಲಾಗುತ್ತಿದ್ದು, ರೈತರು ಈ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಹವಾಮಾನ ವೈಪರೀತ್ಯ ಪರಿಣಾಮಗಳನ್ನು ನಿರ್ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.