ಹೂವಿನಹಡಗಲಿ: ನನ್ನ ಮೇಲೆ ವಿಶ್ವಾಸವಿಟ್ಟು ಮತ ನೀಡಿ ಆಯ್ಕೆ ಮಾಡಿರುವ ಮತದಾರರ ಋಣ ತೀರಿಸುವ ಕೆಲಸ ಮಾಡುವೆ. ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕೆಂದು ಶಾಸಕ ಕೃಷ್ಣನಾಯ್ಕ ತಿಳಿಸಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಯಕ ಭವನ ಲೋಕಾರ್ಪಣೆಯ ಮೊದಲ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಮಾದರಿ ಯೋಜನೆ ಸಿದ್ಧವಾಗಿದೆ. ತಾಲೂಕಿನ 31 ಸರ್ಕಾರಿ ಪ್ರೌಢಶಾಲೆಗಳಲ್ಲಿ ಇಂಗ್ಲಿಷ್ ಭಾಷಾ ಪ್ರಯೋಗಾಲಯ, ಕಂಪ್ಯೂಟರ್ ಲ್ಯಾಬ್ ಸದ್ಯದಲ್ಲೇ ತೆರೆಯಲಿದ್ದೇವೆ. ಕ್ಷೇತ್ರವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸುವುದು ಮೊದಲ ಆದ್ಯತೆಯಾಗಿದೆ ಎಂದರು.
ರಂಗಭಾರತಿ ಅಧ್ಯಕ್ಷೆ ಎಂ.ಪಿ. ಸುಮಾ ವಿಜಯ್ ಮಾತನಾಡಿ, ಕ್ಷೇತ್ರಕ್ಕೆ ಆವರಿಸಿದ್ದ ಸಾಂಸ್ಕೃತಿಕ ಬರವನ್ನು ಕೃಷ್ಣನಾಯ್ಕ ನಿವಾರಿಸಿದ್ದಾರೆ. ಮನರಂಜನೆ ಕಾರ್ಯಕ್ರಮಗಳಿಗೆ ಬರೀ ಸಿನಿ ತಾರೆಯರನ್ನು ಆಹ್ವಾನಿಸದೇ ರಂಗಭೂಮಿ ಇತರೆ ಕಲಾ ಪ್ರಕಾರಗಳ ಪ್ರಸಿದ್ಧ ಕಲಾವಿದರನ್ನು ಆಹ್ವಾನಿಸಬೇಕು ಎಂದರು.ಹಂಪಸಾಗರದ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಹಿರೇಹಡಗಲಿಯ ಅಭಿನವ ಹಾಲಸ್ವಾಮೀಜಿ, ಕೊಂಬಳಿಯ ಗಾಡಿತಾತಾ, ರಾಮಸ್ವಾಮಿ ದೇವಸ್ಥಾನದ ರಾಕೇಶಯ್ಯ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಡಲ ಅಧ್ಯಕ್ಷ ಎಸ್. ಸಂಜೀವರೆಡ್ಡಿ, ಮುಖಂಡರಾದ ಎಚ್. ಪೂಜಪ್ಪ, ಎಂ. ಪರಮೇಶ್ವರಪ್ಪ, ಟಿ. ಪರಮೇಶ್ವರಪ್ಪ, ಕೆ. ಪುತ್ರೇಶ ಮಾತನಾಡಿದರು. ತಳಕಲ್ ಕರಿಬಸಪ್ಪ, ವಾರದ ಗೌಸ್ ಮೊಹಿದ್ದೀನ್, ಜಾಸ್ತಿ ಶ್ರೀನಿವಾಸ ರೆಡ್ಡಿ, ಉಮ್ಲಾನಾಯ್ಕ, ಸಿ. ಮೋಹನರೆಡ್ಡಿ, ಕೆ.ಬಿ. ವೀರಭದ್ರಪ್ಪ, ಗಡ್ಡಿ ಬಸವರಾಜ, ಎನ್. ಕೋಟೆಪ್ಪ, ಈಟಿ ಲಿಂಗರಾಜ, ಡಾ. ಲಕ್ಷ್ಮಣನಾಯ್ಕ ಇತರರು ಇದ್ದರು. ಕಿರುತೆರೆ ಕಲಾವಿದರಿಂದ ಮನರಂಜನೆ ಕಾರ್ಯಕ್ರಮ ಜರುಗಿತು.