ರಂಗೂಪುರ ಶಿವಕುಮಾರ್ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಕಳೆದ 20 ಕ್ಕೂ ಹೆಚ್ಚು ದಿನಗಳಿಂದಲೂ ಗುಂಡ್ಲುಪೇಟೆ ಪಟ್ಟಣಕ್ಕೆ ಕಬಿನಿ ಕುಡಿಯುವ ನೀರಿಲ್ಲ, ಜನರು ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ಕಳೆದ 20 ದಿನಗಳಿಂದ ಹಿಂದೆ ಕೆಟ್ಟಿದ್ದ ಡಿಜಿಟಲ್ ಸ್ಟಾರ್ಟರ್ ಈಗ ದಿಢೀರ್ ದುರಸ್ತಿ ಪಡಿಸಿರುವುದು ಹಲವು ಅನುಮಾನಕ್ಕೆಡೆ ಮಾಡಿದೆ ಜೊತೆಗೆ ಡಿಜಿಟಲ್ ಸ್ಟಾರ್ಟರ್ ಒಂದೇ ದಿನಕ್ಕೇ ರಿಪೇರಿ ಆಗಿದ್ದು ಕೂಡ ಪವಾಡವಲ್ಲದೇ ಮತ್ತೇನು? ಕಳೆದ 20 ದಿನಗಳ ಹಿಂದೆ ಸಿಂಧುವಳ್ಳಿ ಜಲ ಸಂಗ್ರಾಹಾಲಯದಲ್ಲಿ ಡಿಜಿಟಲ್ ಸ್ಟಾರ್ಟರ್ ಕೆಟ್ಟಿವೆ. ದುರಸ್ತಿಗೆ ಪುರಸಭೆ ತನ್ನೇಲ್ಲ ಶ್ರಮ ಹಾಕಿತ್ತು ಆದರೂ ಡಿಜಿಟಲ್ ಸ್ಟಾರ್ಟರ್ ದುರಸ್ಥಿ ಆಗಲೇ ಇಲ್ಲ. ಡಿಜಿಟಲ್ ಸ್ಟಾರ್ಟರ್ ದುರಸ್ತಿಗೆ ಎಲ್ಎನ್ಟಿ ಹಾಗೂ ಇನ್ನಿತರ ಟೆಕ್ನಿಷಿಯನ್ ಕರೆಸಿದರೂ ದುರಸ್ಥಿಯಾಗದ ಡಿಜಿಟಲ್ ಸ್ಟಾರ್ಟರ್ ಸೋಮವಾರ ದಿಢೀರ್ ಒಂದೇ ದಿನಕ್ಕೇ ದುರಸ್ಥಿಯಾಗಿರುವುದು ಆಶ್ಚರ್ಯ ತರಿಸಿದೆ.
ಗಮನ ಸೆಳೆದಿದ್ದ ಕನ್ನಡಪ್ರಭ:
ಗುಂಡ್ಲುಪೇಟೆ ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆಗೆ ಪಟ್ಟಣದ ನಾಗರೀಕರು ಪರದಾಡುತ್ತಿದ್ದಾರೆ ಎಂದು ಕನ್ನಡಪ್ರಭ ಮಾ.13 ರಂದು ಗುಂಡುಪೇಟೆ 15 ದಿನಗಳಿಂದ ಕಬಿನಿ ನೀರಿಲ್ಲ ಹಾಗು ಮಾ.18 ರಂದು ಗುಂಡ್ಲುಪೇಟೇಲಿ ನೀರಿಗಾಗಿ ನಿಲ್ಲದ ಹಾಹಾಕಾರ ಎಂದು ವರದಿ ಪ್ರಕಟಿಸಿ ಜಿಲ್ಲಾಡಳಿತ ಗಮನ ಸೆಳೆದಿತ್ತು. ಇದಾದ ಬಳಿಕ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರು ಖಡಕ್ಕಾಗಿ ಪುರಸಭೆ ಮುಖ್ಯಾಧಿಕಾರಿಗೆ ಹೇಳಿ ಕೂಡಲೇ ನೀರು ಪಟ್ಟಣದ ಜನತೆಗೆ ನೀಡಬೇಕು ಎಂದು ತಾಕೀತು ಮಾಡಿದರು.ಪುರಸಭೆ ಮುಖ್ಯಾಧಿಕಾರಿ ಪ್ರಕಾರ ಹಳೆಯ ಬಿಲ್ ಉಳಿಸಿಕೊಂಡಿದ್ದ ಗುತ್ತಿಗೆದಾರರಿಗೆ ಬಿಲ್ ಸೆಟಲ್ಮೆಂಟ್ ಮಾಡಿದರೆ ಡಿಜಿಟಲ್ ಸ್ಟಾರ್ಟರ್ ರಿಪೇರಿ ಆಗುತ್ತದೆ ಎಂದು ಶಾಸಕರ ಗಮನಕ್ಕೆ ತಂದಾಗ ನೀವು ಏನ್ ಮಾಡ್ತೀರೋ ಬಿಡ್ತೀರೋ ಗೊತ್ತಿಲ್ಲ ಜನರಿಗೆ ನೀರು ಕೊಡಿ ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ.ಶಾಸಕರ ತಾಕೀತಿನ ಬಳಿಕ ಎಚ್ಚೆತ್ತ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಗುತ್ತಿಗೆದಾರರ ಮನವೊಲಿಸಿ, ಹಳೆ ಬಿಲ್ ಕೊಡುತ್ತೇನೆ ಎಂದು ಹೇಳಿದ ನಂತರ ಡಿಜಿಟಲ್ ಸಾರ್ಟರ್ ದುರಸ್ತಿ ಆಗಿದೆ.ಡಿಜಿಟಲ್ ಸ್ಟಾರ್ಟರ್ ಕಳೆದ ಹಲವು ವರ್ಷಗಳಿಂದ ದುರಸ್ಥಿ ಪಡಿಸುತ್ತಿದ್ದ ಗುತ್ತಿಗೆದಾರ ಕನ್ನಡಪ್ರಭದೊಂದಿಗೆ ಮಾತನಾಡಿ, ಸೋಮವಾರ ಸ್ಟಾರ್ಟರ್ ರಿಪೇರಿ ಆಗುತ್ತದೆ ನೀರು ಕೂಡ ಸೋಮವಾರ ರಾತ್ರಿಯೇ ಬರುತ್ತದೆ ಎಂದು ಹೇಳಿದ್ದಾರೆ.