ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲಾ ಕಾಂಗ್ರೆಸ್ ಸಮಿತಿಯು ಭಾನುವಾರ ಆಯೋಜಿಸಿದ್ದ ಭಾರತದ ಇವಿಎಂ ಮತದಾನ ಮತ್ತು ರಾಜಕೀಯ ಪಕ್ಷಗಳು ಒಂದು ಅವಲೋಕನ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ವಿದ್ಯುನ್ಮಾನ ಮತ ಯಂತ್ರವನ್ನು ಕಾಣದ ಕೈಗಳು ತಿರುಚಬಹುದು ಎಂಬ ಊಹಾಪೋಹವಿದೆ. ಇದನ್ನು ಕೇಳಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಲಿಲ್ಲವೇ? ಈ ಬಗ್ಗೆ ಯಾಕೇ ಚಕಾರ ಎತ್ತುವುದಿಲ್ಲ ಎಂಬ ಪ್ರಶ್ನೆ ಬರುತ್ತದೆ. ವಿದ್ಯುನ್ಮಾನ ಮತ ಯಂತ್ರದ ಕುರಿತು ಸುಳ್ಳು ಸುದ್ದಿ ಹರಡಿದರೆ ಚುನಾವಣಾ ಆಯೋಗ ಮಾನನಷ್ಟ ಮೊಕದ್ದಮೆ ಹೂಡುತ್ತದೆ. ಈ ವಿಷಯ ಸಂಕೀರ್ಣವಾದದ್ದು ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿವೃದ್ಧಿ ಪರ ಬಜೆಟ್ ಮಂಡಿಸಿದ್ದಾರೆ. ಆರ್ಥಿಕ ಸಂಪನ್ಮೂಲದ ಕೊರತೆ ಇರುವುದರಿಂದ 1 ಲಕ್ಷ ಕೋಟಿ ರು. ಸಾಲ ಮಾಡುವುದಾಗಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಕೇಂದ್ರ ಸರ್ಕಾರ ಉದ್ಯಮಿಗಳ 10 ಸಾವಿರ ಕೋಟಿ ಸಾಲ ಮನ್ನಾ ಮಾಡಬಹುದಾದರೆ ರಾಜ್ಯದ ಬಡ ಜನರ ಅನುಕೂಲಕ್ಕೆ ಒಂದು ಲಕ್ಷ ಕೋಟಿ ಸಾಲ ಮಾಡಿದರೆ ತಪ್ಪೇನು ಎಂದು ಅವರು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಸ್ತ್ರೀಯರಿಗೆ ಹೆಚ್ಚಿನ ಲಾಭ ದೊರೆಯುತ್ತಿದೆ. ರಾಜ್ಯದ 1.20 ಲಕ್ಷ ಸ್ತ್ರೀಯರು ವಾರ್ಷಿಕ 50 ಸಾವಿರ ಪಡೆಯುತ್ತಾರೆ. ಇದು ಕ್ರಾಂತಿಕಾರಕ ಅಭಿವೃದ್ಧಿ ಪರ ಚಿಂತನೆ ಎಂದರು.
ಪಕ್ಷದ ಪ್ರತಿ ಕಾರ್ಯಕರ್ತರು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆಯಬೇಕು. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಪರಾಮರ್ಶೆ ಮಾಡಲು ಸಂಶೋಧನಾ ವಿಭಾಗದಿಂದ ಗ್ಯಾರಂಟಿ ಸಲಹಾ ಸಮಿತಿ, ಚುನಾವಣಾ ಸಲಹಾ ಸಮಿತಿ ಸೇರಿ 6 ಸಮಿತಿಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಮಾತನಾಡಿ, ಎಐಸಿಸಿ ಸೂಚನೆ ಮೇರೆಗೆ ರಚಿಸಿರುವ ಸಂಶೋಧನಾ ವಿಭಾಗದಲ್ಲಿ 150 ನಿವೃತ್ತ ಅಧಿಕಾರಿಗಳು ಇದ್ದಾರೆ. ಇವರು ಸಮಾಜವಾದಿ ಮನೋಭಾವದವರಾಗಿದ್ದು, ತೆರೆಯ ಹಿಂದೆ ಪಕ್ಷಕ್ಕೆ ಸಲಹೆ ನೀಡುವುದಾಗಿ ತಿಳಿಸಿದರು.
ಕೆಪಿಸಿಸಿ ಮಾಧ್ಯಮ ವಕ್ತಾರ ಅನಿಲ್ ಕುಮಾರ ತಡಕಲ್ ವಿಷಯ ಮಂಡಿಸಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ ಇದ್ದರು.