ಕನ್ನಡಪ್ರಭ ವಾರ್ತೆ ಹಾವೇರಿ
ಆಕರ್ಷಕ ಜಾಹೀರಾತಿಗೆ ಮರುಳಾಗಿ ಖರೀದಿಯಲ್ಲಿ ಮೋಸ ಹೋಗಬಾರದು. ಆನ್ಲೈನ್ ಖರೀದಿಯಲ್ಲಾಗಲಿ ಹಾಗೂ ನೇರವಾಗಿ ನೀವೇ ವಸ್ತುಗಳ ಖರೀದಿಯ ಸಂದರ್ಭದಲ್ಲಿ ಸೇವಾ ನ್ಯೂನತೆ ಅಥವಾ ಮೋಸವಾದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಟ್ಟರಾಜು ಹೇಳಿದರು.ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಚೈತನ್ಯ ಸಂಸ್ಥೆಯ ಜಿಲ್ಲಾ ಮಾಹಿತಿ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ನ್ಯಾಯವಾದಿಗಳ ಸಂಘ, ಅಭಿಯೋಜನಾ ಇಲಾಖೆ, ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿ ಸಹಯೋಗದಲ್ಲಿ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಯಾವುದೇ ವಸ್ತು ಖರೀದಿ ಮಾಡಿದರೂ ಕಡ್ಡಾಯವಾಗಿ ರಶೀದಿಯನ್ನು ಕೇಳಿ ಪಡೆಯುವಂತೆ ಸಲಹೆ ನೀಡಿದರು.
ದೈನಂದಿನ ವ್ಯವಹಾರದಲ್ಲಿ ಗ್ರಾಹಕನು ಒಂದಿಲ್ಲೊಂದು ಸಂದರ್ಭದಲ್ಲಿ ವಂಚನೆಗೆ ಒಳಗಾಗುತ್ತಾನೆ. ಗ್ರಾಹಕನು ಖರೀದಿಸಿದ ವಸ್ತು ಅಥವಾ ಸೇವೆಯಲ್ಲಿ ಲೋಪಕಂಡುಬಂದಲ್ಲಿ ಅಥವಾ ಗುಣಮಟ್ಟದ ಕೊರತೆ, ತೂಕ, ಅಳತೆಯಲ್ಲಿ ಮೋಸವಾದರೆ ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದೂರು ಸಲ್ಲಿದಾಗ ನ್ಯಾಯ ಪಡೆಯಬಹುದು ಎಂದರು.ಆಕರ್ಷಕ ಜಾಹೀರಾತುಗಳಿಗೆ ಮರುಳಾಗದೇ ವಸ್ತುಗಳ ಮೌಲ್ಯವನ್ನು ತಿಳಿದುಕೊಂಡು ಖರೀದಿಸಬೇಕು. ಇಂದು ಆನ್ಲೈನ್ ಖರೀದಿ ಹೆಚ್ಚಾಗಿದ್ದು, ಆನ್ಲೈನ್ ಸೇವೆಯಲ್ಲಿ ಹೆಚ್ಚಾಗಿ ಮೋಸವಾಗುತ್ತಿರುವುದು ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ನಿರ್ಲಕ್ಷ್ಯವಹಿಸದೇ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದೂರು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳು ಜಾಗೃತರಾಗಬೇಕು ಹಾಗೂ ಇತರರಿಗೂ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಈಶ್ವರಪ್ಪ ಬಿ.ಎಸ್. ಮಾತನಾಡಿ, ಒಂದು ವಸ್ತು ಅಥವಾ ಸೇವೆಯನ್ನು ಹಣ ಕೊಟ್ಟು ಪಡೆಯುವ ಪ್ರತಿಯೊಬ್ಬರೂ ಗ್ರಾಹಕರಾಗಿರುತ್ತಾರೆ. ವಸ್ತುಗಳನ್ನು ಖರೀದಿಸುವಾಗ ಆತುರ ಮಾಡದೇ ಯೋಚನೆಮಾಡಿ ಖರೀದಿಸಿ, ಐಎಸ್ಐ ಮಾರ್ಕ್ ಇರುವ ವಸ್ತುಗಳನ್ನು ಖರೀದಿಸಬೇಕು. ಹಾಲ್ ಮಾರ್ಕ್ ಇರುವ ಚಿನ್ನವನ್ನು ಖರೀದಿಸಬೇಕು ಎಂದು ಸಲಹೆ ನೀಡಿದರು.ವಿದ್ಯಾರ್ಥಿಗಳು ಹೆಚ್ಚಾಗಿ ಆನ್ಲೈನ್ ಖರೀದಿಗೆ ಮೊರೆಹೋಗುತ್ತಿದ್ದು, ಆನ್ಲೈನ್ ಸೇವೆಯಲ್ಲಿ ಲೋಪಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ವಹಿಸದೇ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ಖರೀದಿಸಿ ವಸ್ತುಗಳ ರಸೀದಿ, ವಾರಂಟಿ ಹಾಗೂ ಗ್ಯಾರಂಟಿ ದಾಖಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಅಂದಾಗ ಮಾತ್ರ ಮಾರಾಟಗಾರರ ವಿರುದ್ಧ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಲು ಸಾಧ್ಯ ಎಂದು ಹೇಳಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಸಕ್ತ ಸಾಲಿನಲ್ಲಿ ಈವರೆಗೆ ೧೬೦ ಪ್ರಕರಣಗಳು ದಾಖಲಾಗಿದ್ದು, ೧೪೦ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಕಳೆದ ಎರಡು ವರ್ಷದಲ್ಲಿ ರು.೨.೩೦ ಕೋಟಿಗೂ ಅಧಿಕ ಪರಿಹಾರ ಮೊತ್ತವನ್ನು ಗ್ರಾಹಕರಿಗೆ ಕೊಡಿಸಲಾಗಿದೆ ಎಂದು ಹೇಳಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನಲ್ ವಕೀಲ ಎನ್.ಎನ್.ಡಿಳ್ಳೆಪ್ಪನವರ ಉಪನ್ಯಾಸ ನೀಡಿ, ದೈನಂದಿನ ವ್ಯವಹಾರದಲ್ಲಿ ಖರೀದಿಸಿದ ವಸ್ತುಗಳಲ್ಲಿ ನ್ಯೂನತೆ ಅಥವಾ ದೋಷಗಳು ಕಂಡುಬಂದಲ್ಲಿ ಖರೀದಿಸಿದ ರಸೀದಿಯೊಂದಿಗೆ ಖುದ್ದಾಗಿ ಅಥವಾ ಆನ್ಲೈನ್ ಮೂಲಕ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರನ್ನು ಸಲ್ಲಿಸುವ ಮೂಲಕ ಪರಿಹಾರವನ್ನು ಪಡೆಯಬಹುದು ಎಂದು ಮಾಹಿತಿ ನೀಡಿದರು.
ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ಜಗದೀಶ ಕೋರಿ ಹಾಗೂ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್. ಜತ್ತಿ ಮಾತನಾಡಿದರು. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಉಮಾದೇವಿ ಹಿರೇಮಠ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ಚೈತನ್ಯ ರೂರಲ್ ಡೆವಲ್ಮೆಂಟ್ ಸೊಸೈಟಿ ನಿರ್ದೇಶಕ ಎಸ್.ಎಚ್. ಮಜೀದ್ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಡಿ.ಆರ್. ಚೌಗಲಾ ಉಪಸ್ಥಿತರಿದ್ದರು.ಆಹಾರ ಮತ್ತು ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಎಂ.ಎಸ್. ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.