ಲೈಂಗಿಕ ದೌರ್ಜನ್ಯವನ್ನು ಸಹಿಸಿಕೊಳ್ಳಬೇಡಿ: ಆರ್.ಲತಾ

KannadaprabhaNewsNetwork | Published : Oct 29, 2024 1:01 AM

ಸಾರಾಂಶ

ಮರ್ಯಾದೆ ಅಂಜಿ ಕೆಲವು ಮಹಿಳೆಯರು ಲೈಂಗಿಕ ದೌರ್ಜನ್ಯ, ಕಿರುಕುಳಗಳನ್ನು ಸಹಿಸಿಕೊಂಡಿರುತ್ತಾರೆ. ಮತ್ತೆ ಹಲವರಿಗೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗಳ ಬಗ್ಗೆ ಅರಿವಿನ ಕೊರತೆ ಇರುತ್ತದೆ. ಮಹಿಳೆಯರು ಕಾಯಿದೆಯ ಮಹತ್ವವನ್ನು ಅರಿತು ಸದುಪಯೋಗಪಡಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕಚೇರಿಗಳಲ್ಲಿ ಕೆಲಸ ಮಾಡುವ ಸಂದರ್ಭಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಾಗ ಅವುಗಳನ್ನು ಸಹಿಸಿಕೊಳ್ಳಬಾರದು. ಅದರ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಂಡಾಗ ತಡೆಯಲು ಸಾಧ್ಯ ಎಂದು ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಆರ್.ಲತಾ ತಿಳಿಸಿದರು.

ನಗರದ ಪಿಇಎಸ್ ತಾಂತ್ರಿಕ ಕಾಲೇಜಿನ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಲೈಂಗಿಕ ದೌರ್ಜನ್ಯ, ಕಿರುಕುಳದಿಂದ ಮಹಿಳೆಯರ ರಕ್ಷಣೆ ಕುರಿತು ಸರ್ಕಾರದ ಅಧಿಕಾರಿಗಳು, ಸಿಬ್ಬಂದಿ, ಆಂತರಿಕ ದೂರು ನಿವಾರಣಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಲೈಂಗಿಕ ದೌರ್ಜನ್ಯಕ್ಕೆ ಒಳಗಾದಾಗ ದೂರು ನೀಡುವುದಕ್ಕೆ ಹಿಂಜರಿಯಬಾರದು. ಕಾನೂನಿನಡಿ ರಕ್ಷಣೆ ಪಡೆಯುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಅರಿತುಕೊಂಡು ದೌರ್ಜನ್ಯದ ವಿರುದ್ಧ ಸೆಟೆದು ನಿಲ್ಲಬೇಕು ಎಂದು ಸಲಹೆ ನೀಡಿದರು.

ಮರ್ಯಾದೆ ಅಂಜಿ ಕೆಲವು ಮಹಿಳೆಯರು ಲೈಂಗಿಕ ದೌರ್ಜನ್ಯ, ಕಿರುಕುಳಗಳನ್ನು ಸಹಿಸಿಕೊಂಡಿರುತ್ತಾರೆ. ಮತ್ತೆ ಹಲವರಿಗೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಗಳ ಬಗ್ಗೆ ಅರಿವಿನ ಕೊರತೆ ಇರುತ್ತದೆ. ಮಹಿಳೆಯರು ಕಾಯಿದೆಯ ಮಹತ್ವವನ್ನು ಅರಿತು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ಎಲ್ಲಾ ರೀತಿಯ ಮೂಲ ಸೌಲಭ್ಯ ಕೊಡುವುದರ ಜೊತೆಗೆ ಪ್ರತಿಯೊಬ್ಬ ಮಹಿಳೆಯನ್ನು ತಾಯಿ, ಸಹೋದರಿಯಂತೆ ಗೌರವಿಸಬೇಕು ಎಂದು ನುಡಿದರು.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಾಯ್ದೆ ರೂಪಿಸಲಾಗಿದೆ. ಎಲ್ಲವನ್ನೂ ಕಾಯಿದೆಯಿಂದಲೇ ಸರಿಪಡಿಸಲಾಗುವುದಿಲ್ಲ. ಕಾಯ್ದೆಗಿಂತ ಸಂಸ್ಕಾರವೂ ಮುಖ್ಯ. ಪ್ರತಿಯೊಬ್ಬ ಹೆಣ್ಣನ್ನು ಗೌರವದಿಂದ ನೋಡುವ ಮನೋಭಾವ ಬೆಳೆಸಿಕೊಂಡರೆ ಕಾಯ್ದೆಗಳ ಅಗತ್ಯವೇ ಇರುವುದಿಲ್ಲ ಎಂದರು.

ಒಬ್ಬ ಮಹಿಳೆಯು ಮಗಳಾಗಿ, ಅಕ್ಕಳಾಗಿ, ಹೆಂಡತಿಯಾಗಿ, ತಾಯಿಯಾಗಿ ಎಲ್ಲಾ ಪಾತ್ರಗಳನ್ನು ನಿರ್ವಹಿಸುತ್ತಾಳೆ. ಒಂದು ದೇಶದ ಅಭಿವೃದ್ಧಿಯನ್ನು ಅಳೆಯಬೇಕಾದರೆ ಆ ದೇಶದಲ್ಲಿ ಮಹಿಳೆಯರನ್ನು ಯಾವ ರೀತಿ ಕಾಣುತ್ತಿದ್ದಾರೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಮಹಿಳೆಯರಿಗೆ ಗೌರವ ನೀಡುವ ಮೂಲಕ ದೇಶದ ಪ್ರಗತಿಯನ್ನು ಸಾಧಿಸಬೇಕು ಎಂದರು.

ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವು ಕೇವಲ ಸರ್ಕಾರಿ ಕಚೇರಿಗಳಲ್ಲದೆ ಖಾಸಗಿಯಾಗಿ ಕೆಲಸ ಮಾಡುವ ಸ್ಥಳದಲ್ಲಿಯೂ ಕಂಡುಬರುತ್ತವೆ. ಹೆಣ್ಣಾದವಳು ಕೆಲವು ಕೆಲಸಗಳಿಗೆ ಮಾತ್ರ ಸೀಮಿತ. ಹೆಣ್ಣು ಹೊರ ಹೋಗುವಂತಿಲ್ಲ, ಆ ಕೆಲಸ ಮಾಡುವಂತಿಲ್ಲ, ಗಂಡು ಎಲ್ಲಿ ಬೇಕಾದರೂ ಹೋಗಬಹುದು ಬರಬಹುದು ಎಂದು ನಮ್ಮ ಮನೆಗಳಲ್ಲಿರುವ ಈ ಭಾವನೆಯಿಂದಲೇ ಕೆಲವು ದೌರ್ಜನ್ಯಗಳು ಶುರುವಾಗುತ್ತವೆ. ಈ ಹಿಂದೆ ಮಹಿಳೆಯರ ರಕ್ಷಣೆಗಾಗಿ ಯಾವುದೇ ಕಾಯ್ದೆಗಳು ರಚನೆಯಾಗಿರಲಿಲ್ಲ. ಆನಂತರದಲ್ಲಿ ಕಾಯ್ದೆಗಳು ರೂಪಿತಗೊಂಡಿವೆ. ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಕಾರ್ಯಾಗಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಉಪಕಾರ್ಯದರ್ಶಿ ಎಂ.ಬಾಬು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ಸಂಪನ್ಮೂಲ ವ್ಯಕ್ತಿಗಳಾಗಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ರಿಷಿ ಮದನ್, ಡಾ.ಕ್ರಿಷಿನಾ ಕಾಂತಾರಾಜು, ಡಾ ಸ್ವಪ್ನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article