ಕನ್ನಡಪ್ರಭ ವಾರ್ತೆ ಹನೂರುವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದ ರೈತ ಸಂಘ ಹಾಗೂ ಮಹಿಳಾ ಸಂಘದವರ ಒತ್ತಾಯಕ್ಕೆ ಮಣಿದು ಸಂದನಪಾಳ್ಯ ಗ್ರಾಮಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಶಾಸಕ ಎಂ.ಆರ್.ಮಂಜುನಾಥ್ ಭೇಟಿ ನೀಡಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.
ತಾಲೂಕಿನ ಒಡಕೆ ಹಳ್ಳದಿಂದ ನಾಲಾ ರೋಡ್ ಗ್ರಾಮದವರೆಗೆ ರಸ್ತೆ ಅಭಿವೃದ್ಧಿಪಡಿಸುವಂತೆ ಜೊತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಲಾ ರೋಡ್ ಗ್ರಾಮದಲ್ಲಿ ರೈತ ಸಂಘಟನೆ ಹಾಗೂ ಮಹಿಳಾ ಸ್ವಸಹಾಯ ಸಂಘದವರು ಪ್ರತಿಭಟನೆ ನಡೆಸಿ ಸ್ಥಳಕ್ಕೆ ಜಿಲ್ಲಾಧಿಕಾರಿ, ಶಾಸಕರು ಬರಬೇಕು ಎಂದು ಒತ್ತಾಯಿಸಿ ಪ್ರತಿಭಟನಾ ಧರಣಿ ನಡೆಸಿದ್ದರು. ರೈತ ಸಂಘಟನೆ ಹಾಗೂ ಮಹಿಳಾ ಸ್ವಸಹಾಯ ಸಂಘದವರಿಂದ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಶಿಲ್ಪಾನಾಗ್, ರಸ್ತೆ ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಈ ಭಾಗದ ಕಿರಾಪತಿ ಹಾಗೂ ಹೂಗ್ಯಂ ಸರ್ವೇ ನಂಬರ್ಗಳಲ್ಲಿ ರೈತರ ನೂರಾರು ಎಕರೆ ಜಂಟಿಯಾಗಿ ಬರುತ್ತಿದ್ದು, ರೈತರಿಗೆ ಸರ್ಕಾರದಿಂದ ಸಿಗುವ ಸೌಲತ್ತು ಸಿಗದೇ ಪೋಡಿ ಮುಕ್ತಗೊಳಿಸದೆ ಇರುವುದರಿಂದ ಮುಂದಿನ ಮೂರು ತಿಂಗಳಲ್ಲಿ ಒನ್ ಟು ಫೈವ್ ಕಾರ್ಯಕ್ರಮದ ಮೂಲಕ ರೈತರಿಗೆ ಪ್ರತ್ಯೇಕ ಪಹಣಿಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು, ಜೊತೆಗೆ ಎಸ್ಬಿಐ ಬ್ಯಾಂಕ್ ಸ್ಧಾಪಿಸುವ ಸಂಬಂಧಪಟ್ಟವರ ಜೊತೆ ಮಾತನಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ರಾಮಪುರ ಸರ್ಕಾರಿ ಆಸ್ಪತ್ರೆಗೆ ಹೆಚ್ಚುವರಿ ವೈದ್ಯಾಧಿಕಾರಿ, ಸಿಬ್ಬಂದಿ ನೇಮಕ ಮಾಡಲಾಗುವುದು. ಜೊತೆಗೆ ಮಾರ್ಟಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಭಾಗದಲ್ಲಿ ಕೃಷಿ ಇಲಾಖೆ ಕಚೇರಿ ತೆರೆಯಲು ರೈತರು ಒತ್ತಾಯಿಸಿದ್ದಾರೆ. ಹೀಗಾಗಿ ಈ ಭಾಗದಲ್ಲಿ ಕಚೇರಿ ತೆರೆಯಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಚುನಾವಣೆ ಮುಗಿದ ಬೆನ್ನಲ್ಲೇ ನಾನು ಮೊದಲ ಬಾರಿ ಶಾಸಕನಾಗಿ ಹನೂರು ಕ್ಷೇತ್ರದ ಬಹುತೇಕ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ₹240 ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಡಕೆ ಹಳ್ಳದಿಂದ ಗಡಿಗ್ರಾಮ ಹೊಗ್ಯಂ ಗ್ರಾಮದವರೆಗೆ ಹಾಗೂ ಹನೂರು ಪಟ್ಟಣದಿಂದ ಗರಿಕೆ ಖಂಡಿ ಗಡಿಯವರಿಗೆ ರಸ್ತೆ ಅಭಿವೃದ್ಧಿಪಡಿಸಲು ₹35 ಕೋಟಿ ವೆಚ್ಚದಲ್ಲಿ ಈಗಾಗಲೇ ಕಾಮಗಾರಿ ಪ್ರಾರಂಭಿಸಲಾಗಿದೆ. ಹನೂರು ಕ್ಷೇತ್ರ ವಿಸ್ತಾರವಾಗಿದ್ದು ಆರುವರೆ ಲಕ್ಷ ಎಕರೆ ಜಮೀನು ಇರುವುದರಿಂದ ಇಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರಕ್ಕೆ ಕಳೆದ ಒಂದುವರೆ ವರ್ಷಗಳಿಂದಲೂ ನಿರಂತರವಾಗಿ ಸಂಬಂಧಪಟ್ಟ ಸಿಎಂ ಸೇರಿದಂತೆ ವಿವಿಧ ಇಲಾಖೆ ಸಚಿವರಿಗೆ ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹನೂರು ಕ್ಷೇತ್ರದಲ್ಲಿ ಹೆಚ್ಚಾಗಿ ರಸ್ತೆಗಳೆಲ್ಲ ಹಾಳಾಗಿರುವುದರಿಂದ ಚಿಕ್ಕಲೂರು ಗ್ರಾಮದಿಂದ ಬಂಡಳ್ಳಿ ಗ್ರಾಮದವರೆಗೆ, ಹನೂರು ಪಟ್ಟಣದಿಂದ ಲೋಕನಹಳ್ಳಿ ರಸ್ತೆ ಗಡಿ ಗ್ರಾಮದವರೆಗೆ ಅಭಿವೃದ್ಧಿಪಡಿಸಲು ಪೂರ್ವ ಯೋಜನೆ ಪ್ರಸ್ತಾವನೆ ಸಹ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹೀಗಾಗಿ ತಾಲೂಕಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಗುರುಪ್ರಸಾದ್, ಕರ್ನಾಟಕ ರಾಜ್ಯ ರೈತ ಸಂಘ ಹನೂರು ಘಟಕದ ಅಧ್ಯಕ್ಷ ಅಮ್ಜದ್ ಖಾನ್, ರೈತ ಮುಖಂಡರು, ಗುಡ್ಸಫರ್ಡ್ ಸಂಸ್ಥೆಯ ಕ್ರಿಸ್ಲಪರ್ ಹಾಗೂ ಮಹಿಳಾ ಸಂಘಟನೆಗಳು ವಿವಿಧ ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.