ಕಾರ್ಮಿಕರ ಸಾವಿಗೆ ಸ್ಪಂದಿಸದ ಜಿಲ್ಲಾಡಳಿತ

KannadaprabhaNewsNetwork | Published : Mar 11, 2025 12:46 AM

ಸಾರಾಂಶ

ಬೇಲೂರು ಬಸ್ ನಿಲ್ದಾಣ ಮುಂಭಾಗ ಖಾಸಗಿ ವಾಣಿಜ್ಯ ಕಟ್ಟಡದ ಸಜ್ಜಾ ಕುಸಿದು ಇಬ್ಬರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ದುರ್ಘಟನೆ ಬಗ್ಗೆ ಸೋಮವಾರ ಅಧಿವೇಶನದ ಶೂನ್ಯ ವೇಳೆಯಲ್ಲಿ ಬೇಲೂರು ಶಾಸಕ ಎಚ್ ಕೆ ಸುರೇಶ್ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರಲ್ಲದೆ ಆ ಸಮಯದಲ್ಲಿ ಸೂಕ್ತವಾಗಿ ಸ್ಪಂದಿಸದ ಜಿಲ್ಲಾಡಳಿತದ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮೌನವಾಗಿದ್ದಾರೆ. ಜಿಲ್ಲಾ ಸಚಿವರಂತೂ ಹೊರಗಡೆ ಇರುತ್ತಾರೆ, ಆದರೆ ಜಿಲ್ಲೆಯಲ್ಲಿ ಇದ್ದ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಯಾಕೆ ಭೇಟಿ ನೀಡಲಿಲ್ಲ, ರಾಜ್ಯ ಸರ್ಕಾರದವರು ಹಾಸನ ಜಿಲ್ಲೆಯನ್ನು ಹೊರಗಿಟ್ಟು ರಾಜ್ಯಭಾರ ಮಾಡುತ್ತಿದ್ದೀರಾ ಎಂದು ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಬಸ್ ನಿಲ್ದಾಣ ಮುಂಭಾಗ ಖಾಸಗಿ ವಾಣಿಜ್ಯ ಕಟ್ಟಡದ ಸಜ್ಜಾ ಕುಸಿದು ಇಬ್ಬರು ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡ ದುರ್ಘಟನೆ ಬಗ್ಗೆ ಸೋಮವಾರ ಅಧಿವೇಶನದ ಶೂನ್ಯ ವೇಳೆಯಲ್ಲಿ ಬೇಲೂರು ಶಾಸಕ ಎಚ್ ಕೆ ಸುರೇಶ್ ವಿಷಯ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದರಲ್ಲದೆ ಆ ಸಮಯದಲ್ಲಿ ಸೂಕ್ತವಾಗಿ ಸ್ಪಂದಿಸದ ಜಿಲ್ಲಾಡಳಿತದ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸೋಮವಾರ ವಿಧಾನಸಭಾ ಅಧಿವೇಶನದಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ಎಚ್ ಕೆ ಸುರೇಶ್ ಶೂನ್ಯ ವೇಳೆಯಲ್ಲಿ ಭಾನುವಾರ ನಡೆದ ಕಟ್ಟಡ ದುರಂತದ ಬಗ್ಗೆ ಮಾತನಾಡಿದರು. ಬೇಲೂರು ಪಟ್ಟಣದ ಬಸ್ ನಿಲ್ದಾಣ ಮುಂಭಾಗ ಖಾಸಗಿ ವಾಣಿಜ್ಯ ಕಟ್ಟಡ ಮೇಲ್ಚಾವಣಿ ಕುಸಿದು ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ದುರ್ಘಟನೆ ನಡೆದ ಸಂದರ್ಭದಲ್ಲಿ ಜಿಲ್ಲಾ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಜಿಲ್ಲಾಮಟ್ಟದ ಅಧಿಕಾರಿಗಳು ಸೌಜನ್ಯಕ್ಕೂ ಭೇಟಿ ನೀಡಿಲ್ಲ. ಜಿಲ್ಲಾಧಿಕಾರಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮೌನವಾಗಿದ್ದಾರೆ. ಜಿಲ್ಲಾ ಸಚಿವರಂತೂ ಹೊರಗಡೆ ಇರುತ್ತಾರೆ, ಆದರೆ ಜಿಲ್ಲೆಯಲ್ಲಿ ಇದ್ದ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಯಾಕೆ ಭೇಟಿ ನೀಡಲಿಲ್ಲ, ರಾಜ್ಯ ಸರ್ಕಾರದವರು ಹಾಸನ ಜಿಲ್ಲೆಯನ್ನು ಹೊರಗಿಟ್ಟು ರಾಜ್ಯಭಾರ ಮಾಡುತ್ತಿದ್ದೀರಾ ಎಂದು ಕಿಡಿಕಾರಿದರು.

ಮಾರುಕಟ್ಟೆ ಅಂದಮೇಲೆ ಎಲ್ಲಾ ಜನಾಂಗದವರು ಬರುತ್ತಾರೆ. ಮೃತರಲ್ಲಿ ಒಬ್ಬರು ಮುಸ್ಲಿಮರಾದರೆ ಮತ್ತೊಬ್ಬರು ಉಪ್ಪಾರ ಜನಾಂಗದವರು. ತೀವ್ರವಾಗಿ ಗಾಯಗೊಂಡಿರುವ ಜ್ಯೋತಿ ಎಂಬ ಮಹಿಳೆ ಈಡಿಗರಾದರೆ, ನೀಲಮ್ಮ ಎಂಬುವರು ಪರಿಶಿಷ್ಟ ಜಾತಿಗೆ ಬರುತ್ತಾರೆ. ಸರ್ಕಾರ ಜಾತಿ ಲೆಕ್ಕ ನೋಡದೆ ಪರಿಹಾರಕ್ಕೆ ಮುಂದಾಗಬೇಕು. ಕಟ್ಟಡ ಮೇಲ್ಛಾವಣಿ ಕುಸಿತದಲ್ಲಿ ಗಾಯಗೊಂಡಿರುವವರಿಗೆ ಉತ್ತಮ ಚಿಕಿತ್ಸೆ ನೀಡಿ ಕನಿಷ್ಠ 25 ಲಕ್ಷ ನೆರವು ನೀಡಬೇಕು. ಮೃತರ ಕುಟುಂಬಕ್ಕೆ ಐವತ್ತು ಲಕ್ಷ ಆರ್ಥಿಕ ನೆರವು ಒದಗಿಸಬೇಕೆಂದು ಕೋರಿದರು.

ಕಾಡಾನೆ ಹಾವಳಿಂದ ಬೆಳೆ ನಾಶವಾಗಿ 9 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡರೂ ಇದುವರೆಗೂ ಜಿಲ್ಲಾಡಳಿತವಾಗಲಿ ಸರ್ಕಾರವಾಗಲಿ ಎಚ್ಚೆತ್ತುಕೊಂಡಿಲ್ಲ. ಕೂಡಲೇ ಈ ಬಗ್ಗೆ ಚರ್ಚೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ವಾಣಿಜ್ಯ ಮಳಿಗೆಗಳಿಗೆ ಅನುಮತಿ ಪತ್ರವನ್ನು ನೀಡುವಾಗ ಕಟ್ಟಡದ ದುರಸ್ತಿ ಬಗ್ಗೆ ಪರಿಶೀಲನೆ ನಡೆಸುವುದು ನಗರಸಭೆ, ಪುರಸಭೆಯ ಕರ್ತವ್ಯವಾಗಿದೆ. ಭಾನುವಾರ ಬೇಲೂರಿನಲ್ಲಿ ನಡೆದ ಕಟ್ಟಡ ಕುಸಿತ ಘಟನೆಯ ನಂತರ ಡಿಸಿಯಾಗಲಿ, ಎಸಿ ಅವರಾಗಲಿ ಬಂದಿಲ್ಲ, ಇಬ್ಬರು ಅಮಾಯಕರು ಸತ್ತರೂ ಹೋಗಿಲ್ಲ ಅಂದ್ರೆ ಏನು ಅರ್ಥ, ಕೂಡಲೇ ಸರ್ಕಾರ ಇದರ ಬಗ್ಗೆ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಎಂದರು.

Share this article