ಅರಿವು ಕಾರ್ಯಕ್ರಮ । ರಸ್ತೆ, ಚರಂಡಿಗಾಗಿ ₹40 ಲಕ್ಷ ಅನುದಾನ । ನಿವೇಶನ ದೊರೆತರೆ ಪ್ರತ್ಯೇಕ ಪೌರ ಕಾರ್ಮಿಕರ ಕಾಲೋನಿ
ಸ್ವತಃ ಚಾಮರಾಜನಗರ ಜಿಲ್ಲಾಧಿಕಾರಿಗಳೇ ಪೌರ ಕಾರ್ಮಿಕರ ಬಡಾವಣೆಯ ಸಮಸ್ಯೆ ಪರಿಹರಿಸಲು ಉತ್ಸುಕತೆ ತೋರಿದ್ದು, ಡಿಸೆಂಬರ್ ತಿಂಗಳಲ್ಲಿ ಪೌರ ಕಾರ್ಮಿಕರ ಸಮ್ಮುಖದಲ್ಲಿ ಕರೆಯವ ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಭಾಗವಹಿಸುವರು ಎಂದು ಪೌರಾಯುಕ್ತ ರಮೇಶ್ ಹೇಳಿದರು.
ನಗರಸಭೆ ಕಾರ್ಯಾಲಯ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಮ್ಯಾನ್ಯೂಯಲ್ ಸ್ಕ್ಯಾವಂಜರ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.ಪೌರ ಕಾರ್ಮಿಕರ ಹಿತ ಕಾಯುವಲ್ಲಿ ಹಲವು ಸಮಸ್ಯೆ ನಿವಾರಿಸುವಲ್ಲಿ ಸದಸ್ಯ ರಾಘವೇಂದ್ರ ಅವರು ಮುತುವರ್ಜಿ ತೋರುತ್ತಿದ್ದಾರೆ, ಅದೇ ರೀತಿಯಲ್ಲಿ ಜಿಲ್ಲಾಧಿಕಾರಿಗಳು ಸಹ ನಿಮ್ಮ ಬಡಾವಣೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಡಿಸೆಂಬರ್ನಲ್ಲಿ ಜಿಲ್ಲಾಧಿಕಾರಿಗಳ ದಿನಾಂಕ ಪಡೆದು ಸಭೆ ಕರೆದು ನಿಮ್ಮ ಕುಂದುಕೊರತೆ ನಿವಾರಣೆ ನಿಟ್ಟಿನಲ್ಲಿ ಸಭೆ ನಡೆಸಲಾಗುವುದು, ರಸ್ತೆ, ಚರಂಡಿಗೆ 40 ಲಕ್ಷ ರು. ಬಿಡುಗಡೆಯಾಗಿದೆ. ಈ ಮೊದಲು ಇದ್ದ ಟೆಂಡರ್ ಸಮಸ್ಯೆ ಈಗ ಅದು ಬಗೆಹರಿದಿದೆ ಎಂದು ಹೇಳಿದರು.
ನಗರಸಭೆಯ ಹಿರಿಯ ಸದಸ್ಯ ರಾಘವೇಂದ್ರ ಮಾತನಾಡಿ, ಮಳೆ ಬಂದರೆ ಇಲ್ಲಿನ ವಾಸಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ, ಇವರ ವಾಸಿಸುವ ಸ್ಥಳಕ್ಕೆ ದಾಖಲೆ ನಿರ್ಮಿಸಬೇಕು, ಇಲ್ಲಿನ ವಾಸಿಗಳ ಅನುಕೂಲಕ್ಕಾಗಿ ನಗರಸಭೆಯ ಹಲವು ಸದಸ್ಯರು, ಅಧ್ಯಕ್ಷರು ಸ್ಪಂದಿಸುತ್ತಿದ್ದಾರೆ, ಕಾಂಪೌಂಡ್ ನಿರ್ಮಾಣ, ಮೂಲ ಸೌಲಭ್ಯ ಸೇರಿದಂತೆ ಇತರೆ ಸಮಸ್ಯೆಗೂ ಸಹ ನಗರಸಭಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರು ಸಹಕರಿಸುತ್ತಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಪ್ರಸನ್ನ, ಆರೋಗ್ಯಾಧಿಕಾರಿ ಚೇತನ್, ಭೂಮಿಕಾ, ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘ ಅಧ್ಯಕ್ಷ ಡಿ.ಆರ್.ರಾಜು, ಸಫಾಯಿ ಕರ್ಮಚಾರಿ ಜಿಲ್ಲಾ ಸಮಿತಿ ಸದಸ್ಯೆ ತಂಗಮ್ಮ, ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘ ಉಪಾಧ್ಯಕ್ಷ ವಿಜಯ ಕುಮಾರ್, ಸಫಾಯಿ ಕರ್ಮಚಾರಿ ಜಿಲ್ಲಾ ಜಾಗೃತಿ ಸದಸ್ಯರಾದ ಪಳನಿಸ್ವಾಮಿ, ಆರುಗ್ಮಂ, ಇತರರು ಇದ್ದರು.