ಕನ್ನಡಪ್ರಭ ವಾರ್ತೆ ಮರಿಯಮ್ಮನಹಳ್ಳಿ
ಬಹುದಿನಗಳ ಬೇಡಿಕೆಯಾಗಿದ್ದ ಡಣಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 50 ರಸ್ತೆಯ ಫ್ಲೈಒವರ್ ಮತ್ತು ಸರ್ವೀಸ್ ರಸ್ತೆ ಸೇರಿದಂತೆ ಇತರ ಕಾಮಗಾರಿಗೆ ಮುಂದಿನ ತಿಂಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು ಎಂದು ಸಂಸದ ಈ. ತುಕಾರಾಂ ಹೇಳಿದರು.ಪಟ್ಟಣದಲ್ಲಿ ಸಂತೆ ಮಾರುಕಟ್ಟೆಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದರು. ಡಣಾಪುರ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅನೇಕ ಅಪಘಾತಗಳು ಸಂಭವಿಸುತ್ತಿದ್ದವು. ಅಪಘಾತಗಳನ್ನು ತಡೆಯಲು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸುಮಾರು ₹54 ಕೋಟಿ ವೆಚ್ಚದಲ್ಲಿ ಸರ್ವೀಸ್ ರಸ್ತೆ, ವೇ ಬ್ರಿಡ್ಜ್ ಇತರ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದು ಹೇಳಿದರು.
ಮರಿಯಮ್ಮನಹಳ್ಳಿ ರೈಲ್ವೆ ನಿಲ್ದಾಣ ಅಭಿವೃದ್ಧಿಪಡಿಸಲಾಗುವದುು. ಕೂಡ್ಲಿಗಿ ರಸ್ತೆಯ ರೈಲ್ವೆ ಗೇಟ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದು, ರೈಲ್ವೆ ಗೇಟ್ ರಸ್ತೆ ಅಗಲಗೊಳಿಸಲಾಗುವುದು ಎಂದು ಅವರು ಹೇಳಿದರು.ಕೂಡ್ಲಿಗಿ ತಾಲೂಕಿನ ಅಮ್ಮನಕೆರೆಯ ರಾಷ್ಟ್ರೀಯ ಹೆದ್ದಾರಿಯ ವೇಬ್ರಿಡ್ಜ್, ಸರ್ವೀಸ್ ರಸ್ತೆ, ಅಂಡರ್ ಪಾಸ್, ಮುಂಜೂರಾಗಿದೆ. ಅಲ್ಲದೇ ಅಲ್ಲಲ್ಲಿ ಸಣ್ಣಪುಟ್ಟ ಗ್ರಾಮಗಳ ಹತ್ತಿರ ಸರ್ವೀಸ್ ರಸ್ತೆಗಳನ್ನು ಜನರಿಗೆ ಅನುಕೂಲವಾಗುವಂತೆ ಮುಂದಿನ ದಿನಗಳಲ್ಲಿ ನಿರ್ಮಿಸಿಕೊಡಲಾಗುವುದು ಎಂದು ತುಕಾರಾಮ ಹೇಳಿದರು.
ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ. ನೇಮರಾಜ್ ನಾಯ್ಕ್, ಪಪಂ ಅಧ್ಯಕ್ಷ ಆದಿಮನಿ ಹುಸೇನ್ ಬಾಷಾ, ಉಪಾಧ್ಯಕ್ಷೆ ಲಕ್ಷ್ಮೀ ರೋಗಾಣಿ ಮಂಜುನಾಥ, ಸ್ಥಾಯಿ ಸಮಿತಿ ಅಧ್ಯಕ್ಷೆ ಹುಲಿಗಿಬಾಯಿ, ಪಪಂ ಮುಖ್ಯಾಧಿಕಾರಿ ಡಿ.ಜಿ. ಈರಣ್ಣ ಉಪಸ್ಥಿತರಿದ್ದರು.ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ:
ಕೊಟ್ಟೂರು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿರ್ಮಾಣವಾದ ಇಂದಿರಾ ಕ್ಯಾಂಟೀನ್ನ್ನು ಸಂಸದ ಈ.ತುಕಾರಾಂ, ಶಾಸಕ ಕೆ. ನೇಮಿರಾಜನಾಯ್ಕ ಇತ್ತೀಚೆಗೆ ಉದ್ಘಾಟಿಸಿದರು.ನಿರ್ಮಾಣವಾಗಿ ಒಂದೂವರೆ ವರ್ಷವಾಗಿದ್ದರೂ ಕ್ಯಾಂಟೀನ್ ಆರಂಭವಾಗಿರಲಿಲ್ಲ. ಹಿಂದಿನ ವಾರ ಶಾಸಕರು ಉದ್ಘಾಟಿಸುವ ಕಾರ್ಯಕ್ರಮ ನಿಗದಿಯಾಗಿ ರದ್ದಾಗಿತ್ತು. ಅಂತೂ ಇಂತೂ ಎನ್ನುವಂತೆ ಸಂಸದರೊಂದಿಗೆ ಶಾಸಕರು ಕೂಡಿಕೊಂಡು ಕ್ಯಾಂಟೀನ್ ಉದ್ಘಾಟಿಸಿದರು. ಪಪಂ ಅಧ್ಯಕ್ಷ ಬದ್ದಿ ರೇಖಾ ರಮೇಶ, ಜಿಪಂ ಮಾಜಿ ಗ್ಯಾರಂಟಿ ಯೋಜನೆ ಸಮಿತಿ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಉಪಾಧ್ಯಕ್ಷ ಪಿ.ಎಚ್. ದೊಡ್ಡರಾಮಣ್ಣ, ಮಾಜಿ ಸದಸ್ಯ ಎಂಎಂಜೆ ಹರ್ಷವರ್ಧನ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಐ. ದಾರುಕೇಶ, ಜೆಡಿಎಸ್ ಮುಖಂಡರಾದ ವೈ. ಮಲ್ಲಿಕಾರ್ಜುನ, ಬಾದಾಮಿ ಮುತ್ತಣ್ಣ, ಬೂದಿ ಶಿವಕುಮಾರ, ಎಂಎಂಜೆ ಶೋಭಿತ್, ಕಾಂಗ್ರೆಸ್ ಮುಖಂಡರಾದ ಪವಾಡ ಹನುಮಂತಪ್ಪ, ಅಕ್ಕಿ ತೋಟೇಶ, ಬದ್ದಿ ಮರಿಸ್ವಾಮಿ ಸೇರಿ ಅನೇಕರು ಇದ್ದರು.ಕಾಂಗ್ರೆಸ್ ಫ್ಲೆಕ್ಸ್ ಕಂಡು ಕೆಂಡಾಮಂಡಲ:ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಸಂಸದರೊಂದಿಗೆ ಆಗಮಿಸಿದ ಜೆಡಿಎಸ್ ಶಾಸಕ ಕೆ. ನೇಮಿರಾಜ ನಾಯ್ಕ, ಕ್ಯಾಂಟೀನ್ ಕಟ್ಟಡ ಪಕ್ಕದಲ್ಲಿದ್ದ ಕೆಎಂಎಫ್ ಅಧ್ಯಕ್ಷ ಎಲ್. ಭೀಮನಾಯ್ಕ ಹಾಗೂ ಇತರೆ ಕಾಂಗ್ರೆಸ್ ಮುಖಂಡರ, ಸ್ಥಳೀಯರ ಫ್ಲೆಕ್ಸ್ ನೋಡುತ್ತಿದ್ದಂತೆ, ಏರು ಧ್ವನಿಯಲ್ಲಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಫ್ಲೆಕ್ಸ್ ಹಾಕಿದ್ದರೂ ಸುಮ್ಮನಿದ್ದೀರಾ, ಪ್ರೋಟೊಕಾಲ್ ನಿರ್ವಹಣೆ ಮಾಡುವುದು ಗೊತ್ತಾಗಲ್ವೆ, ಮೊದಲು ಕಿತ್ತು ಹಾಕಿ, ಇಲ್ಲವಾದರೆ ಉದ್ಘಾಟನೆಗೆ ಬರಲ್ಲ ಎಂದು ಪಪಂ ಮುಖ್ಯಾಧಿಕಾರಿಗೆ ಜೋರು ಮಾಡಿದರು. ಕ್ಷಣಾರ್ಧದಲ್ಲಿ ಪಪಂಯವರು ಫ್ಲೆಕ್ಸ್ ಕಿತ್ತು ಹಾಕಿದರು. ಶಾಸಕರು ಏರು ಧ್ವನಿಯಲ್ಲಿ ಮಾತಾಡುವಾಗ ಸಂಸದರು ಸಮಾಧಾನ ಮಾಡಿ ಉದ್ಘಾಟನೆ ಕರೆದುಕೊಂಡು ಹೋದರು.ಇದು ಪಕ್ಷದ ಕಾರ್ಯಕ್ರಮ ಅಲ್ಲ ಸರ್ಕಾರಿ ಕಾರ್ಯಕ್ರಮ, ನಿಮ್ಮ ಈ ಕಾರ್ಯ ಮುಜುಗರ ತರುತ್ತದೆ. ಇನ್ನು ಮುಂದೆ ಹೀಗೆ ಮಾಡಿದರೆ ನಾನು ಯಾವುದೇ ಕಾರ್ಯಕ್ರಮಕ್ಕೆ ಬರಲ್ಲ ಎಂದು ಶಾಸಕರು ಬೇಸರದಿಂದ ಹೇಳಿದರು.