ಅಭಿವೃದ್ಧಿಯ ಹರಿಕಾರ ಬಾಬು ಜಗಜೀವನ್ ರಾಂ: ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ

KannadaprabhaNewsNetwork | Published : Jul 7, 2024 1:15 AM

ಸಾರಾಂಶ

ದೇಶ ಇಂದು ಆಹಾರ ಧಾನ್ಯ ಸ್ವಾವಲಂಬನೆ ಸಾಧಿಸಿರುವುದಕ್ಕೆ ಬಾಬು ಜಗಜೀವನ್ ರಾಂ ಹಾಕಿಕೊಟ್ಟ ಮಾರ್ಗಗಳೇ ಕಾರಣ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಬಣ್ಣಿಸಿದರು. ರಾಮನಗರದಲ್ಲಿ ಡಾ.ಬಾಬು ಜಗಜೀವನ್ ರಾಂ ಅವರ 38ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಸಿರು ಕ್ರಾಂತಿಯ ಹರಿಕಾರ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಪುಣ್ಯಸ್ಮರಣೆ

ದೇಶಕ್ಕೆ ಜಗಜೀವನ್‌ರಾಂ ಕೊಡುಗೆ ಅಪಾರ

ಕನ್ನಡಪ್ರಭ ವಾರ್ತೆ ರಾಮನಗರ

ದೇಶ ಇಂದು ಆಹಾರ ಧಾನ್ಯ ಸ್ವಾವಲಂಬನೆ ಸಾಧಿಸಿರುವುದಕ್ಕೆ ಬಾಬು ಜಗಜೀವನ್ ರಾಂ ಹಾಕಿಕೊಟ್ಟ ಮಾರ್ಗಗಳೇ ಕಾರಣ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಬಣ್ಣಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಹಸಿರು ಕ್ರಾಂತಿಯ ಹರಿಕಾರ ಮತ್ತು ದೇಶದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಅವರ 38ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ಬಾಬು ಜಗಜೀವನ್ ರಾಮ್ ಅವರು ಉಪಪ್ರಧಾನಿಯಾಗಿ ದೇಶಕ್ಕೆ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ. ರಕ್ಷಣಾ ಮತ್ತು ಕೃಷಿ ಸಚಿವರಾಗಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕೃಷಿ ಸಚಿವರಾಗಿದ್ದಾಗ ದೇಶದಲ್ಲಿ ಆಹಾರ ಧಾನ್ಯ ಕೊರತೆಯಾಗಿದ್ದ ಸಂದರ್ಭದಲ್ಲಿ ಅತಿದೊಡ್ಡ ಬದಲಾವಣೆ ತಂದು ಹಸಿರು ಕ್ರಾಂತಿ ಮಾಡಿದ್ದನ್ನು ಯಾರೂ ಸಹ ಮರೆಯಲಾಗದು. ದಲಿತರ ಉದ್ಧಾರಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲು ಕಾರಣರಾದರು ಎಂದು ಹೇಳಿದರು.

ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ಬಾಬು ಜಗಜೀವನ್‌ರಾಮ್ ಅವರು ದೇಶದ ಉಪಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಹಲವಾರು ಕಾರ್ಯಕ್ರಮಗಳು, ಜನಪರ ಯೋಜನೆಗಳು ಅಂದು, ಇಂದು, ಎಂದೆಂದಿಗೂ ಸಾರ್ವಕಾಲಿಕ. ಜ್ಞಾನ ಮತ್ತು ವ್ಯಾಪಕ ದೃಷ್ಟಿಕೋನದಿಂದ ದೇಶಸೇವೆ ಮಾಡಿ ಸರ್ವಜನರ ಕಲ್ಯಾಣದ ಕನಸು ಕಂಡಿದ್ದವರು. ಆದ್ದರಿಂದ ಅವರ ಆದರ್ಶಗಳನ್ನು ಇಂದಿನ ಯುವಪೀಳಿಗೆ ಪಾಲಿಸುವಂತಾಗಬೇಕು. ಅವರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು. ಯುವಜನತೆ ಇಂತಹ ಮಹನೀಯರ ಚರಿತ್ರೆ, ಇತಿಹಾಸ ಅಧ್ಯಯನ ಮಾಡಬೇಕು. ಆಗಲೇ ದೇಶಪ್ರೇಮ, ದೇಶದ ಅಭಿವೃದ್ಧಿ ಪರ ಚಿಂತನೆಗಳು ಮನದಲ್ಲಿ ಮೊಳೆಯುತ್ತವೆ. ಆಗಲೇ ಜನ್ಮ ಸಾರ್ಥಕವೆನಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ದಿನಕರ್ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಮುದಾಯದ ಮುಖಂಡರಾದ ಚಲುವರಾಜು, ಶಿವಶಂಕರ್, ದೊಡ್ಡಯ್ಯ, ಶಿವಕುಮಾರಸ್ವಾಮಿ, ಕೃಷ್ಣಮೂರ್ತಿ, ಕನಕಪುರ ಶಿವಕುಮಾರ್, ಹರೀಶ್ ಬಾಬು, ಅಂಜನಪುರ ವಾಸು, ಗುರುಮೂರ್ತಿ, ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Share this article