ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದಂದು ಜಿಲ್ಲೆಯ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆ ನೀಡುವ ಮೂಲಕ ಶೇ.100 ರಷ್ಟು ಗುರಿ ಸಾಧಿಸಬೇಕು ಎಂದು ಜಿಪಂ ಸಿಇಒ ಎನ್.ಹೇಮಂತ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಇಲ್ಲಿನ ಜಿಪಂ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮದ ಪೂರ್ವಸಿದ್ದತೆ ಮತ್ತು ಆರೋಗ್ಯ ಇಲಾಖೆಯ ಇತರೆ ಕಾರ್ಯಕ್ರಮಗಳ ಕುರಿತಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಜಂತು ಹುಳು ನಿವಾರಣೆ ಮಾಡುವುದು ಅತಿ ಅಗತ್ಯ. ಅದರಿಂದ ಮಕ್ಕಳಲ್ಲಿನ ರಕ್ತಹೀನತೆ, ಏಕಾಗ್ರತೆ ಕೊರತೆಯನ್ನು ನೀಗಿಸಿ, ಕಲಿಕಾ ಸಾಮರ್ಥ್ಯ ಹೆಚ್ಚಿಸಬಹುದು ಎಂದು ಹೇಳಿದರು.
ಅಂಗನವಾಡಿ, ಶಾಲಾ-ಕಾಲೇಜಿನಲ್ಲಿ ಹಾಜರಾತಿ ಸುಧಾರಿಸಬಹುದು. ಕೆಲಸದ ಸಾಮರ್ಥ್ಯ ಹಾಗೂ ಜೀವನೋಪಾಯದ ಅವಕಾಶವನ್ನು ವೃದ್ಧಿಸುತ್ತದೆ. ಆದ್ದರಿಂದ ಡಿ.9 ರಂದು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದದಂದು ಅಂಗನವಾಡಿ, ಶಾಲೆಗಳು, ಪಿಯು, ಐಟಿಐ, ಟೆಕ್ನಿಕಲ್ ಕೋರ್ಸ್, ನರ್ಸಿಂಗ್ ಕಾಲೇಜು, ಪ್ರಥಮ ಪದವಿ, ಮೆಡಿಕಲ್ ಕಾಲೇಜು ಮತ್ತು ಆಯುರ್ವೇದಿಕ್ ಕಾಲೇಜುಗಳಲ್ಲಿ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆಯಾದ ಆಲ್ಬೆಂಡಜೋಲ್ನ್ನು ಉಚಿತವಾಗಿ ಮಕ್ಕಳಿಗೆ ನೀಡಲಾಗುವುದು ಎಂದು ತಿಳಿಸಿದರು.ಡಿಡಿಪಿಐ, ಎಲ್ಲ ತಾಲೂಕುಗಳ ಬಿಇಒ, ಆರೋಗ್ಯ ಅಧಿಕಾರಿಗಳು, ಸಿಡಿಪಿಒ, ಅಂಗನವಾಡಿ ಮೇಲ್ವಿಚಾರಕರು ಸಮನ್ವಯದೊಂದಿಗೆ ಎಲ್ಲ ಅಂಗನವಾಡಿ, ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ಮಾತ್ರೆಗಳನ್ನು ನೀಡಬೇಕು. ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಪೋಷಕರಿಗೆ ಮೊದಲೇ ಮಾತ್ರೆ ನೀಡುವ ಬಗ್ಗೆ ಮಕ್ಕಳ ಮೂಲಕ ತಿಳಿಸಬೇಕು. ಆರೋಗ್ಯ ಇಲಾಖೆ ಸೂಚನೆಯಂತೆಯೇ ಮಾತ್ರೆಗಳನ್ನು ಮಕ್ಕಳಿಗೆ ತಮ್ಮ ಸಮ್ಮುಖದಲ್ಲೇ ನೀಡಬೇಕು ಎಂದು ಸೂಚಿಸಿದರು.
ಆರ್ಬಿಎಸ್ಕೆ ತಂಡ ಶಾಲಾ ಭೇಟಿಯನ್ನು ನಿಗದಿಯಂತೆ ನಿಯಮಿತವಾಗಿ ಮಾಡಬೇಕು ಹಾಗೂ ಸಮರ್ಪಕವಾಗಿ ಮಕ್ಕಳ ತಪಾಸಣೆ ನಡೆಸಬೇಕು. ವಡ್ಡಿನಕೊಪ್ಪದ ಶಾಲೆಗೆ ಭೇಟಿ ನೀಡಿದ ಆರ್ಬಿಎಸ್ಕೆ ತಂಡ ಸಮರ್ಪಕವಾಗಿ ತಪಾಸಣೆ ನಡೆಸದೇ ವರದಿ ನೀಡಿರುವುದು ಗಮನಕ್ಕೆ ಬಂದಿದ್ದು ಆ ತಂಡಕ್ಕೆ ನೋಟಿಸ್ ನೀಡುವಂತೆ ಸೂಚಿಸಿದರು.ಆರ್ಸಿಎಚ್ ಅಧಿಕಾರಿ ಡಾ.ಓ.ಮಲ್ಲಪ್ಪ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 4,70,316 ಮಕ್ಕಳು ನೋಂದಣಿಯಾಗಿದ್ದು, ಡಿ.9 ರಂದು ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರ, ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆಶಾ ಕಾರ್ಯಕರ್ತೆಯರು ಮನೆ ಭೇಟಿ ನೀಡುವ ಮೂಲಕ ಮಾತ್ರೆ ನೀಡಲಾಗುವುದು. ಅಂದು ಬಿಟ್ಟು ಹೋದ ಮಕ್ಕಳಿಗೆ ಡಿ.16 ರಂದು ಮಾಪ್-ಅಪ್-ರೌಂಡ್ನಲ್ಲಿ ಮಾತ್ರೆ ನೀಡಿ ಶೇ.100 ಗುರಿ ಸಾಧನೆ ಮಾಡಲಾಗುವುದು. 1 ವರ್ಷದಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ(ಪುಡಿ ಮಾಡಿ) ಮತ್ತು 2 ರಿಂದ 19 ವರ್ಷದೊಳಗಿನ ಮಕ್ಕಳಿಗೆ 1 ಮಾತ್ರೆಯನ್ನು ಜಗಿದು ನುಂಗಲು ನೀಡಲಾಗುವುದು ಎಂದು ತಿಳಿಸಿದರು.
ಡಿಎಲ್ಒ ಡಾ.ಕಿರಣ್ ಮಾತನಾಡಿ, ಅಂಧತ್ವ ಮುಕ್ತ ಶಿವಮೊಗ್ಗ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ 12,950 ಗುರಿ ನೀಡಲಾಗಿದ್ದು, 9,299 ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಶೇ.72 ಪ್ರಗತಿ ಸಾಧಿಸಲಾಗಿದೆ. 5ಎನ್ಜಿಒ ಮೂಲಕ ಕಣ್ಣಿನ ಇತರೆ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಲಾಗುತ್ತಿದ್ದು ಕಳೆದ ಸಾಲಿನಲ್ಲಿ 4,380 ಗುರಿಯಲ್ಲಿ 3,068 ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪ್ರಸಕ್ತ ಸಾಲಿಗೆ 3,400 ಶಸ್ತ್ರಚಿಕಿತ್ಸೆಗಳ ಗುರಿ ನೀಡಲಾಗಿದ್ದು ಈಗಾಗಲೇ 2,290 ಶಸ್ತ್ರಚಿಕಿತ್ಸೆ ಆಗಿದೆ. ಕಣ್ಣಿನ ದೋಷ ಇರುವವರಿಗೆ 8,000 ಕನ್ನಡಕಗಳನ್ನು ನೀಡಲಾಗಿದೆ. ಗ್ಲಾಕೋಮ, ಡಯಾಬಿಟಿಕ್ ರೆಟಿನೊಪಥಿ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತಿದ್ದು ಸದರಿ ಸಮಸ್ಯೆಗಳ ಚಿಕಿತ್ಸೆಗೆ ಎನ್ಜಿಒಗಳು ಸಹಕರಿಸಬೇಕು ಎಂದು ಹೇಳಿದರು.ಸಭೆಯಲ್ಲಿ ಡಿಎಚ್ಒ ಡಾ.ನಟರಾಜ್, ವಿವಿಧ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳು, ಟಿಎಚ್ಒಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೃಷ್ಣಪ್ಪ, ಡಿಡಿಪಿಯು ನಾಗರಾಜ್ ಇತರೆ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.