ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕುಡಿಯಲು ಸಮರ್ಪಕ ನೀರು ಹರಿಸುತ್ತಿಲ್ಲ ಎಂದು ಆರೋಪಿಸಿ ದೊಡ್ಡಪಾಳ್ಯ ಗ್ರಾಮದ ಮಾರಿಗುಡಿ ಬೀದಿ ನಿವಾಸಿಗಳು ಖಾಲಿ ಕೊಡದೊಂದಿಗೆ ಮುಂಡುಗದೊರೆ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಶನಿವಾರ ಪ್ರತಿಭಟನೆ ನಡೆಸಿದರು.ಗ್ರಾಮದಿಂದ ಗ್ರಾಪಂ ಕಚೇರಿಗೆ ತೆರಳಿದ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಡಿ.ಕೆ.ನಾಗರಾಜು ಅವರನ್ನು ತರಾಟೆ ತೆಗೆದುಕೊಂಡು ಸಮರ್ಪಕ ಕುಡಿಯಲು ನೀರು ಹರಿಸುವಂತೆ ಆಗ್ರಹಿಸಿದರು.
ಗ್ರಾಮದ ಮಾರಿಗುಡಿ ಬೀದಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳಿದ್ದು, ಹಲವು ದಿನಗಳಿಂದ ನಮಗೆ ಕುಡಿಯಲು ನೀರು ಹರಿಸದೆ ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂಬಂಧ ಗ್ರಾಪಂ ಅಧಿಕಾರಿಗಳನ್ನು ಪ್ರಶ್ನಿಸಲು ಕಚೇರಿಗೆ ಬಂದರೆ ಗುಮಾಸ್ತ ಹೊರತುಪಡಿಸಿ ಬೇರಾರು ಸಿಗುತ್ತಿಲ್ಲ. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಹಾಗೂ ಬಿಲ್ಕಲೆಕ್ಟರ್ ನಿತ್ಯ ಹಾಜರಾತಿಗೆ ಸಹಿ ಹಾಕಿ ಹೊರ ಹೋಗುತ್ತಿದ್ದಾರೆ. ಇವರ್ಯಾರು ನಮ್ಮ ಕೈಗೆ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಪಂಚಾಯ್ತಿ ವತಿಯಿಂದ ನೀರು ಹರಿಸದ ಕಾರಣ ಕುಡಿಯಲು, ಸ್ನಾನ ಮಾಡಲು, ಬಟ್ಟೆ ತೊಳೆಯಲು ದನ-ಕರುಗಳಿಗೆ ನೀರಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಪರ್ಯಾಯ ವ್ಯವಸ್ಥೆಯಾಗಿ ಕೂಡಲೇ ಟ್ಯಾಂಕರ್ ಮೂಲಕವಾದರೂ ಕುಡಿಯಲು ನೀರು ಹರಿಸಬೇಕು ಎಂದು ಒತ್ತಾಯಿಸಿದರು.ಕಚೇರಿಯಲ್ಲಿ ಯಾವೊಬ್ಬ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ನಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಬೇಕು ಎಂದು ತಮ್ಮ ಅಸಹಾಯಕತೆ ತೋಡಿಕೊಂಡ ಗ್ರಾಮಸ್ಥರು, 2-3 ದಿನಗಳಲ್ಲಿ ಶಾಸ್ವತ ಪರಿಹಾರ ನೀಡದಿದ್ದರೆ ತಾಪಂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಜಲಜೀವನ್ ಕಾಮಗಾರಿಯಿಂದಾಗಿ ಗ್ರಾಮದ ಮಾರಿಗುಡಿ ಬೀದಿ ನಿವಾಸಿಗಳಿಗೆ ಕುಡಿಯಲು ನೀರು ಹರಿಸಲು ಸಮಸ್ಯೆ ಎದುರಾಗಿದೆ. ಸದ ಟ್ಯಾಂಕರ್ ಮೂಲಕ ನೀರು ಕೊಡಲಾಗುವುದು. ಜೊತೆಗೆ ಕುಡಿಯುವ ನೀರು ಹರಿಸುವ ಸಂಬಂಧ ಶಾಸ್ವತ ಪರಿಹಾರ ನೀಡಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಡಿ.ಕೆ. ನಾಗರಾಜು ಮಾಹಿತಿ ನೀಡಿದರು.ಪ್ರತಿಭಟನೆಯಲ್ಲಿ ಚಾಮಕ್ಕ, ಸುಧಾ, ಸುಮ, ಶಶಿಕಲಾ, ಶಾಂತಮ್ಮ, ಹರಿಣಿ, ಕುಮಾರಸ್ವಾಮಿ, ಮಲ್ಲೇಶ್, ರಾಮೇಗೌಡ, ಪಾಂಡು, ಅಭಿಷೇಕ್, ಸಚ್ಚಿನ್, ನವೀನ್, ಪ್ರಾಚೀನ, ಮಧು ಸೇರಿದಂತೆ ಇತರರು ಇದ್ದರು.