ಮಾಳ ಘಾಟ್‌-ತನಿಕೋಡ್‌ ಚೆಕ್‌ಪೋಸ್ಟ್‌ ಹೆದ್ದಾರಿ ಅಭಿವೃದ್ಧಿ ಸನ್ನಿಹಿತ

KannadaprabhaNewsNetwork | Published : Jan 20, 2025 1:31 AM

ಸಾರಾಂಶ

ಕಾಮಗಾರಿ ಸಂದರ್ಭದಲ್ಲಿ ಹೆದ್ದಾರಿ ಒಟ್ಟು 11 ಮೀಟರ್ ಅಗಲೀಕರಣವಾಗಲಿದೆ.ಮಾಳ ಘಾಟ್ ನಿಂದ ತನಿಕೋಡು ಚೆಕ್ ಪೋಸ್ಟ್ ವರೆಗೆ ಒಟ್ಟು 29 ಕಿ.ಮೀ. ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಒಟ್ಟು 7 ಸೇತುವೆಗಳಿರಲಿದ್ದು ಪ್ರಸ್ತಾವಿತ ಹೆದ್ದಾರಿಯು ಈಗಿರುವ ರಸ್ತೆಯಲ್ಲಿಯೆ ಹಾದು ಹೋಗಲಿದೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ಮಂಗಳೂರು-ಸೋಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ಮಾಳ ಘಾಟ್‌ನಿಂದ ತನಿಕೋಡು ಗೇಟ್ ವರೆಗೆ ಅಗಲಿಕರಣ ಪ್ರಸ್ತಾಪವು ಅಂತಿಮ ಹಂತಕ್ಕೆ ತಲುಪಿದೆ. ಕಾಮಗಾರಿಗಾಗಿ 520 ಕೋಟಿ ರು. ಮೊತ್ತದ ಡಿಪಿಆರ್‌ (ವಿಸ್ತೃತ ಯೋಜನಾ ವರದಿ) ಅಂತಿಮವಾಗಿದ್ದು, ಕಾಮಗಾರಿ ಅರಣ್ಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಲು ಮಾತ್ರ ಬಾಕಿ ಇದೆ. ಕಾಮಗಾರಿ ವೇಳೆ ವ್ಯಾಪಕ ಅರಣ್ಯ ಹಾನಿಯಾಗಲಿದ್ದು, ಬ್ರಹ್ಮಾವರ ಬಳಿ ಪರ್ಯಾಯವಾಗಿ ಗಿಡ ನೆಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜಿಸಿದೆ.

ಕಾಮಗಾರಿ ಸಂದರ್ಭದಲ್ಲಿ ಹೆದ್ದಾರಿ ಒಟ್ಟು 11 ಮೀಟರ್ ಅಗಲೀಕರಣವಾಗಲಿದೆ.ಮಾಳ ಘಾಟ್ ನಿಂದ ತನಿಕೋಡು ಚೆಕ್ ಪೋಸ್ಟ್ ವರೆಗೆ ಒಟ್ಟು 29 ಕಿ.ಮೀ. ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಒಟ್ಟು 7 ಸೇತುವೆಗಳಿರಲಿದ್ದು ಪ್ರಸ್ತಾವಿತ ಹೆದ್ದಾರಿಯು ಈಗಿರುವ ರಸ್ತೆಯಲ್ಲಿಯೆ ಹಾದು ಹೋಗಲಿದೆ.

ಮಾಳ ಘಾಟ್‌ನ ಅಬ್ಬಾಸ್ ಕಟ್ಟಿಂಗ್‌ನಲ್ಲಿ ಬಂಡೆಗಳನ್ನು ಒಡೆದು 12 ಮೀಟರ್ ಅಗಲೀಕರಣ ನಡೆಯಲಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ತನಿಕೋಡು ವರೆಗೆ ಒಟ್ಟಿನಲ್ಲಿ ಈ ವನ್ಯಜೀವಿ ಭಾಗದಲ್ಲಿ ದ್ವಿಪಥ ರಸ್ತೆ ನಿರ್ಮಾಣವಾಗಲಿದೆ. ಕಾರ್ಕಳ ಮಾಳ ಗೇಟಿನಿಂದ ಮಂಗಳೂರಿನ ಕುಡುಪು ವರೆಗೆ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ರಸ್ತೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಮಾಳ ಘಾಟ್ ರಸ್ತೆಗೆ ಸುರಂಗ ಮಾರ್ಗ ನಿರ್ಣಯ ಪ್ರಸ್ತಾಪವಾಗಿಲ್ಲ ಎನ್ನಲಾಗಿದೆ.

25 ಹೆಕ್ಟೇರ್ ಅರಣ್ಯ ನಾಶ:

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಪ್ರಸ್ತಾವಿತ ರಾಷ್ಟ್ರೀಯ ಹೆದ್ದಾರಿಯ ಮಾಳ ಘಾಟ್ ನಿಂದ ತನಿಕೋಡು ಗೇಟ್ ವರೆಗೆ ಅಗಲಿಕರಣಕ್ಕಾಗಿ 11 ತಿರುವುಗಳು ಅಗಲೀಕರಣಗೊಳ್ಳಲಿದ್ದು ಸಹಸ್ರಾರು ಮರಗಳು ಬಲಿಯಾಗಲಿವೆ.

ಕುದುರೆಮುಖ ವನ್ಯ ಜೀವಿ ವಿಭಾಗದ ತುಂಗೆ ನದಿ ಹರಿದು ಸಾಗುವ ದಟ್ಟ ಕಾನನದ ನಡುವೆ ಸಾಗುವ ದಟ್ಟ ಕಾಡಿರುವ ಸುಮಾರು 25 ಹೆಕ್ಟೇರ್ ಅರಣ್ಯವು ನಾಶವಾಗಲಿದೆ. ಬಲು ಸೂಕ್ಷ್ಮ ಜೀವವೈವಿಧ್ಯತೆ ಹೊಂದಿರುವ ನಿತ್ಯಹರಿದ್ವರ್ಣದ ಕಾಡು ಇದು.

ಮಾಳ ಎಸ್ ಕೆ ಬಾರ್ಡರ್ ಹಾಗೂ ಕೆರೆಕಟ್ಟೆ ತನಿಕೋಡು ಮೂಲಕ ಶೃಂಗೇರಿ ತಲುಪುತ್ತದೆ. ಈ ಕಾಡಿನಲ್ಲಿ ಬಲು ಅಪರೂಪದ ಪಾರಂಪರಿಕ ಮರಗಳು ಪ್ರಾಣಿಗಳ ಅವಾಸ್ಥಾನವಾಗಿದೆ. ತುಂಗಾನದಿಯ 7 ಕ್ಕೂ ಹೆಚ್ಚು ಉಪನದಿಗಳು ಈ ರಸ್ತೆ ಸುತ್ತಲಿನ ಗುಡ್ಡಗಳ ಭಾಗದಲ್ಲಿಯೆ ಹುಟ್ಟುವ ಕಾರಣ ರಸ್ತೆ ಅಗಲೀಕರಣ ಸಂದರ್ಭದಲ್ಲಿ ನೀರಿನ ಸೆಲೆಗಳು ದಿಕ್ಕು ಬದಲಿಸುವ ಸಾಧ್ಯತೆ ಹೆಚ್ಚಾಗಲಿದೆ. ಕಾಮಗಾರಿ ಪರಿಸರದ ಮೇಲೆ ಭಾರಿ ಪರಿಣಾಮ ಬೀಳಲಿದೆ.

ಭೂಮಿ ಗುರುತು: ವನ್ಯಜೀವಿ ಮಂಡಳಿಯ ಪ್ರಕಾರ 25 ಹೆಕ್ಟೇರ್ ಅರಣ್ಯ ಪ್ರದೇಶದಕ್ಕೆ 50 ಹೆಕ್ಟೇರ್ ಕಂದಾಯ ಭೂಮಿಯನ್ನು ಗುರುತಿಸಿ ಅರಣ್ಯೀಕರಣಗೊಳಿಸಬೇಕೆಂಬ ನಿಯಮವಿದೆ. ಅದಕ್ಕಾಗಿ ಸುಮಾರು 120 ಎಕರೆ ವಿಶಾಲವಾದ ಭೂಮಿ ಲಭ್ಯವಾಗಬೇಕು. ಶೃಂಗೇರಿ ತಾಲೂಕಿನಲ್ಲಿ 50 ಹೆಕ್ಟೇರ್ ಜಮೀನು ಗುರುತಿಸಿದ್ದು ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಬರುವ ಕಾರಣ ಪ್ರಸ್ತಾಪ ತಿರಸ್ಕರಿಸಲಾಗಿತ್ತು. ಬಳಿಕ ಉಡುಪಿ ಜಿಲ್ಲೆಯ ಬ್ರಹ್ಮಾವರ ಬಳಿ 80 ಎಕರೆ ಜಮೀನು ಸರ್ವೆ ಕಾರ್ಯ ನಡೆದಿದ್ದು ಕಡಿದಾದ ಜಮೀನು ಲಭ್ಯವಾಗಿದೆ. ಇಲ್ಲಿ ಮರ ನೆಡಲು ಸೂಕ್ತ ಪ್ರದೇಶ ವೆಂದು ಅಧ್ಯಯನ ನಡೆಸಲು ಅರಣ್ಯ ಇಲಾಖೆ ಶ್ರಮಿಸುತ್ತಿದೆ. ಈಗಾಗಲೇ ಹೆಚ್ಚುವರಿ ಜಮೀನು ಒದಗಿಸುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಗುರುತಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಮನವಿ ಸಲ್ಲಿಸಲಾಗಿದೆ .

ಕುಸಿಯುವ ಹಂತದಲ್ಲಿ ಸೇತುವೆಗಳು: ಹೆದ್ದಾರಿಯಲ್ಲಿ ಒಟ್ಟು ಏಳು ಸೇತುವೆಗಳು ಸುಮಾರು 50 ವರ್ಷಕ್ಕಿಂತ ಹಳೆಯ ಸೇತುವೆಗಳಾಗಿವೆ. ಈ ಸೇತುವೆಗಳು ಕುಸಿಯುವ ಹಂತದಲ್ಲಿದ್ದು ತಡೆಗೋಡೆಗಳು ಕಿತ್ತುಹೋಗಿವೆ. ಈ 7 ಸೇತುವೆಯ ಕೆಳಭಾಗದಲ್ಲಿ ಕಬ್ಬಿಣದ ರಾಡ್‌ಗಳು ಹೊರ ಬಂದಿದ್ದು, ಅಪಾಯ ಆಹ್ವಾನಿಸುತ್ತಿವೆ. ವನ್ಯಜೀವಿ ವಿಭಾಗ ಪ್ರಸ್ತಾವಿತ ಹೆದ್ದಾರಿಯ ಅಗಲಿಕರಣದ ಸರ್ವೆ ನಡೆಸಿದ ಬಳಿಕ ಎಷ್ಟು ಮರಗಳ ತೆರವು ಗೊಳಿಸುವ ಮಾಹಿತಿ ಲಭಿಸಲಿದೆ..

.......................

ಉಡುಪಿ ಜಿಲ್ಲೆಯ ಬ್ರಹ್ಮಾವರ ಬಳಿ 80 ಎಕರೆ ಜಾಗ ಲಭ್ಯವಾಗಿದೆ. ಇಲ್ಲಿ ಗಿಡ ನೆಡಲು ಸೂಕ್ತ ಪ್ರದೇಶ ವೆಂದು ಅಧ್ಯಯನ ನಡೆಸಲು ಅರಣ್ಯ ಮಾಹಿತಿ ನೀಡಲಿದೆ. ಈಗಾಗಲೇ ಹೆಚ್ಚುವರಿ ಜಮೀನು ಒದಗಿಸುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಗೆ ಪತ್ರ ಬರೆಯಲಾಗಿದೆ. ಒಂದೆಡೆ 50 ಹೆಕ್ಟೇರ್ ಜಮೀನಿಗೆ ಸಿಕ್ಕಿದರೆ ಉತ್ತಮ.

-ಮಂಜುನಾಥ್ ಎಂ.ವಿ., ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿಯಂತರ.

Share this article